Headlines

ನಟನ ಮೇಲೆ ಡೆಲಿವೆರಿ ಬಾಯ್ಸ್ ದಾಳಿ: ಕೊಲೆಗೆ ಯತ್ನ ಎಂದ ನಟ – Kannada News | Delivery Boys attack on Tollywood hero Akhil Raj

ತೆಲುಗು ಚಿತ್ರರಂಗದ (Tollywood) ನಟನ ಮೇಲೆ ಹಲವಾರು ಡೆಲಿವರಿ ಬಾಯ್ಸ್ ಒಟ್ಟಿಗೆ ದಾಳಿ ನಡೆಸಿದ್ದಾರೆ. ನಟ ಅಖಿಲ್ ರಾಜ್, ಕಾರಿನಲ್ಲಿ ಹೋಗುತ್ತಿದ್ದಾಗ ಡೆಲಿವರಿ ಬಾಯ್ಸ್​​​ಗಳು ಒಟ್ಟಿಗೆ ನಟನ ಕಾರಿನ ಮೇಲೆ ದಾಳಿ ಮಾಡಿದ್ದು, ಕಾರು ಅಡ್ಡಗಟ್ಟಿ ಹಲ್ಲೆ ಸಹ ಮಾಡಿದ್ದಾರೆ. ಬಳಿಕ ನಟ ತನ್ನ ಕಾರನ್ನು ನೇರವಾಗಿ ಪೊಲೀಸ್ ಠಾಣೆಗೆ ಚಲಾಯಿಸಿದ್ದು, ಘಟನೆ ಬಗ್ಗೆ ದೂರು ಸಹ ದಾಖಲಿಸಿದ್ದಾರೆ. ಡೆಲಿವರಿ ಬಾಯ್ಸ್​​ಗಳು ತಮ್ಮನ್ನು ಕೊಲ್ಲಲು ಯತ್ನಿಸಿದರು ಎಂದು ನಟ ಅಖಿಲ್ ಆರೋಪಿಸಿದ್ದಾರೆ. ಮಾತ್ರವಲ್ಲದೆ, ಡೆಲಿವರಿ ಬಾಯ್ಸ್ ಸಹ ನಾಯಕ ನಟನ ವಿರುದ್ಧ ದೂರು ದಾಖಲಿಸಿದ್ದಾರೆ.

ತೆಲುಗಿನ ‘ರಾಜು ವೆಡ್ಸ್ ರಾಂಬಾಯಿ’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಅಖಿಲ್ ರಾಜ್ ಮತ್ತು ಡೆಲಿವರಿ ಬಾಯ್ ನಡುವಿನ ವಾಗ್ವಾದ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ತಪ್ಪು ಡೆಲಿವರಿಯಿಂದ ಆರಂಭವಾದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಸಹ ಈ ಬಗ್ಗೆ ಇದೀಗ ಚರ್ಚೆಗಳು ನಡೆಯುತ್ತಿವೆ. ಪರ-ವಿರೋಧ ಪೋಸ್ಟ್​​ಗಳು ಹರಿದಾಡುತ್ತಿವೆ.

