Headlines

ನಾರಿ ಶಕ್ತಿ ಕಾರ್ಯಕ್ರಮದಲ್ಲೇ ವಿದ್ಯಾರ್ಥಿನಿಗೆ ಅಪಮಾನ, ತೋಳಿಲ್ಲದ ಉಡುಪು ಧರಸಿದ್ದಕ್ಕೆ ಸಚಿವರಿದ್ದ ವೇದಿಕೆಗೆ ಬರದಂತೆ ತಡೆದ ಅಧಿಕಾರಿಗಳು – Kannada News | Nari Shakti Event Hypocrisy: DU Student Barred For Sleeveless Attire, Sparks Dress Code Debate

ನವದೆಹಲಿ, ಏಪ್ರಿಲ್ 16: ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ವೇದಿಕೆಯಲ್ಲೇ ವಿದ್ಯಾರ್ಥಿನಿಯೊಬ್ಬಳ ಉಡುಪಿನ ಕಾರಣಕ್ಕೆ ಆಕೆಗೆ ಅವಮಾನ ಮಾಡಿರುವ ಘಟನೆಯೊಂದು ದೆಹಲಿ ವಿಶ್ವವಿದ್ಯಾಲಯದಲ್ಲಿ (DU) ನಡೆದಿದೆ. ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ (SRCC) ಆಯೋಜಿಸಲಾಗಿದ್ದ ನಾರಿ ಶಕ್ತಿ(Nari Shakti) ಆಧಾರಿತ ಅಣಕು ಸಂಸತ್ತಿನ ಅಧಿವೇಶನದಲ್ಲಿ ಈ ಕಹಿ ಘಟನೆ ನಡೆದಿದೆ.

ನಡೆದಿದ್ದೇನು?
ದೌಲತ್ ರಾಮ್ ಕಾಲೇಜಿನ ವಿದ್ಯಾರ್ಥಿನಿ ಸಾರಾ ಶರ್ಮಾ, ಈ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸನ್ಮಾನಿಸಲು ಆಹ್ವಾನಿಸಲಾಗಿತ್ತು. ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಮುಖ್ಯ ಅತಿಥಿಯಾಗಿದ್ದ ಈ ಕಾರ್ಯಕ್ರಮಕ್ಕೆ ಸಾರಾ ಸಾಂಪ್ರದಾಯಿಕ ಭಾರತೀಯ ಉಡುಪಿನಲ್ಲೇ (ಸೂಟ್) ಹೋಗಿದ್ದರು. ಆದರೆ, ಅವರ ಉಡುಪಿಗೆ ತೋಳುಗಳಿಲ್ಲದ (Sleeveless) ಕಾರಣಕ್ಕೆ ವೇದಿಕೆ ಹತ್ತಲು ಬಿಟ್ಟಿಲ್ಲ.

ವಿದ್ಯಾರ್ಥಿನಿಯ ಆಕ್ರೋಶ
ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಸಾರಾ, ಎಲ್ಲಾ ಜವಾಬ್ದಾರಿಗಳು ಹೆಣ್ಣುಮಕ್ಕಳಿಗೇ ಇರುವ ಸಮ್ಮೇಳನವಿದು. ಆದರೆ ನಾನು ವೇದಿಕೆ ಹತ್ತಲು ಹೋದಾಗ, ಅಧಿಕಾರಿಗಳು ನನ್ನನ್ನು ನೋಡಿ ನೀವು ಸ್ಲೀವ್‌ಲೆಸ್ ಬಟ್ಟೆ ಧರಿಸಿದ್ದೀರಿ, ಸಚಿವರನ್ನು ಸನ್ಮಾನಿಸಲು ನಿಮಗೆ ಅವಕಾಶವಿಲ್ಲ ಎಂದರು. ಎಲ್ಲರ ಮುಂದೆ ಅವರು ಹಾಗೆ ಹೇಳಿದ್ದು ನನಗೆ ಮುಜುಗರ ಮತ್ತು ಅಸಹ್ಯ ಉಂಟುಮಾಡಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ:  ಸಂಸತ್​​ನಲ್ಲಿ ಅಂಗೀಕಾರವಾಗುತ್ತಾ ಮಹಿಳಾ ಮೀಸಲಾತಿ ಮಸೂದೆ? ಏನಿದರ ಮಹತ್ವ, ವಿಪಕ್ಷಗಳ ವಿರೋಧವೇಕೆ?

ಸಾಂಪ್ರದಾಯಿಕ ಉಡುಪಿನಲ್ಲೇ ಇದ್ದರೂ, ಕೇವಲ ತೋಳಿಲ್ಲದ ಕಾರಣಕ್ಕೆ ಮಹಿಳಾ ಅಧಿಕಾರಿಯೇ ನನ್ನನ್ನು ತಡೆದಿದ್ದು ನಾರಿ ಶಕ್ತಿ ಎಂಬ ಥೀಮ್‌ಗೆ ವಿರುದ್ಧವಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಸಾರಾ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಶುರುವಾಗಿದೆ.

ನಮ್ಮ ದೇಶದಲ್ಲಿ ಸಾವಿರಾರು ದೊಡ್ಡ ಸಮಸ್ಯೆಗಳಿವೆ, ಆದರೆ ಅಧಿಕಾರಿಗಳು ಇನ್ನೂ ತೋಳಿಲ್ಲದ ಉಡುಪಿನ ಬಗ್ಗೆ ಚಿಂತಿಸುತ್ತಿದ್ದಾರೆ. ಬಟ್ಟೆಯನ್ನು ನೋಡಿ ವ್ಯಕ್ತಿತ್ವ ನಿರ್ಣಯಿಸುವುದು ನಮ್ಮ ವಿನಾಶದ ಮುನ್ಸೂಚನೆ, ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಂದಿನ ಕಾಲದಲ್ಲೂ ಭಾರತ ಇಂತಹ ಸಣ್ಣ ವಿಚಾರಗಳಲ್ಲಿ ಸಿಲುಕಿಕೊಂಡಿದೆ ಎಂಬುದು ಬೇಸರದ ಸಂಗತಿ ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ.

ವಿದ್ಯಾರ್ಥಿನಿಯ ಈ ಆರೋಪವು ಶಿಕ್ಷಣ ಸಂಸ್ಥೆಗಳಲ್ಲಿ ಈಗಲೂ ಅಸ್ತಿತ್ವದಲ್ಲಿರುವ ‘ಡ್ರೆಸ್ ಕೋಡ್’ ಮತ್ತು ಮಹಿಳೆಯರ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳ ಬಗ್ಗೆ ಹೊಸ ಪ್ರಶ್ನೆಗಳನ್ನು ಎತ್ತಿದೆ. ಸಬಲೀಕರಣದ ಹೆಸರಿನಲ್ಲಿ ಕಾರ್ಯಕ್ರಮ ಮಾಡಿ, ಉಡುಪಿನ ಕಾರಣಕ್ಕೆ ಅವಕಾಶ ನಿರಾಕರಿಸುವುದು ಎಷ್ಟು ಸರಿ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *