ಇಸ್ಲಾಮಾಬಾದ್, ಜೂನ್ 30: ಭಾರತದ (India) ವಿರುದ್ಧ ಸದಾ ಕಿಡಿ ಕಾರುವ ಪಾಕಿಸ್ತಾನ (Pakistan), ಇದೀಗ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ (Indus Waters Treaty) ವಿಚಾರವಾಗಿ ಮತ್ತೊಮ್ಮೆ ಪ್ರಚೋದನಾಕಾರಿ ಹೇಳಿಕೆ ನೀಡಿ ಉದ್ಧಟತನ ಪ್ರದರ್ಶಿಸಿದೆ. ಇಸ್ಲಾಮಾಬಾದ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್, ‘ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನಕ್ಕೆ ಬರಬೇಕಾದ ನೀರಿನ ಪಾಲನ್ನು ಯಾರಾದರೂ ಕಸಿದುಕೊಳ್ಳಲು ಬಂದರೆ, ಅಂತಹವರ ಕೈಗಳನ್ನು ನಾವು ಕತ್ತರಿಸುತ್ತೇವೆ’ ಎಂದು ಭಾರತದ ಹೆಸರು ಉಲ್ಲೇಖಿಸದೆ ಬೆದರಿಕೆ ಹಾಕಿದ್ದಾರೆ. ಕಳೆದ ವರ್ಷ (2025) ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಬಳಿಕ ಭಾರತವು ಈ ಒಪ್ಪಂದವನ್ನು ಅಮಾನತುಗೊಳಿಸಿರುವುದಕ್ಕೆ ಪಾಕಿಸ್ತಾನ ಈ ರೀತಿ ಹತಾಶೆಯಿಂದ ಪ್ರತಿಕ್ರಿಯಿಸಿದೆ.
ನೆರೆ ದೇಶದ ಪ್ರಧಾನಿ ಕೈಯಲ್ಲಿ ನೀರಿನ ನಲ್ಲಿ ಇದೆ!
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಪರೋಕ್ಷವಾಗಿ ಟೀಕಿಸಿದ ಮುಸಾದಿಕ್ ಮಲಿಕ್, ‘ನೆರೆ ದೇಶದ ಪ್ರಧಾನಿಯವರ ಕೈಯಲ್ಲಿ ಒಂದು ನಲ್ಲಿ (ಟ್ಯಾಪ್) ಇದೆ. ಅವರು ಪಾಕಿಸ್ತಾನಕ್ಕೆ ಒಂದು ಹನಿ ನೀರನ್ನೂ ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ನಮ್ಮ ದೇಶದ ಶೇ 40 ರಿಂದ 50 ರಷ್ಟು ಜನಸಂಖ್ಯೆ ಜೀವನಕ್ಕಾಗಿ ಕೃಷಿಯನ್ನೇ ಅವಲಂಬಿಸಿದೆ. ಯಾರೋ ಒಬ್ಬರು ನಮ್ಮ ದೇಶದ ಆಹಾರ ಭದ್ರತೆ, ಶೇ 50 ರಷ್ಟು ಉದ್ಯೋಗ ಮತ್ತು ಶೇ 25 ರಷ್ಟು ಆರ್ಥಿಕತೆಯನ್ನು ನಿಯಂತ್ರಿಸಲು ನೋಡುತ್ತಿದ್ದಾರೆ. ಜಾಗತಿಕವಾಗಿ ಕೆಳಮಟ್ಟದ ಜಲಾನಯನ ಪ್ರದೇಶದ ದೇಶಗಳ ಹಕ್ಕಿನ ಬಗ್ಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಾವು ನಾಳೆ ಪ್ರಶ್ನೆ ಮಾಡಲಿದ್ದೇವೆ’ ಎಂದು ಕಿಡಿಕಾರಿದ್ದಾರೆ.
ಒಪ್ಪಂದ ಏಕಪಕ್ಷೀಯವಾಗಿ ರದ್ದು ಮಾಡಲು ಸಾಧ್ಯವಿಲ್ಲ ಎಂದ ಪಾಕ್
ಇದೇ ವೇಳೆ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾ ತರಾರ್, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವು ಕಾನೂನುಬದ್ಧವಾಗಿದೆ. ಇದನ್ನು ಭಾರತ ಏಕಪಕ್ಷೀಯವಾಗಿ ರದ್ದುಗೊಳಿಸಲು ಅಥವಾ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ. ಅಲ್ಲದೆ, ಪಾಕಿಸ್ತಾನದ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ‘‘ನೀರು ನಮ್ಮ ಜೀವನಾಡಿ ಮತ್ತು ನಮ್ಮ ರೆಡ್ ಲೈನ್’’ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ ಎಂದು ಅವರು ನೆನಪಿಸಿದ್ದಾರೆ.
ಸಿಂಧೂ ನದಿ ನೀರು ಹಂಚಿಕೆ ವಿವಾದದ ಹಿನ್ನೆಲೆ ಏನು?
ಇತ್ತೀಚೆಗಷ್ಟೇ ಭಾರತದ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು, ಸಿಂಧೂ ನದಿಯಲ್ಲಿ ಭಾರತದ ಪಾಲಿನ ಸಂಪೂರ್ಣ ನೀರನ್ನು ಮುಂದಿನ ಒಂದೂವರೆಯಿಂದ ಎರಡು ವರ್ಷಗಳಲ್ಲಿ ದೇಶದ ಜನರಿಗಾಗಿಯೇ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುವುದು ಮತ್ತು ಭಾರತದ ಪಾಲಿನ ಒಂದು ಹನಿ ನೀರೂ ಪಾಕಿಸ್ತಾನಕ್ಕೆ ಹರಿಯದಂತೆ ತಡೆಯಲಾಗುವುದು ಎಂದು ಸ್ಪಷ್ಟಪಡಿಸಿದ್ದರು. 2025ರ ಏಪ್ರಿಲ್ನಲ್ಲಿ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ನಾಗರಿಕರು ಹತರಾದ ನಂತರ, ಭಾರತವು 1960ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತುಗೊಳಿಸಿದೆ. ಪಾಕಿಸ್ತಾನ ತನ್ನ ನೆಲದಲ್ಲಿರುವ ಭಯೋತ್ಪಾದನಾ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವವರೆಗೂ ಈ ಒಪ್ಪಂದವನ್ನು ಪುನರಾರಂಭಿಸುವುದಿಲ್ಲ ಎಂದು ಭಾರತ ಕಠಿಣ ನಿಲುವು ತಳೆದಿದೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 10:41 am, Tue, 30 June 26