Headlines

ದರ್ಶನ್ ಸಲ್ಲಿಸಿದ್ದ ಅರ್ಜಿ ವಜಾ, ಇಂದೇ ಬಿಡುಗಡೆ ಆಗಲಿದೆ ‘ಬಾಸ್’ ಸಿನಿಮಾ – Kannada News | High Court Clears Legal Hurdles, Darshan’s Plea Dismissed BOSS Kannada Film releasing

ಕನ್ನಡದ ‘ಬಾಸ್’ (Boss) ಸಿನಿಮಾ ಬಿಡುಗಡೆ ತಡೆ ಕೋರಿ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಆ ಮೂಲಕ ಸಿನಿಮಾದ ಬಿಡುಗಡೆ ಇದ್ದ ಅಡೆ-ತಡೆಗಳು ನಿವಾರಣೆ ಆದಂತಾಗಿದ್ದು, ಇಂದೇ (ಜುಲೈ 17) ಸಿನಿಮಾ ಅನ್ನು ರಾಜ್ಯದಾದ್ಯಂತ ಬಿಡುಗಡೆ ಮಾಡುತ್ತಿದೆ ಚಿತ್ರತಂಡ. ಈ ಕುರಿತು ತುರ್ತು ಪತ್ರಿಕಾ ಹೇಳಿಕೆ ಹೊರಡಿಸಿ ಚಿತ್ರತಂಡ ಪ್ರಕಟಣೆ ಮಾಡಿದೆ. ಸುಮಾರು ಒಂದೂವರೆ ತಿಂಗಳಿನಿಂದಲೂ ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ನಡೆದಿದ್ದ ಹೊರಾಟದಲ್ಲಿ ಕೊನೆಗೆ ಚಿತ್ರತಂಡಕ್ಕೆ ಗೆಲುವಾಗಿದೆ.

‘ಬಾಸ್’ ಸಿನಿಮಾದ ನಾಯಕ ನಟ ಹಾಗೂ ನಿರ್ಮಾಪಕರಾದ ತನುಷ್ ಶಿವಣ್ಣ ಮತ್ತು ನಿರ್ದೇಶಕರಾದ ಲವಾ ವಿ ಸಂತೋಷ ಹರ್ಷ ವ್ಯಕ್ತಪಡಿಸಿದ್ದು, ನಮ್ಮ ಸಿನಿಮಾ ಇಂದೇ (ಜುಲೈ 17) ಬಿಡುಗಡೆ ಆಗಲಿದೆ. ಇಂದು ಸಂಜೆಯಿಂದಲೇ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮಾಡಲಾಗುವುದು ಎಂದಿದ್ದಾರೆ. ನಿರ್ಮಾಪಕ ತನುಷ್ ಶಿವಣ್ಣ ಮಾತನಾಡಿ, “ನಮ್ಮ ಚಿತ್ರದ ಮೇಲೆ ನಂಬಿಕೆ ಇಟ್ಟು ಬೆಂಬಲಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ನ್ಯಾಯದ ಗೆಲುವಿನೊಂದಿಗೆ ‘ಬಾಸ್’ ಇಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಪ್ರೇಕ್ಷಕರು ಚಿತ್ರವನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ,” ಎಂದಿದ್ದಾರೆ.

‘ಬಾಸ್’ ಸಿನಿಮಾ, ನಟ ದರ್ಶನ್ ಮತ್ತು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಕುರಿತಾದ ಕತೆ ಹೊಂದಿದೆ ಹಾಗಾಗಿ ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕು ಎಂದು ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಚಿತ್ರತಂಡವು ಇದನ್ನು ತಳ್ಳಿ ಹಾಕಿದ್ದು, ‘ಬಾಸ್’ ಸಿನಿಮಾ ದರ್ಶನ್ ಹಾಗೂ ಅವರ ಜೀವನ ಕುರಿತಾದ ಸಿನಿಮಾ ಅಲ್ಲ. ಇದೊಂದು ಕಾಲ್ಪನಿಕ ಕತೆ ಎಂದೇ ವಾದಿಸುತ್ತಾ ಬಂದಿತ್ತು. ನ್ಯಾಯಾಲಯದಲ್ಲಿಯೂ ಸಹ ಚಿತ್ರತಂಡ ಇದೇ ವಾದವನ್ನು ಮಾಡಿತು. ಕೊನೆಗೂ ಈಗ ‘ಬಾಸ್’ ಸಿನಿಮಾಕ್ಕೆ ಜಯವಾಗಿದೆ.

ಇದನ್ನೂ ಓದಿ:‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’; ಯುವ ರೈತ ಚೇತನ್

ಕೆಲ ತಿಂಗಳ ಹಿಂದೆ ‘ಬಾಸ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿತ್ತು. ಟ್ರೈಲರ್ ನೋಡಿದ ಪ್ರತಿಯೊಬ್ಬರು ಇದು ರೇಣುಕಾ ಸ್ವಾಮಿ ಕೊಲೆ ಪ್ರಕರಣ ಆಧರಿಸಿದ ಸಿನಿಮಾ ಎಂದಿದ್ದರು. ಟ್ರೈಲರ್​​ನಲ್ಲಿ, ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಹೋಲಿಕೆ ಆಗುವ ಸಾಕಷ್ಟು ಅಂಶಗಳು ಇದ್ದವು. ಸ್ಟಾರ್ ನಟ, ಆತನ ಪತ್ನಿ, ಅಕ್ರಮ ಸಂಬಂಧ, ಕೊಲೆ, ಮೋರಿ, ಗಾಡಿಗಳ ಶೆಡ್ಡು, ಲಾರಿಯ ಮುಂದೆ ನಿಂತು ಬೇಡಿಕೊಳ್ಳುವ ವ್ಯಕ್ತಿ, ಆತನ ಕೊಲೆ, ಕೊಲೆ ಮುಚ್ಚಿಡಲು ಹಣ ಕೊಟ್ಟು ಖರೀದಸಲಾಗುವ ಯುವಕರು, ಖಡಕ್ ಪೊಲೀಸ್ ಅಧಿಕಾರಿ ಎಲ್ಲವೂ ಇದ್ದವು. ಇದೇ ಕಾರಣಕ್ಕೆ ದರ್ಶನ್ ಮತ್ತು ಅವರ ಪತ್ನಿ ಸಿನಿಮಾದ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಆದರೆ ಕೊನೆಗೆ ಚಿತ್ರತಂಡಕ್ಕೆ ಜಯ ದೊರೆತಿದ್ದು, ಸಿನಿಮಾ ಬಿಡುಗಡೆಗೆ ನ್ಯಾಯಾಲಯವು ಅಸ್ತು ಎಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 1:07 pm, Fri, 17 July 26

Source link

Leave a Reply

Your email address will not be published. Required fields are marked *