ಆಗಿದ್ದಿಷ್ಟು, ನಟ ಅಖಿಲ್ ವಾಸಿಸುತ್ತಿರುವ ಅರುಣಾ ರೆಸಿಡೆನ್ಸಿಯ ಫ್ಲಾಟ್ ನಂಬರ್ 201ಕ್ಕೆ ಎದುರಾಗಿ ‘ಚೇಲಂ ರೆಸಿಡೆನ್ಸಿ’ ಎಂಬ ಮತ್ತೊಂದು ಅಪಾರ್ಟ್ಮೆಂಟ್ ಇದೆ. ಅಲ್ಲಿನ ಫ್ಲಾಟ್ ನಂಬರ್ 201ಕ್ಕೆ ಬರಬೇಕಾಗಿದ್ದ ಪಾರ್ಸೆಲ್ ಅನ್ನು ಡೆಲಿವರಿ ಬಾಯ್ ರಮೇಶ್, ತಪ್ಪಾಗಿ ಅಖಿಲ್ ಮನೆಯ ವಿಳಾಸದಲ್ಲಿ ನೀಡಿದ್ದಾನೆ. ಪಾರ್ಸೆಲ್ ಮೇಲೆ ವಿಳಾಸ ಸ್ಪಷ್ಟವಾಗಿದ್ದರೂ, ಒಟಿಪಿ ಅಥವಾ ಹೆಸರನ್ನು ಪರಿಶೀಲಿಸದೆ ನಿರ್ಲಕ್ಷ್ಯದಿಂದ ಡೆಲಿವರಿ ನೀಡಿದ್ದಾನೆ. ಮನೆಯಲ್ಲಿ ನಾಲ್ವರು ಇದ್ದಿದ್ದರಿಂದ ಯಾರೋ ಆರ್ಡರ್ ಮಾಡಿರಬಹುದು ಎಂದು ಅಖಿಲ್ ತಂದೆ ಪಾರ್ಸೆಲ್ ತೆಗೆದುಕೊಂಡರು. ವಿಷಯ ತಿಳಿಯದ ಅಖಿಲ್ ತಾಯಿ, ಬಂದ ಪಾರ್ಸೆಲ್ ಅನ್ನು ಓಪನ್ ಮಾಡಿದರು. ಆ ನಂತರ ಮನೆಯಲ್ಲಿ ಯಾರೂ ಆರ್ಡರ್ ಮಾಡಿಲ್ಲವೆಂದು ತಿಳಿದು ಅದನ್ನು ಪಕ್ಕಕ್ಕಿಟ್ಟಿದ್ದಾರೆ. ಸರಿಯಾಗಿ 20 ನಿಮಿಷಗಳ ನಂತರ ತಪ್ಪು ಅರಿವಾದ ಡೆಲಿವರಿ ಬಾಯ್ ವಾಪಸ್ ಬಂದು ಪಾರ್ಸೆಲ್ ಕೇಳಿದ್ದು, ಪಾರ್ಸೆಲ್ ಓಪನ್ ಆಗಿದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಇದನ್ನೂ ಓದಿ:ತೆಲುಗು ಚಿತ್ರರಂಗವ ಕೊಂಡಾಡಿ, ದೀಪಿಕಾ ಪಡುಕೋಣೆಗೆ ಟಾಂಗ್ ಕೊಟ್ಟ ಜಾನ್ಹವಿ

ಡೆಲಿವರಿ ಬಾಯ್ ರಮೇಶ್ ಹೇಳಿರುವಂತೆ, ಪಾರ್ಸಲ್ ಅನ್ನು ಅಖಿಲ್ ಓಪನ್ ಮಾಡಿದ್ದರು. ಇದರ ಬಗ್ಗೆ ಕೇಳಿದ್ದಕ್ಕೆ ಅಖಿಲ್ ಕೆಟ್ಟದಾಗಿ ಬೈದು, ಹಲ್ಲೆ ಮಾಡಲು ಯತ್ನಿಸಿ, ಮುಖಕ್ಕೆ ಉಗುಳಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಕಣ್ಣೀರು ಹಾಕುತ್ತಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಹ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಅಖಿಲ್ ವರ್ತನೆಯನ್ನು ಟೀಕೆ ಮಾಡಿದ್ದಾರೆ.

