Headlines

ದೆಹಲಿಯ ಗೋದಾಮಿನಲ್ಲಿ ಅಗ್ನಿ ದುರಂತ, ಪಕ್ಕದ ಗುಡಿಸಲುಗಳಿಗೆ ತಗುಲಿದ ಬೆಂಕಿ, ಒಂದು ಮಗು ಸೇರಿ ಮೂವರು ಸಜೀವದಹನ – Kannada News | Blaze Turns Deadly in Rohini: Three Killed as Fire Sweeps Through Shanties

ನವದೆಹಲಿ, ಏಪ್ರಿಲ್ 15: ದೆಹಲಿಯ ರೋಹಿಣಿ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಭೀಕರ ಅಗ್ನಿ ದುರಂತ(Fire Accident) ಸಂಭವಿಸಿದೆ. ಮಂಗೇರಾಮ್ ಪಾರ್ಕ್‌ನಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ, ಅಲ್ಲಿಯೇ ನಿರ್ಮಿಸಲಾಗಿದ್ದ ಗುಡಿಸಲುಗಳನ್ನು ಆಹುತಿ ಪಡೆದಿದೆ. ಈ ಘೋರ ಘಟನೆಯಲ್ಲಿ ಮಗುವೂ ಸೇರಿದಂತೆ ಒಂದೇ ಕುಟುಂಬದ ಮೂವರು ಸಜೀವ ದಹನವಾಗಿದ್ದಾರೆ.

ಬುದ್ಧ ವಿಹಾರ್ ಬಳಿಯ ಸುಮಾರು 400 ಚದರ ಗಜಗಳಷ್ಟು ವಿಸ್ತೀರ್ಣದ ಜಾಗದಲ್ಲಿ ಈ ಅನಾಹುತ ಸಂಭವಿಸಿದೆ. ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿಡಲಾಗಿತ್ತು ಮತ್ತು ಅದರ ಪಕ್ಕದಲ್ಲೇ ಕಾರ್ಮಿಕರು ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದರು. ಬೆಳಗಿನ ಜಾವ ಸುಮಾರು 1.25 ರ ಸುಮಾರಿಗೆ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಪ್ಲಾಸ್ಟಿಕ್ ವಸ್ತುಗಳಿದ್ದ ಕಾರಣ ಜ್ವಾಲೆಗಳು ಕ್ಷಣಾರ್ಧದಲ್ಲಿ ವ್ಯಾಪಿಸಿ ಇಡೀ ಪ್ರದೇಶವನ್ನು ಆವರಿಸಿಕೊಂಡಿವೆ.

ಕಾರ್ಯಾಚರಣೆಗೆ ಅಡ್ಡಿಯಾದ ಕಿರಿದಾದ ರಸ್ತೆಗಳು
ಬೆಂಕಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಆದರೆ, ಈ ಪ್ರದೇಶದ ರಸ್ತೆಗಳು ಅತ್ಯಂತ ಕಿರಿದಾಗಿದ್ದರಿಂದ ದೊಡ್ಡ ವಾಹನಗಳು ಘಟನಾ ಸ್ಥಳವನ್ನು ತಲುಪಲು ಹರಸಾಹಸ ಪಡಬೇಕಾಯಿತು. ಅಗ್ನಿಶಾಮಕ ಅಧಿಕಾರಿ ಅಜಯ್ ಶರ್ಮಾ ನೇತೃತ್ವದಲ್ಲಿ ದೀರ್ಘಕಾಲದ ಕಾರ್ಯಾಚರಣೆಯ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು. ದುರದೃಷ್ಟವಶಾತ್, ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪುವಷ್ಟರಲ್ಲೇ ಮೂವರು ಪ್ರಾಣ ಕಳೆದುಕೊಂಡಿದ್ದರು.

ಮತ್ತಷ್ಟು ಓದಿ: ದೆಹಲಿಯಲ್ಲಿ ಕಟ್ಟಡಕ್ಕೆ ಬೆಂಕಿ; ಮೂರು ಮಕ್ಕಳು ಸೇರಿ ಆರು ಮಂದಿ ಬಲಿ

ಸಾವನ್ನಪ್ಪಿದವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಅವಶೇಷಗಳಡಿಯಿಂದ ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. “ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಬೆಂಕಿ ಸಂಪೂರ್ಣ ನಿಯಂತ್ರಣದಲ್ಲಿದೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ವಿಪತ್ತು ನಿರ್ವಹಣಾ ತಂಡಗಳು (CATS) ಸ್ಥಳದಲ್ಲಿ ಮೊಕ್ಕಾಂ ಹೂಡಿವೆ.

ರಾಜ್‌ಘಾಟ್ ಬಳಿಯೂ ಬೆಂಕಿ ಅವಘಡ
ದೆಹಲಿಯಲ್ಲಿ ಹೆಚ್ಚುತ್ತಿರುವ ತಾಪಮಾನದ ನಡುವೆ ಅಗ್ನಿ ಅವಘಡಗಳ ಸರಣಿ ಮುಂದುವರೆಯುತ್ತಿದೆ. ಇದೇ ಏಪ್ರಿಲ್ 12 ರಂದು ರಾಜ್‌ಘಾಟ್ ಬಸ್ ಡಿಪೋ ಬಳಿಯ ಪೊದೆಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಒಣಗಿದ ಗಿಡಗಂಟಿಗಳು ಮತ್ತು ಕಸಕ್ಕೆ ಹತ್ತಿದ ಬೆಂಕಿ ವೇಗವಾಗಿ ಹರಡಿ ಆತಂಕ ಮೂಡಿಸಿತ್ತು. ಅಗ್ನಿಶಾಮಕ ದಳದ ಎಡಿಒ ಭೂಪೇಂದ್ರ ಪ್ರಕಾಶ್ ನೇತೃತ್ವದಲ್ಲಿ ಹಲವಾರು ಘಟಕಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದವು. ಅದೃಷ್ಟವಶಾತ್ ಆ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.

ಬೇಸಿಗೆಯ ಆರಂಭದ ದಿನಗಳಲ್ಲಿ ಪ್ಲಾಸ್ಟಿಕ್ ಮತ್ತು ಒಣ ತ್ಯಾಜ್ಯ ಸಂಗ್ರಹಣಾ ಪ್ರದೇಶಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ರೋಹಿಣಿಯ ಈ ಘಟನೆ ರಾಜಧಾನಿಯ ಕೊಳೆಗೇರಿಗಳಲ್ಲಿನ ಸುರಕ್ಷತೆಯ ಬಗ್ಗೆ ಮತ್ತೆ ಪ್ರಶ್ನೆ ಎತ್ತುವಂತೆ ಮಾಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *