
ದಾವಣಗೆರೆ, ಮಾರ್ಚ್ 30): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣಾ (Davanagere South By Election) ಪ್ರಚಾರ ಜೋರಾಗಿದೆ. ಆದರೆ ಕಾಂಗ್ರೆಸ್ಗೆ ಅಲ್ಪಸಂಖ್ಯಾತ ಸಮುದಾಯದ ಮತ ವಿಭಜನೆಯಾಗುವ ಆತಂಕ ಎದುರಾಗಿದೆ. ಹೀಗಾಗಿ ಸಾಧಿಕ್ ಪೈಲ್ವಾನ್ ಬಳಿಕ ಕಣದಲ್ಲಿರುವ ಮತ್ತೋರ್ವ ಮುಸ್ಲಿಂ ಪಕ್ಷೇತರ ಅಭ್ಯರ್ಥಿ ಖಾದರ್ ಬಾಷಾ ಮನವೊಲಿಕೆಗೆ ಕಾಂಗ್ರೆಸ್ ಮುಂದಾಗಿದೆ. ಮುಸ್ಲಿಂ ಸಮುದಾಯದ ಹಿರಿಯ ನಾಯಕ ಸಿಎಂ ಇಬ್ರಾಹಿಂ ಪ್ರಚಾರಕ್ಕಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡು ಕಾಂಗ್ರೆಸ್ ನಾಯಕರು ಖಾದರ್ ಬಾಷಾ ಅವರನ್ನು ಸೈಲೆಂಟ್ ಮಾಡಿಸಲು ಮುಂದಾಗಿದ್ದಾರೆ. ಆದ್ರೆ, ಇದಕ್ಕೆ ಖಾದರ್ ಬಾಷಾ ಕ್ಯಾರೇ ಎಂದಿಲ್ಲ.
ಮತ ವಿಭಜನೆ ಆತಂಕದಲ್ಲಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಭದ್ರಾವತಿ ಶಾಸಕ ಸಂಗಮೇಶ್ (MLA Sangamesh) ಅವರು ಖಾದರ್ ಆದಿಲ್ ಬಾಷಾ ಅವರು ದಾವಣಗೆರೆ ದೇವರಾಜ ಅರಸು ಬಡಾವಣೆಯ ಆದಿಲ್ ಅವರ ಮನೆಗೆ ಭೇಟಿ ನೀಡಿದ್ದು, ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿ ಮನವೊಲಿಕೆಗೆ ಯತ್ನಿಸಿದ್ದಾರೆ.
ಇದನ್ನೂ ನೋಡಿ: ಜಿಎಂ ಸಿದ್ದೇಶ್ವರ್, ರೇಣುಕಾಚಾರ್ಯರನ್ನು ಒಗ್ಗೂಡಿಸಿದ ವಿಜಯೇಂದ್ರ: ದಾವಣಗೆರೆಯಲ್ಲಿ ಮ್ಯಾಜಿಕ್ ಆಗುತ್ತಾ?
ಭೇಟಿ ಬಳಿಕ ಶಾಸಕ ಸಂಗಮೇಶ್ ಹೇಳಿದ್ದೇನು?
ಖಾದರ್ ಬಾಷಾ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಭದ್ರಾವತಿ ಶಾಸಕ ಸಂಗಮೇಶ್ . ಪಕ್ಷೇತರ ಅಭ್ಯರ್ಥಿ ಖಾದರ್ ಆದಿಲ್ ಬಾಷಾ ನನಗೆ ಆತ್ಮೀಯ. ಇದೇ ಕಾರಣಕ್ಕೆ ಖಾದರ್ ಆದಿಲ್ ಬಾಷಾ ಮನೆಗೆ ಬಂದಿರುವೆ. ಪಕ್ಷದ ವರಿಷ್ಠರು, ಸಚಿವ ಮಲ್ಲಿಕಾರ್ಜುನ ಸೂಚನೆಯಂತೆ ಬಂದಿದ್ದೇನೆ. ಖಾದರ್ ಬಾಷಾ ಪರ ಪ್ರಚಾರ ನಡೆಸಿರುವ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ನನ್ನ ಎದುರು ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದರು. ಅಂತಹ ವ್ಯಕ್ತಿ ಬಂದು ಇಲ್ಲಿ ಖಾದರ್ ಬಾಷಾರನ್ನು ಹೇಗೆ ಗೆಲ್ಲಿಸಲು ಸಾಧ್ಯ? ಕೇವಲ ಭಾಷಣ ಮಾಡಿದ್ರೆ ಮತ ಬರಲ್ಲ. ಮತ ವಿಭಜನೆ ಆಗಬಾರದು. ಕೋಮುವಾದಿ ಶಕ್ತಿಗಳಿಗೆ ಲಾಭ ಆಗಬಾರದು ಎಂಬುದು ನಮ್ಮ ಉದ್ದೇಶ. ಇನ್ನೆರಡು ದಿನದಲ್ಲಿ ನಿರ್ಧಾರ ತಿಳಿಸುವುದಾಗಿ ಖಾದರ್ ಬಾಷಾ ಹೇಳಿದ್ದಾರೆ ಎಂದರು.
ನಾನಂತೂ ಚುನಾವಣಾ ಕಣದಲ್ಲೇ ಇರುವೆ
ಇನ್ನು ತಮ್ಮ ನಿವಾಸಕ್ಕೆ ಶಾಸಕ ಸಂಗಮೇಶ್ ಭೇಟಿ ನೀಡಿರುವ ಬಗ್ಗೆ ಮಾತನಾಡಿದ ಖಾದರ್ ಆದಿಲ್ ಬಾಷಾ,
ನಾನು ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವುದಿಲ್ಲ. ನಾನು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ನನ್ನ ಪರ ಕೇಂದ್ರದ ಮಾಜಿ ಸಚಿವ ಇಬ್ರಾಹಿಂ ಪ್ರಚಾರ ಮಾಡುತ್ತಿದ್ದಾರೆ. ಶಾಸಕ ಸಂಗಮೇಶ್ ನನ್ನ ಆತ್ಮೀಯರು, ಹೀಗಾಗಿ ಭೇಟಿಯಾಗಿದ್ದರು. ನಾನಂತೂ ಚುನಾವಣಾ ಕಣದಲ್ಲೇ ಇರುವೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಕಾಂಗ್ರೆಸ್ಗೆ ಮತ ವಿಭಜನೆ ಆತಂಕ
ಕಳೆದ ನಾಲ್ಕೈದು ದಿನಗಳಿಂದ ಸಿಎಂ ಇಬ್ರಾಹಿಂ, ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ದಲಿತ ನಾಯಕರ ಜೊತೆಗೂಡಿ ಆದಿಲ್ ಪ್ರಚಾರ ನಡೆಸಿದ್ದಾರೆ. ಇದೇ ಹೊತ್ತಲ್ಲಿ ಸಾದಿಕ್ ಪೈಲ್ವಾನ್ ಅವರಿಗೆ ಬೆಂಬಲ ನೀಡಿದ್ದ ಬಹುತೇಕ ಅಲ್ಪಸಂಖ್ಯಾತ ಯುವಕರು, ನಾಯಕರು ಆದಿಲ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇದೇ ಕಾರಣಕ್ಕೆ ಸಾದಿಕ್ ಪೈಲ್ವಾನ್ ನಂತರ ಕಾಂಗ್ರೆಸ್ಗೆ ಆದಿಲ್ ಬಾಷಾ ತಲೆನೋವಾಗಿದ್ದಾರೆ. ಮತ ವಿಭಜನೆ ಆತಂಕದಿಂದ ಎಚ್ಚೆತ್ತ ಕಾಂಗ್ರೆಸ್ ಮನವೊಲಿಕೆಗೆ ಕಸರತ್ತು ನಡೆಸುತ್ತಿದೆ. ಆದ್ರೆ, ಇದಕ್ಕೆ ಖಾದರ್ ಆದಿಲ್ ಬಾಷಾ ಡೋಂಡ್ ಕೇರ್ ಎಂದಿದ್ದು, ಕೊನೆ ತನಕ ಕಣದಲ್ಲಿ ಇರುವೆ ಎಂದಿದ್ದಾರೆ.
ಸದ್ಯ ಮುಸ್ಲಿಂ ಪಕ್ಷೇತರ ಅಭ್ಯರ್ಥಿ ಖಾದ್ ಬಾಷಾ ಅವರು ಕಣದಲ್ಲಿರುವುದಾಗಿ ಕಡ್ಡಿ ಮುರಿದಂತೆ ಹೇಳಿದ್ದು, ಸದ್ಯಕ್ಕೆ ಕಾಂಗ್ರೆಸ್ನ ಆಪರೇಷನ್ ಮುಸ್ಲಿಂ ಕ್ಯಾಂಡಿಡೇಟ್ ಕಾರ್ಯಚರಣೆ ಫೇಲ್ ಆಗಿದೆ. ಆದ್ರೆ, ಮುಂದೆ ಏನಾಗುತ್ತೋ ಕಾದುನೋಡಬೇಕಿದೆ.