ಬೆಂಗಳೂರು, ಜುಲೈ 22: ಮೂಲಭೂತ ಸೌಕರ್ಯಗಳ ಕೊರತೆ ಮತ್ತು ನ್ಯಾಯಾಂಗದಲ್ಲಿನ ಸಮಸ್ಯೆಗಳನ್ನು ವಿರೋಧಿಸಿ ಬೆಂಗಳೂರಿನ ಹೈಕೋರ್ಟ್ ಆವರಣದಲ್ಲಿ ವಕೀಲರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮಾತನಾಡಿ, ವಕೀಲರಿಗೆ ಶೌಚಾಲಯ, ಲಿಫ್ಟ್ ಮತ್ತು ಪಾರ್ಕಿಂಗ್ನಂತಹ ಮೂಲಭೂತ ಸೌಲಭ್ಯಗಳೂ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಇಡೀ ಏಷ್ಯಾದಲ್ಲೇ ಅತಿದೊಡ್ಡ ವಕೀಲರ ಸಂಘಕ್ಕೆ ಕನಿಷ್ಠ ಸೌಲಭ್ಯಗಳಿಗಾಗಿ ಪ್ರತಿಭಟಿಸುವುದು ನಿಜಕ್ಕೂ ಹಾಸ್ಯಾಸ್ಪದ’ ಎಂದು ಸುಬ್ಬಾರೆಡ್ಡಿ ಹೇಳಿದ್ದಾರೆ.
ಮ್ಯಾಜಿಸ್ಟ್ರೇಟ್ ಕೋರ್ಟ್ನ ಏಳು ಅಂತಸ್ತಿನ ಕಟ್ಟಡದಲ್ಲಿ ಕೇವಲ ಒಂದೇ ಲಿಫ್ಟ್ ಇರುವುದರಿಂದ ಹಿರಿಯ ವಕೀಲರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಿವಿಲ್ ಕೋರ್ಟ್ಗಳಲ್ಲಿ 100ರಲ್ಲಿ 25 ನ್ಯಾಯಾಲಯಗಳು ಖಾಲಿ ಇದ್ದು, ಇದರಿಂದ ಉಳಿದ ನ್ಯಾಯಮೂರ್ತಿಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಧಾನ ನ್ಯಾಯಮೂರ್ತಿಗಳಿಗೆ ಈ ಸಮಸ್ಯೆಗಳ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಯಾವುದೇ ಸ್ಪಂದನೆ ದೊರೆತಿಲ್ಲ. ಈ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ವಕೀಲರ ಸಂಘವು ಸರ್ಕಾರ ಮತ್ತು ನ್ಯಾಯಾಂಗ ಇಲಾಖೆಯನ್ನು ಒತ್ತಾಯಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