ಹಂಸಲೇಖ (Hamsalekha), ಕನ್ನಡ ಚಿತ್ರರಂಗದ ಲಿಜೆಂಡರಿ ಸಂಗೀತ ನಿರ್ದೇಶಖ ಮತ್ತು ಗೀತ ಸಾಹಿತಿ. ಕನ್ನಡಕ್ಕೆ ಸಾವಿರಾರು ಅತ್ಯದ್ಭುತ ಹಾಡುಗಳನ್ನು ನೀಡಿದ್ದಾರೆ. ಈಗಲೂ ಚಿತ್ರರಂಗದಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಈ ಲಿಜೆಂಡರಿ ಸಂಗೀತ ನಿರ್ದೇಶಕರಿಗೆ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿಯನ್ನು ಕೊಡಬೇಕು ಎಂದು ಇತ್ತೀಚೆಗಷ್ಟೆ ಅಭಿಯಾನವೊಂದು ಆರಂಭವಾಗಿತ್ತು, ಅಭಿಯಾನ ಆರಂಭಿಸಿದವರು ನಟ ನೆನಪಿರಲಿ ಪ್ರೇಮ್. ಆದರೆ ಇದೀಗ ಖುದ್ದು ಹಂಸಲೇಖ ಅವರೇ ಅಭಿಯಾನ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಹಂಸಲೇಖ ಅವರು, ‘ಕನ್ನಡದಾಣೆ, ಇದಕ್ಕೆ (ಅಭಿಯಾನ) ನನ್ನ ಒಪ್ಪಿಗೆ ಇಲ್ಲ ಇದೊಂದು ಅನಗತ್ಯವಾದ ಅಭಿಮಾನದ ದುಡುಕು ಮತ್ತು ಪ್ರೀತಿಯ ತೊಂದರೆ. ಸೀನ್ಗೂ, ಟ್ಯೂನ್ಗೂ, ಲಿರಿಕ್ಸ್ಗೂ ಹೊಂದಾಣಿಕೆಯೇ ಇಲ್ಲ. ಫ್ಲಾಫ್ ಸಾಂಗಿದು, ದಯವಿಟ್ಟು ನಿಲ್ಲಿಸಿ, ನೆನಪಿರಲಿ, ಪ್ರೀತಿಯ ಪ್ರೇಮ್’ ಎಂದು ಹಂಸಲೇಖ ಹೇಳಿದ್ದಾರೆ.
‘ಕನ್ನಡ ನಮ್ಮ ಹಕ್ಕಿನ ಭಾಷೆ, ಈ ಸತ್ಯವನ್ನು ಪ್ರತಿದಿನವೂ ಸಾಬೀತು ಪಡಿಸಬೇಕಾದ ಸಮಯದಲ್ಲಿದ್ದೇವೆ. ಅದಕ್ಕೆ ಬೇಕಾಗಿರುವುದು ಅಭಿಮಾನದ ಅಭಿಯಾನಗಳು’ ಎಂದು ಹಂಸಲೇಖ ಹೇಳಿದ್ದಾರೆ. ಆ ಮೂಲಕ ತಮಗೆ ಪ್ರಶಸ್ತಿ, ಗೌರವಗಳ ಅಗತ್ಯವಿಲ್ಲ ಎಂದಿದ್ದಾರೆ. ಜೊತೆಗೆ ಕೂಡಲೇ ಈ ಅಭಿಯಾನವನ್ನು ನಿಲ್ಲಿಸಿ ಎಂದು ಮನವಿಯನ್ನು ಸಹ ಹಂಸಲೇಖ ಮಾಡಿದ್ದಾರೆ.
ಇದನ್ನೂ ಓದಿ:ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ನೀಡಿ: ಹಂಸಲೇಖ ಪರ ನಟ ಪ್ರೇಮ್ ಅಭಿಯಾನ
ಹಂಸಲೆಖ ಅವರು ಅರ್ಥ ಶತಮಾನಕ್ಕೂ ಹೆಚ್ಚು ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರಷ್ಟು ಯಶಸ್ವಿ ಸಂಗೀತ ನಿರ್ದೇಶಕ ಮತ್ತು ಚಿತ್ರ ಸಾಹಿತಿಯನ್ನು ಕನ್ನಡ ಚಿತ್ರರಂಗ ಈ ವರೆಗೆ ನೋಡಿಲ್ಲ. ಕನ್ನಡಕ್ಕೆ ಹಲವಾರು ಅತ್ಯದ್ಭುತ ಹಾಡುಗಳನ್ನು ಹಂಸಲೇಖ ನೀಡಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಸಿನಿಮಾಗಳಿಗೂ ಸಹ ಅವರು ಸಂಗೀತ ನೀಡಿದ್ದಾರೆ. ಆದರೂ ಸಹ ಅವರಿಗೆ ಯಾವುದೇ ಕೇಂದ್ರ ಸರ್ಕಾರದ ನಾಗರೀಕ ಪ್ರಶಸ್ತಿಗಳು ಲಭಿಸಿಲ್ಲ. ಹಂಸಲೇಖ ಅವರಿಗೆ ನಾಗರೀಕ ಪ್ರಶಸ್ತಿ ಕೊಡಬೇಕೆಂದು ನಟ ನೆನಪಿರಲಿ ಪ್ರೇಮ್ ಅಭಿಯಾನ ಆರಂಭಿಸಿದ್ದರು. ಆದರೆ ಖುದ್ದು ಹಂಸಲೇಖ ಅವರೇ ಅಭಿಯಾನವನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