ಬ್ಯಾಂಕಾಕ್, ಆಗಸ್ಟ್ 07: ಥೈಲ್ಯಾಂಡ್ನ ರಾಜಧಾನಿ ಬ್ಯಾಂಕಾಕ್ ಬಳಿಯ ಪ್ರಸಿದ್ಧ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಸಹಪಾಠಿಗಳು ಹಾಗೂ ಶಿಕ್ಷಕರ ಮೇಲೆ ದಿಢೀರ್ ಗುಂಡಿನ ದಾಳಿ(Firing) ನಡೆಸಿದ್ದಾನೆ. ಈ ದಾರುಣ ಘಟನೆಯಲ್ಲಿ ಓರ್ವ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದು, ಕನಿಷ್ಠ 15 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ದಾಳಿ ನಡೆಸಿದ ವಿದ್ಯಾರ್ಥಿಯು ಕೃತ್ಯದ ಬೆನ್ನಲ್ಲೇ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ಪೊಲೀಸರು ದೃಢಪಡಿಸಿದ್ದಾರೆ.
ಬ್ಯಾಂಕಾಕ್ ಸಮೀಪದ ನೊಂಥಬುರಿಯ ಬ್ಯಾಂಗ್ ಕ್ರುವಾಯಿ ಜಿಲ್ಲೆಯಲ್ಲಿರುವ ದೇಬ್ಸಿರಿನ್ ನೊಂಥಬುರಿ ಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ ತರಗತಿಗಳು ಆರಂಭವಾಗುವ ವೇಳೆಗೆ ಈ ಭೀಕರ ಘಟನೆ ನಡೆದಿದೆ. 9ನೇ ತರಗತಿಯ ವಿದ್ಯಾರ್ಥಿ ಬಂದೂಕಿನೊಂದಿಗೆ ಶಾಲೆಗೆ ಆಗಮಿಸಿ ದಿಢೀರನೆ ಗುಂಡಿನ ಸುರಿಮಳೆ ಗೈದಿದ್ದಾನೆ. ಗುಂಡೇಟಿನಿಂದ ಶಿಕ್ಷಕರೊಬ್ಬರು ಕೊನೆಯುಸಿರೆಳೆದಿದ್ದು, ಗಾಯಗೊಂಡ 15 ಜನರಲ್ಲಿ ಮೂವರು ವಿದ್ಯಾರ್ಥಿಗಳ ಪರಿಸ್ಥಿತಿ ಗಂಭೀರವಾಗಿದೆ.
ಆತ್ಮಹತ್ಯೆ ಮಾಡಿಕೊಂಡ ದಾಳಿಕೋರ: ಘಟನೆಯ ಬಳಿಕ ಭದ್ರತಾ ಪಡೆಗಳು ಶಾಲೆಯನ್ನು ಸುತ್ತುವರೆಯುತ್ತಿದ್ದಂತೆ, ದಾಳಿಕೋರ ವಿದ್ಯಾರ್ಥಿಯು ಶಾಲಾ ಆವರಣದಲ್ಲೇ ತನ್ನ ಮೇಲೆ ಗುಂಡು ಹಾರಿಸಿಕೊಂಡು ಶವವಾಗಿದ್ದಾನೆ. ಪ್ಲೈ ಬ್ಯಾಂಗ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ತಕ್ಷಣವೇ ಶಾಲಾ ಕ್ಯಾಂಪಸ್ಗೆ ಧಾವಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮತ್ತಷ್ಟು ಓದಿ: Video: ಎಎಪಿ ನಾಯಕನ ಮೇಲೆ ಗುಂಡಿನ ದಾಳಿ, ಹಾಡಹಗಲೇ ನಡೆಯಿತು ಕೊಲೆ
ಶಾಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಮತ್ತು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರು ಹಾಗೂ ಮಾಧ್ಯಮಗಳು ಘಟನೆಯ ದೃಶ್ಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೇರ ಪ್ರಸಾರ ಮಾಡದಂತೆ ಪೊಲೀಸರು ಮನವಿ ಮಾಡಿದ್ದಾರೆ.
ಕಿರಿಯ ವಯಸ್ಸಿನ ವಿದ್ಯಾರ್ಥಿ ಬಂದೂಕನ್ನು ಹೇಗೆ ಪಡೆದುಕೊಂಡ ಮತ್ತು ದಾಳಿ ನಡೆಸಲು ಇದ್ದ ಮಾನಸಿಕ ಅಥವಾ ವೈಯಕ್ತಿಕ ಉದ್ದೇಶವೇನು ಎಂಬ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಗ್ನೇಯ ಏಷ್ಯಾದ ದೇಶಗಳ ಪೈಕಿ ಥೈಲ್ಯಾಂಡ್ನಲ್ಲಿ ಸಾರ್ವಜನಿಕರಲ್ಲಿ ಬಂದೂಕು ಹೊಂದುವ ಪ್ರಮಾಣ ಹೆಚ್ಚಾಗಿದೆ. ಕಾನೂನುಬದ್ಧ ಹಾಗೂ ಅಕ್ರಮ ಬಂದೂಕುಗಳು ಸುಲಭವಾಗಿ ಸಿಗುವುದೇ ಇಂತಹ ದುರಂತಗಳಿಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಪೋಸ್ಟ್
Photos and vid via ศิรินทร์ สามสอง ดับเพลิงและกู้ภัย#Thailand #โรงเรียนเทพศิรินทร์นนทบุรี pic.twitter.com/hovY9hYbxM
— Thai Enquirer (@ThaiEnquirer) August 7, 2026
2022 ರಲ್ಲಿ ಥೈಲ್ಯಾಂಡ್ನ ಮಕ್ಕಳ ಆರೈಕೆ ಕೇಂದ್ರವೊಂದರಲ್ಲಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬ ನಡೆಸಿದ ಮಾರಣಾಂತಿಕ ದಾಳಿಯಲ್ಲಿ 24ಮಕ್ಕಳು ಸೇರಿದಂತೆ 36 ಜನರು ಮೃತಪಟ್ಟಿದ್ದರು. ಆ ಘಟನೆಯ ನಂತರ ಬಂದೂಕು ಕಾಯ್ದೆಯನ್ನು ಕಠಿಣಗೊಳಿಸಲಾಗಿದ್ದರೂ, ಶಾಲಾ ಮಟ್ಟದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿರುವುದು ದೇಶಾದ್ಯಂತ ಭಾರಿ ಆತಂಕ ಮೂಡಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