Headlines

‘ದ್ರಾವಿಡ’ ರಾಜಕಾರಣದ ‘ಯೂನಿಫಾರ್ಮ್’ ಬದಲಿಸಿದ ವಿಜಯ್ – Kannada News | Why Vijay wore back suit on his oath taking ceremony

ತಮಿಳುನಾಡಿನಲ್ಲಿ ಕಳೆದ 60 ವರ್ಷಗಳಿಂದಲೂ ‘ದ್ರಾವಿಡ’ ರಾಜಕೀಯದ್ದೆ (Politics) ಕಾರುಬಾರು. ಕಳೆದ ಆರು ದಶಕಗಳಲ್ಲಿ ಡಿಎಂಕೆ (ದ್ರಾವಿಡ ಮುನ್ನೇಟ್ರ ಕಳಗಂ) ಮತ್ತು ಎಐಎಡಿಎಂಕೆ (ಆಲ್ ಇಂಡಿಯಾ ಅನ್ನಾ ದ್ರಾವಿಡ ಮುನ್ನೇಟ್ರ ಕಳಗಂ) ಬಿಟ್ಟರೆ ಇನ್ಯಾವ ಪಕ್ಷವೂ ಸಹ ತಮಿಳುನಾಡಿನಲ್ಲಿ ಗೆದ್ದಿರಲಿಲ್ಲ. ಈ 60 ವರ್ಷಗಳ ‘ದ್ರಾವಿಡ’ ರಾಜಕೀಯ ಪ್ರಾಬಲ್ಯವನ್ನು ಮುರಿದಿರುವ ದಳಪತಿ ವಿಜಯ್ (Thalapathy Vijay) ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ವಿಜಯ್, ‘ದ್ರಾವಿಡ’ ರಾಜಕೀಯಕ್ಕೆ ಬ್ರೇಕ್ ಹಾಕಿದ್ದು ಮಾತ್ರವೇ ಅಲ್ಲದೆ, ದಶಕಗಳಿಂದಲೂ ಪಾಲಿಸಿಕೊಂಡು ಬಂದಿದ್ದ ‘ರಾಜಕೀಯ ಸಂಪ್ರದಾಯ’ಗಳನ್ನು ಮುರಿದು, ಬದಲಾವಣೆಗೆ ಮುನ್ನುಡಿ ಹಾಕಿದ್ದಾರೆ.

ಮೊದಲ ಹೆಜ್ಜೆಯಾಗಿ ವಿಜಯ್ ಅವರು ತಮಿಳುನಾಡು ರಾಜಕೀಯದ ‘ಯೂನಿಫಾರ್ಮ್’ ಬದಲಾಯಿಸಿದ್ದಾರೆ. ತಮಿಳುನಾಡಿನ ಬಹುತೇಕ ಎಲ್ಲ ರಾಜಕಾರಣಿಗಳ ಕಾಮನ್ ಉಡುಪು ಬಿಳಿ ಶರ್ಟು, ಬಿಳಿ ಪಂಚೆ. ಈ ಬಿಳಿ ಶರ್ಟು ಮತ್ತು ಪಂಚೆ ತಮಿಳುನಾಡು ರಾಜಕೀಯದ ಯೂನಿಫಾರ್ಮ್ ಆಗಿಬಿಟ್ಟಿತ್ತು. ಆದರೆ ವಿಜಯ್ ಅದನ್ನು ಬದಲಾಯಿಸಿದ್ದಾರೆ. ಅವರು ಸೂಟು-ಬೂಟು ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದು ಮಾತ್ರವೇ ಅಲ್ಲದೆ, ಆ ನಂತರದ ದಿನಗಳಲ್ಲಿಯೂ ಸಹ ಅವರು ಪಂಚೆ, ಬಿಳಿ ಶರ್ಟಿನಿಂದ ದೂರವೇ ಉಳಿದಿದ್ದಾರೆ. ಆ ಮೂಲಕ ತಾವು ತಥಾಕಥಿತ ರಾಜಕಾರಣಿ ಅಲ್ಲವೆಂದೂ, ಸಿದ್ಧ ಹಾದಿಯಲ್ಲಿ ತಾವು ನಡೆಯುವುದಿಲ್ಲವೆಂದು ಸೂಚ್ಯವಾಗಿ ಹೇಳಿದ್ದಾರೆ.

ಇನ್ನು ವಿಜಯ್ ಅವರು ಕಪ್ಪು ಬಣ್ಣದ ಕೋಟನ್ನೇ ಧರಿಸಿದ್ದು ಏಕೆ ಎಂಬುದಕ್ಕೆ ಸ್ಪಷ್ಟ ಕಾರಣವೂ ಇದೆ. ಕಪ್ಪು ಅಶುಭ ಎಂಬುದು ಭಾರತದಾದ್ಯಂತ ಬಹುತೇಕರ ರೂಢಿಗತ ನಂಬಿಕೆ. ವಿಜಯ್ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದು, ಕ್ರೈಸ್ತರಲ್ಲಿ ಸಹ ಕಪ್ಪು ಅಶುಭ ಎಂಬ ನಂಬಿಕೆ ಇದೆ. ಆದರೆ ವಿಜಯ್ ಮಾತ್ರ, ತಮ್ಮ ಜೀವಮಾನದ ಪ್ರಮುಖ ಸಂದರ್ಭದಲ್ಲಿ ಕಪ್ಪು ಬಣ್ಣದ ಕೋಟನ್ನೇ ಧರಿಸಿ ಬಂದಿದ್ದರು. ಅದಕ್ಕೆ ಬಹಳ ಮುಖ್ಯವಾದ ಕಾರಣ ಇದೆ.

