ತಮಿಳುನಾಡು ವಿಧಾನಸಭೆ ಚುನಾವಣೆಗೆ (Tamil Nadu Elections) ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಹಾಗೂ ನಟ ವಿಜಯ್ ಚೆನ್ನೈನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ತಮ್ಮನ್ನು ಟೀಕಿಸುವವರ ವಿರುದ್ಧ ಕೆಂಡಕಾರಿದ್ದಾರೆ. ತಮ್ಮನ್ನು ಕೇವಲ ನಟ ಎಂದು ಹೀಯಾಳಿಸುತ್ತಿರುವವರಿಗೆ ವಿಜಯ್ (Thalapathy Vijay) ತಿರುಗೇಟು ನೀಡಿದ್ದಾರೆ. ಚೆನ್ನೈನಲ್ಲಿ ಮಂಗಳವಾರ (ಏಪ್ರಿಲ್ 21) ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ವಿಜಯ್, ಆಡಳಿತ ಪಕ್ಷ ಮತ್ತು ತಮ್ಮನ್ನು ಟೀಕಿಸುವ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.
ತಮ್ಮನ್ನು ಸದಾ ನಟ ಎಂದು ಕರೆಯುವ ಸಚಿವರೊಬ್ಬರ ಹೇಳಿಕೆಗೆ ವ್ಯಂಗ್ಯವಾಗಿ ಉತ್ತರಿಸಿದ ವಿಜಯ್, ‘ಇಲ್ಲಿ ಒಬ್ಬ ಸಚಿವರಿದ್ದಾರೆ, ಅವರು ಯಾವಾಗಲೂ ವಿಜಯ್ ಒಬ್ಬ ನಟ, ವಿಜಯ್ ಒಬ್ಬ ನಟ ಎಂದು ಹೇಳುತ್ತಲೇ ಇರುತ್ತಾರೆ. ಹೌದು, ನಾನು ನಟ. ಅವರೇನೋ ಹೊಸ ವಿಷಯ ಕಂಡುಹಿಡಿದವರಂತೆ ಆಡುತ್ತಿದ್ದಾರೆ. ಆದರೆ ನೆನಪಿಡಿ, ನಾನು ರಾಜಕೀಯಕ್ಕೆ ಬಂದ ಮೇಲೆ ಎಲ್ಲೂ ನಟಿಸಿಲ್ಲ. ನೀವು ಮಾಡುತ್ತಿರುವುದು ನಾಟಕದ ಮೇಲೆ ನಾಟಕ. ಹಾಗಿದ್ದಲ್ಲಿ ನಿಮ್ಮನ್ನು ನಾವು ನಟ-ನಟಿಯರು ಎಂದು ಕರೆಯಬೇಕೇ’ ಎಂದು ಪ್ರಶ್ನಿಸಿದರು.
ಕರೂರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ವಿರುದ್ಧ ವಿಜಯ್ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವರ್ಷ ಟಿವಿಕೆ ರ್ಯಾಲಿ ವೇಳೆ ನಡೆದ ಕರೂರ್ ಕಾಲು ತುಳಿತ ಪ್ರಕರಣದಲ್ಲಿ 40ಕ್ಕೂ ಹೆಚ್ಚು ಜನರು ಮೃತಪಟ್ಟ ಘಟನೆಗೆ ವಿಜಯ್ ಅವರೇ ಕಾರಣ ಎಂದು ಆರೋಪಿಸುತ್ತಿರುವ ಸರ್ಕಾರಕ್ಕೆ ಅವರು ತಿರುಗೇಟು ನೀಡಿದರು.
“Vijay is an actor .. Vijay is an actor.. Yes.. I’m an actor.. Ennamo pudhusa kandu pudicha madhri.. I didn’t act after coming to Politics.. I didn’t act in politics.. But You people are putting drama in politics..”
– #ThalapathyVijay‘s Today’s Speech pic.twitter.com/FSMa6bNNhs
— Laxmi Kanth (@iammoviebuff007) April 21, 2026
‘ನನ್ನನ್ನು ಯಾಕೆ ದೂರುತ್ತಿದ್ದೀರಿ? ಈ ಬಗ್ಗೆ ನಾವು ಮಾತನಾಡುವುದೇ ಇಲ್ಲ ಎಂದು ಈ ಹಿಂದೆ ವಿಡಿಯೋ ಮಾಡಿದ್ದ ನೀವು, ಈಗ ನನ್ನ ಮೇಲೆ ಗೂಬೆ ಕೂರಿಸುತ್ತಿದ್ದೀರಿ. ಪೊಲೀಸರ ಅನುಮತಿ ಪಡೆದೇ ನಾನು ಅಲ್ಲಿಗೆ ಹೋಗಿದ್ದೆ. ಎಲ್ಲವೂ ಲೈವ್ ಇತ್ತು, ನಿಮಗೆ ಕಿಂಚಿತ್ತಾದರೂ ವಿವೇಚನೆ ಇಲ್ಲವೇ’ ಎಂದು ವಿಜಯ್ ಆಕ್ರೋಶ ಹೊರಹಾಕಿದರು. ಈ ದುರಂತವು ಆಡಳಿತಾರೂಢ ಡಿಎಂಕೆ ಸರ್ಕಾರದ ವೈಫಲ್ಯ ಎಂದು ಅವರು ಪರೋಕ್ಷವಾಗಿ ಆರೋಪಿಸಿದರು.
ಇದನ್ನೂ ಓದಿ: ಪತ್ನಿ ಫೋಟೋ ನೋಡಿ ಮೌನ ತಾಳಿದ ದಳಪತಿ ವಿಜಯ್; ವಿಡಿಯೋ ವೈರಲ್
2024ರಲ್ಲಿ ರಾಜಕೀಯ ಪಕ್ಷ ಘೋಷಿಸಿದ ನಂತರ ವಿಜಯ್ ಪೂರ್ಣ ಪ್ರಮಾಣದ ರಾಜಕಾರಣಿಯಾಗಿದ್ದಾರೆ. ತಮಿಳುನಾಡು ಚುನಾವಣೆ ಏಪ್ರಿಲ್ 23ರಂದು ನಡೆಯಲಿದ್ದು, ಯಾವುದೇ ಮೈತ್ರಿ ಇಲ್ಲದೆ ಏಕಾಂಗಿಯಾಗಿ ಸ್ಪರ್ಧಿಸಲು ವಿಜಯ್ ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಮತ್ತು ಜನಪರ ಆಡಳಿತದ ಸುಧಾರಣೆ ತರುವುದು ತಮ್ಮ ಗುರಿ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.