ಬಳಿಕ ನಟ ಅಖಿಲ್ ಸಹ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಡೆಲಿವರಿ ಬಾಯ್ ರಮೇಶ್ ಅವರನ್ನು ವಿಳಾಸ ನೋಡಿ ಕೊಡಬೇಕಲ್ಲಾ ಬ್ರದರ್ ಎಂದು ಕೇಳಿದ್ದಕ್ಕೆ, ರಮೇಶ್ ‘ನಾನು ನೋಡಲಿಲ್ಲ, ಕೊಟ್ಟೆ ಅಷ್ಟೇ” ಎಂದು ರಮೇಶ್ ದುರಹಂಕಾರದಿಂದ ಉತ್ತರಿಸಿದ್ದಾನೆ ಎಂಬುದು ಅಖಿಲ್ ವಾದ. ಅಷ್ಟರಲ್ಲಿ ಅಖಿಲ್ ತಾಯಿ ಬಂದು, “ತಿಳಿಯದೆ ಓಪನ್ ಮಾಡಿದೆವು ಬಾಬು” ಎಂದು ಪಾರ್ಸೆಲ್ ಹಿಂತಿರುಗಿಸುತ್ತಿದ್ದರೆ, “ಫ್ರೀಯಾಗಿ ಬಂದರೆ ಓಪನ್ ಮಾಡಿ ತೆಗೆದುಕೊಳ್ತೀರಾ” ಎಂದು ರಮೇಶ್ ವ್ಯಂಗ್ಯವಾಗಿ ಮಾತನಾಡಿದ್ದಾನೆ. ತಾಯಿಯನ್ನು ಆಡಿದ ಮಾತಿಗೆ ಸಿಟ್ಟಿಗೆದ್ದ ಅಖಿಲ್, ಸರಿಯಾಗಿ ಮಾತನಾಡು ಎಂದು ಎಚ್ಚರಿಸಿದರಂತೆ. ಆಗ ಆ ಡೆಲಿವರಿ ಬಾಯ್, ‘ನೀನು ಹೀರೋ ಅಲ್ವಾ.. ನೋಡು ಏನು ಮಾಡುತ್ತೇನೆ’ ಎಂದು ಫೋನ್ ತೆಗೆದು ವಿಡಿಯೋ ರೆಕಾರ್ಡ್ ಮಾಡಲು ಪ್ರಾರಂಭಿಸಿದನಂತೆ.

ಈ ಘಟನೆಗಳು ನಡೆದ ಬಳಿಕ ಡೆಲಿವರಿ ಬಾಯ್ ಗಳೆಲ್ಲ ಒಂದಾಗಿ ಅಖಿಲ್ ವಾಸಿಸುತ್ತಿರುವ ಅರುಣಾ ರೆಸಿಡೆನ್ಸಿ ಬಳಿ ಒಟ್ಟಾದರು. ನಟ ಹೊರಬರುವುದನ್ನೇ ಕಾದು, ಅಖಿಲ್ ತಮ್ಮ ಕಾರಿನಲ್ಲಿ ಮನೆಯಿಂದ ಹೊರಬರುತ್ತಿದ್ದಂತೆಯೇ, ಡೆಲಿವರಿ ಬಾಯ್ಸ್ ಗುಂಪು ಏಕಾಏಕಿ ಕಾರನ್ನು ಸುತ್ತುವರಿದು ದಾಳಿ ಮಾಡಲು ಯತ್ನಿಸಿದೆ. ಪ್ರಾಣಭಯದಿಂದ ಅಖಿಲ್ ಕಾರಿನಲ್ಲೇ ಕುಳಿತು, ಆ ದೃಶ್ಯಗಳನ್ನು ಮತ್ತು ತಮ್ಮನ್ನು ಹಿಂಬಾಲಿಸುತ್ತಿರುವವರನ್ನು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ತಾವು ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಹೇಳಿದರೂ ಕೇಳದ ಅವರು ಹಲ್ಲೆಗೆ ಮುಂದಾದಾಗ, ಅಖಿಲ್ ನೇರವಾಗಿ ಗಚ್ಚಿಬೌಲಿ ಪೊಲೀಸ್ ಠಾಣೆಗೆ ತೆರಳಿ, ತಮ್ಮ ಪ್ರಾಣಕ್ಕೆ ಅಪಾಯವಿದೆ ಎಂದು ದೂರು ನೀಡಿದರು. ಅದಕ್ಕೂ ಮುನ್ನವೇ ಬೆಳಿಗ್ಗೆ ಸದರಿ ಡೆಲಿವರಿ ಬಾಯ್ ಕೂಡ ಅಖಿಲ್ ವಿರುದ್ಧ ದೂರು ನೀಡಿದ್ದರಿಂದ ಪೊಲೀಸರು ಎರಡೂ ಕಡೆಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *