ನದಿಗೆ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ಜಲಸಮಾಧಿImage Credit source: Tv9 Kannada
ಮೈಸೂರು, ಏಪ್ರಿಲ್ 21: ಕಾವೇರಿ ನದಿಗೆ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರುಪಾಲಾಗಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡಿನ ನಿಸರ್ಗಧಾಮದಲ್ಲಿ ನಡೆದಿದೆ. ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದ ಚಾರ್ವಿ(15), ರಮ್ಯಾ(16) ಮೃತ ಬಾಲಕಿಯರಾಗಿದ್ದು, ಮತ್ತೊಬ್ಬ ವಿದ್ಯಾರ್ಥಿನಿ ಸುಚಿತ್ರಾ ಸ್ಥಿತಿ ಗಂಭೀರವಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನ ಶಾಲೆಯಿಂದ ಪ್ರವಾಸಕ್ಕೆಂದು 72 ವಿದ್ಯಾರ್ಥಿಗಳು ತಲಕಾಡಿಗೆ ಆಗಮಿಸಿದ್ದರು ಎನ್ನಲಾಗಿದೆ.
3 ದಿನಗಳಲ್ಲಿ 10 ಮಂದಿ ಕಾವೇರಿ ನದಿ ಪಾಲು
ಈಜಲು ಹೋಗಿ ಕಾವೇರಿ ನದಿ ಪಾಲಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಕಳೆದ 3 ದಿನಗಳ ಅವಧಿಯಲ್ಲಿಯೇ 10 ಜನ ನೀರಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಊರುಸ್ ಹಿನ್ನೆಲೆ ಮೈಸೂರು ಜಿಲ್ಲೆಯ ಕೆ.ಆರ್.ನಗರಕ್ಕೆ ಬಂದಿದ್ದ ಎಂಟು ಜನರ ತಂಡ ಅರ್ಕೇಶ್ವರ ದೇವಸ್ಥಾನದ ಸಮೀಪವಿರುವ ಕಾವೇರಿ ನದಿಗೆ ಈಜಲು ತೆರಳಿ ನೀರುಪಾಲಾಗಿತ್ತು. ಈ ವೇಳೆ ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದರೆ, ಉಳಿದ 6 ಮಂದಿ ಜೀವ ಕಳೆದುಕೊಂಡಿದ್ದರು. ಮೃತರನ್ನು ಬೆಂಗಳೂರಿನ ಯಾಸಿನ್(23) ಹಾಗೂ ಹೈಮಾ(13), ಊಟಿ ಮೂಲದ ಸೈದ್ ಫಾತಿಮಾ (38), ಮೈಸೂರು ಜಿಲ್ಲೆಯ ನೇಹಾ(20), ಉಮೇರ್(7) ಮತ್ತು ಅಫಿಯಾ(20) ಎಂದು ಗುರುತಿಸಲಾಗಿತ್ತು.
ಇದನ್ನೂ ಓದಿ: ಕಾವೇರಿ ನದಿಯಲ್ಲಿ 6 ಜನ ಜಲಸಮಾಧಿ; ದರ್ಗಾಕ್ಕೆ ಬಂದವರು ದುರಂತ ಅಂತ್ಯ
ಮತ್ತೊಂದು ದುರ್ಘಟನೆಯಲ್ಲಿ ಪಿರಿಯಾಪಟ್ಟಣದ ದೊಡ್ಡ ಹರವೆ ಗ್ರಾಮದ ಬಳಿ ಕಾವೇರಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಪ್ರಾಣಕಳೆದುಕೊಂಡಿದ್ದರು. ಪಟ್ಟಣದಲ್ಲಿ ಟೈಲ್ಸ್ ಮತ್ತು ಪೇಂಟಿಂಗ್ ಕೆಲಸ ಮಾಡುತ್ತಿದ್ದ ನಾಲ್ವರು ಯುವಕರು ಭಾನುವಾರ ಮಧ್ಯಾಹ್ನ ಈಜಲೆಂದು ನದಿಗೆ ತೆರಳಿದ್ದರು. ಈ ವೇಳೆ ಗಣೇಶ್ (22) ಮತ್ತು ಇಮ್ರಾನ್ (28) ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಈಗ ಮತ್ತಿಬ್ಬರು ಬಾಲಕಿಯರು ಕಾವೇರಿ ನದಿ ಪಾಲಾಗಿರೋದು ಭಾರಿ ಆತಂಕಕ್ಕೆ ಕಾರಣವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.