ಕಲರ್ಸ್ ಕನ್ನಡ ವಾಹಿನಿಯ ‘ನಂದ ಗೋಕುಲ’ ಧಾರಾವಾಹಿ ದಿನದಿಂದ ದಿನಕ್ಕೆ ಭಾರಿ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸದ್ಯ ವಲ್ಲಭ ಮತ್ತು ಅಮೂಲ್ಯ ಬದುಕಿನಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಗಂಡನ ಮೇಲಿನ ಅಪಾರ ಪ್ರೀತಿಗಾಗಿ ಅಮೂಲ್ಯ ಈಗ ಹೆತ್ತ ಕುಟುಂಬದ ವಿರುದ್ಧವೇ ರೆಬೆಲ್ ಆಗಿ ನಿಂತಿದ್ದಾಳೆ.
ಜೈಲು ಪಾಲಾದ ವಲ್ಲಭ: ಸುಳ್ಳು ಕೇಸ್ನಲ್ಲಿ ಸಿಲುಕಿದ ಗಂಡ!
ಧಾರಾವಾಹಿಯ ಕಥೆಯ ಪ್ರಕಾರ, ವಲ್ಲಭ ಜೀವನ ನಡೆಸಲು ಬಾಡಿಗೆ ಕಾರು ಓಡಿಸುತ್ತಿರುತ್ತಾನೆ. ಆದರೆ, ಆತನ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದ ಹುಡುಗಿಯೊಬ್ಬಳು ಹಠಾತ್ತನೆ ಕಿಡ್ನ್ಯಾಪ್ ಆಗುತ್ತಾಳೆ. ಈ ಅಪಹರಣದ ಹಿಂದೆ ವಲ್ಲಭನ ಕೈವಾಡವಿದೆ ಎಂದು ಆರೋಪಿಸಿ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟುತ್ತಾರೆ. ವಲ್ಲಭ ಯಾವುದೇ ತಪ್ಪು ಮಾಡದಿದ್ದರೂ ಈ ದೊಡ್ಡ ಸಂಚಿನಲ್ಲಿ ಸಿಲುಕಿ ನಲುಗುವಂತಾಗಿದೆ.
ಅಮೂಲ್ಯ ಕುಟುಂಬದ ಕ್ರೌರ್ಯ: ಹೆಚ್ಚಿದ ದ್ವೇಷ
ಮತ್ತೊಂದೆಡೆ, ವಲ್ಲಭನನ್ನು ಮದುವೆಯಾಗಿದ್ದಾನೆ ಎಂಬ ಕಾರಣಕ್ಕೆ ಅಮೂಲ್ಯ ಕುಟುಂಬದವರು ಅವಳನ್ನು ಹಾಗೂ ವಲ್ಲಭನ ಕುಟುಂಬವನ್ನು ತೀವ್ರವಾಗಿ ದ್ವೇಷಿಸುತ್ತಿರುತ್ತಾರೆ. ಈಗ ವಲ್ಲಭ ಜೈಲು ಪಾಲಾಗಿರುವುದನ್ನು ಕಂಡು ಆಕೆಯ ತಂದೆ ಸೂರ್ಯಕಾಂತ್ ಮತ್ತು ಕುಟುಂಬಸ್ಥರು ಸಂಭ್ರಮಿಸುತ್ತಿದ್ದಾರೆ. ವಲ್ಲಭ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲಿ, ಆತ ಕೊನೆವರೆಗೆ ಜೈಲಿನಲ್ಲೇ ಕೊಳೆಯಲಿ ಎಂದು ಆಶಿಸುತ್ತಾ ವಿಕೃತಿ ಮೆರೆಯುತ್ತಿದ್ದಾರೆ.
ಇದನ್ನೂ ಓದಿ: ಪತ್ನಿಯರ ಎದುರು ಬಯಲಾಯ್ತು ಸಹೋದರರ ಸವಾಲು; ಗುಟ್ಟು-ರಟ್ಟು
ಗಂಡನಿಗಾಗಿ ಸೀಡಿ ಎದ್ದ ಅಮೂಲ್ಯ
ತನ್ನ ಪತಿ ವಲ್ಲಭ ಅಮಾಯಕ ಎಂಬುದು ಅಮೂಲ್ಯಳಿಗೆ ಚೆನ್ನಾಗಿ ತಿಳಿದಿದೆ. ತನ್ನ ಹೆತ್ತವರು ಆತನಿಗೆ ದ್ರೋಹ ಬಗೆಯುತ್ತಿರುವುದನ್ನು ಕಂಡು ಆಕೆ ಈಗ ರೌದ್ರಾವತಾರ ತಾಳಿದ್ದಾಳೆ. ‘ತಪ್ಪು ಮಾಡದ ವಲ್ಲಭನಿಗೆ ಶಿಕ್ಷೆಯಾದರೆ ನಾನು ಸುಮ್ಮನಿರಲ್ಲ. ನನ್ನ ಗಂಡನಿಗಾಗಿ ನಾನು ಯಾರನ್ನೂ ಕೇರ್ ಮಾಡಲ್ಲ, ಎದುರಿಗಿರೋದು ತಂದೆ ಸೂರ್ಯಕಾಂತ್ ಅಂತನೂ ನೋಡಲ್ಲ’ ಎಂದು ನೇರವಾಗಿ ತಂದೆಗೆ ಬೆರಳು ತೋರಿಸಿ ಎಚ್ಚರಿಕೆ ನೀಡಿದ್ದಾಳೆ. ತಂಗಿಯ ಮೇಲೆ ಕೈ ಮಾಡಲು ಬಂದ ಅಣ್ಣನ ಕೈಯನ್ನೇ ಗಟ್ಟಿಯಾಗಿ ಹಿಡಿದು ಹೆಣ್ಣಿನ ತಾಕತ್ತು ಏನೆಂಬುದನ್ನು ತೋರಿಸಿದ್ದಾಳೆ.
ತನ್ನ ಗಂಡನನ್ನು ಜೈಲಿನಿಂದ ಬಿಡಿಸಲು ಅಮೂಲ್ಯ ಯಾವ ಹಂತಕ್ಕೆ ಹೋಗುತ್ತಾಳೆ? ಮಗಳ ಈ ರೆಬೆಲ್ ಅವತಾರಕ್ಕೆ ಸೂರ್ಯಕಾಂತ್ ಕುಟುಂಬದ ಮುಂದಿನ ನಡೆ ಏನು ಎಂಬುದನ್ನು ಧಾರಾವಾಹಿಯ ಮುಂದಿನ ಸಂಚಿಕೆಗಳಲ್ಲಿ ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.