ಇದನ್ನೂ ಓದಿ:400 ಜನರಿಗೆ ಚಿನ್ನದ ಉಂಗುರ ಉಡುಗೊರೆ ನೀಡಿದ್ದರು ದಳಪತಿ ವಿಜಯ್

ವಿಜಯ್ ಅವರು ತಮಿಳುನಾಡಿನ ಸಾಮಾಜಿಕ ಸುಧಾರಕ ಪೆರಿಯಾರ್ ಅವರ ಅನುಯಾಯಿ. ಪೆರಿಯಾರ್ ಆದರ್ಶಗಳನ್ನು ತಮ್ಮ ರಾಜಕೀಯ ಪಕ್ಷದ ಸಿದ್ಧಾಂತಗಳನ್ನಾಗಿ ಮಾಡಿಕೊಂಡಿದ್ದಾರೆ. ವಿಜಯ್ ಅವರ ರಾಜಕೀಯ ಸಭೆಗಳಲ್ಲಿ ಅಂಬೇಡ್ಕರ್ ಮತ್ತು ಪೆರಿಯಾರ್ ಚಿತ್ರಗಳು ಎದ್ದು ಕಾಣುತ್ತಿದ್ದವು. ಪೆರಿಯಾರ್ ಅವರ ಆದರ್ಶಗಳ ಪಾಲಕನಾಗಿ ಅವರು ಪ್ರಮಾಣ ವಚನಕ್ಕೆ ಕಪ್ಪು ಉಡುಗೆ ಧರಿಸಿ ಬಂದಿದ್ದರು. ಅಸಮಾನತೆ, ಮೌಢ್ಯದ ವಿರುದ್ಧ ಪ್ರತಿಭಟನೆಗೆ ಕಪ್ಪು ಬಣ್ಣದ ಧಿರಿಸು ತೊಡುವಂತೆ ಪೆರಿಯಾರ್ ಬಹಳ ಹಿಂದೆ ಕರೆ ನೀಡಿದ್ದರು. ಪೆರಿಯಾರ್ ಅನುಯಾಯಿಗಳು ಕಪ್ಪು ಬಣ್ಣದ ಉಡುಪು ಧರಿಸುವುದು ಒಂದು ಚಳುವಳಿಯೇ ಆಗಿತ್ತು. ಹಾಗಾಗಿ ವಿಜಯ್ ಅವರು ತಾವು ಪೆರಿಯಾರ್ ವಾದದ ಪ್ರತಿಪಾದಕ ಎಂದು ಸೂಚಿಸಲು ಕಪ್ಪು ಬಣ್ಣದ ಸೂಟು ಧರಿಸಿ ಬಂದಿದ್ದರು.

ವಿಜಯ್ ಅವರ ‘ಸೂಟು ರಾಜಕಾರಣ’ ಸಾಕಷ್ಟು ಚರ್ಚೆಯನ್ನು ತಮಿಳುನಾಡಿನಲ್ಲಿ ಹುಟ್ಟುಹಾಕಿದೆ. ಉಳ್ಳವರ ಧಿರಿಸಾದ ಸೂಟು ಧರಿಸುವ ಮೂಲಕ ವಿಜಯ್ ತಮಿಳುನಾಡಿನ ಬಡವರು, ಮಧ್ಯಮವರ್ಗದವರೊಂದಿಗೆ ಭಾವನಾತ್ಮಕ ಸಂಬಂಧ ಕಡಿದುಕೊಂಡಿದ್ದಾರೆ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. ಸೂಟು, ಕಾರ್ಪೊರೇಟ್ ಸಂಸ್ಕೃತಿಯನ್ನು ಸೂಚಿಸುತ್ತದೆ, ವಿಜಯ್ ರಾಜ್ಯವನ್ನು ಕಾರ್ಪೊರೇಟ್ ಮಾದರಿಯಲ್ಲಿ ನಡೆಸುವ ಗುರಿ ಹೊಂದಿರಬಹುದು ಎಂಬ ಚರ್ಚೆಯೂ ಚಾಲ್ತಿಯಲ್ಲಿದೆ. ಒಟ್ಟಾರೆ ವಿಜಯ್ ಅವರ ಸೂಟು ತಮಿಳುನಾಡಿನ ಪರಂಪರಾಗತ ರಾಜಕೀಯ ಸಂಸ್ಕೃತಿಯನ್ನು ಮುರಿದಿರುವ ಜೊತೆಗೆ ಸಾಕಷ್ಟು ನಿರೀಕ್ಷೆಗಳನ್ನು ಸಹ ಹುಟ್ಟುಹಾಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *