Headlines

ನಾವು ಪಾಕಿಸ್ತಾನಕ್ಕೆ ಸೇರಿದವರಲ್ಲ; ಇಸ್ಲಾಮಾಬಾದ್ ವಿರುದ್ಧ ಪಿಒಕೆ ಜನರ ಪ್ರತಿಭಟನೆ – Kannada News | POK is not part of Pakistan Protesters Warn Islamabad in rally over food blockade

ಇಸ್ಲಮಾಬಾದ್, ಜೂನ್ 30: ಪಿಒಕೆ (PoK) ವ್ಯಾಪ್ತಿಯ ಕಾಶ್ಮೀರದ ರಾವಲಾಕೋಟ್‌ನಲ್ಲಿ ಇಂದು 22ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆಯಲ್ಲಿ ಸಾವಿರಾರು ಜನರು ಈ ಪ್ರದೇಶದ ಮೇಲಿನ ಪಾಕಿಸ್ತಾನದ ನಿಯಂತ್ರಣದ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈದ್ಗಾ ಮೈದಾನದಲ್ಲಿ ನಡೆದ ಪ್ರತಿಭಟನೆಯ ವೇಳೆ ಮಾತನಾಡಿದ ಪಿಒಕೆ ಮುಖಂಡರು, ಈ ಪ್ರದೇಶವನ್ನು ಇನ್ನು ಮುಂದೆ ಪಾಕಿಸ್ತಾನದ (Pakistan) ನಿಯಂತ್ರಣದಲ್ಲಿದೆ ಎಂದು ಪರಿಗಣಿಸಬಾರದು, ನಾವು ಪಾಕಿಸ್ತಾನದ ಭಾಗವಲ್ಲ. ನಮಗೆ ಪಾಕಿಸ್ತಾನದ ರೇಷನ್ ಅಗತ್ಯವಿಲ್ಲ, ಪಾಕಿಸ್ತಾನಕ್ಕೆ ನಮ್ಮ ಅಗತ್ಯವಿದೆ ಎಂದು ಹೇಳಿದ್ದಾರೆ. ಹಾಗೇ, ಪಾಕಿಸ್ತಾನದ ಇದೇ ವರ್ತನೆಯನ್ನು ಮುಂದುವರೆಸಿದರೆ ಭಾರತದೊಂದಿಗೆ ಬಲವಾದ ಬಾಂಧವ್ಯ ಬೆಳೆಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನದ ಆಡಳಿತದ ವೈಫಲ್ಯ, ಆರ್ಥಿಕ ಸಂಕಷ್ಟ, ಹಣದುಬ್ಬರ ಹಾಗೂ ಸರ್ಕಾರಿ ದಬ್ಬಾಳಿಕೆ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ ಪ್ರಾರಂಭವಾಯಿತು. ಪ್ರತಿಭಟನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಲುಪುವುದನ್ನು ತಡೆಯುವ ಉದ್ದೇಶದಿಂದ ಅಧಿಕಾರಿಗಳು ಜೂನ್ 5ರಿಂದ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ನಾಗರಿಕ ಹಕ್ಕುಗಳ ಹೋರಾಟಗಾರ ಸರ್ದಾರ್ ಅಮಾನ್ ಖಾನ್ ಸೇರಿದಂತೆ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯು, ಆಹಾರ ಪೂರೈಕೆ ಮತ್ತು ಇತರ ಅಗತ್ಯ ವಸ್ತುಗಳ ಮೇಲೆ ಪಾಕಿಸ್ತಾನದ ಅಧಿಕಾರಿಗಳು ಎರಡು ವಾರಗಳ ನಿರ್ಬಂಧ ಹೇರಿದ ನಂತರ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ.

ಇದನ್ನೂ ಓದಿ: ನೀವು ಅಸಲಿ ಕಾಶ್ಮೀರಿಗಳಲ್ಲ; ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿಕೆಗೆ ಪಿಒಕೆಯಲ್ಲಿ ಭಾರಿ ಆಕ್ರೋಶ

ತಮ್ಮ ಭಾಷಣದಲ್ಲಿ, ಪಾಕಿಸ್ತಾನ ಆಡಳಿತದ ಕಾಶ್ಮೀರವು ಪಾಕಿಸ್ತಾನದ ಭಾಗವಲ್ಲ ಎಂದು ಹೇಳಿದ ಅಮಾನ್ ಖಾನ್, ಪಿಒಕೆಯು ಪಾಕಿಸ್ತಾನವನ್ನು ಅವಲಂಬಿಸಿರುವುದಕ್ಕಿಂತ ಹೆಚ್ಚಾಗಿ, ಪಾಕಿಸ್ತಾನಕ್ಕೇ ಈ ಪ್ರದೇಶದ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಮೇಲಿನ ನಿರ್ಬಂಧಗಳು ಮುಂದುವರಿದರೆ ಈ ಪ್ರದೇಶದ ಜನರು ಸಹಾಯಕ್ಕಾಗಿ ಭಾರತದ ಕಡೆಗೆ ಮುಖ ಮಾಡಬೇಕಾಗುತ್ತದೆ ಎಂದು ಪ್ರತಿಭಟನೆಯೊಂದರಲ್ಲಿ ಅಮಾನ್ ಖಾನ್ ತಿಳಿಸಿದ್ದಾರೆ.

ವಿಡಿಯೋವೊಂದರಲ್ಲಿ ಪಾಕಿಸ್ತಾನ ಆಡಳಿತದ ಕಾಶ್ಮೀರದ ಜನರು ಈ ಪ್ರದೇಶವು ಪಾಕಿಸ್ತಾನದ ಭಾಗವಲ್ಲ ಎಂದು ಘೋಷಿಸಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ತಿರಸ್ಕರಿಸಿರುವ ಸ್ಥಳೀಯ ನಿವಾಸಿಗಳು, ತಾವು ಸರ್ವಾಧಿಕಾರಿಯನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಪ್ರತಿಭಟನೆಗಳು ಕೇವಲ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಮಾತ್ರ ಸೀಮಿತವಾಗಿಲ್ಲ, ವಿದೇಶಗಳಲ್ಲಿ ವಾಸಿಸುತ್ತಿರುವ ಬೆಂಬಲಿಗರು ಹಲವಾರು ದೇಶಗಳಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಗಳ ಹೊರಗಡೆಯೂ ಫಲಕಗಳನ್ನು ಹಿಡಿದು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಮುಜಫರಾಬಾದ್ ಮತ್ತು ವಿಶಾಲ ಪ್ರದೇಶದ ಬಗ್ಗೆ ತಮ್ಮ ರಾಜಕೀಯ ಉದ್ದೇಶಗಳು ಈಡೇರುವವರೆಗೆ ತಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಪ್ರತಿಭಟನಾ ನಿರತ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಪಿಒಕೆಯಲ್ಲಿ ಕಾಶ್ಮೀರಿಗಳ ಹತ್ಯಾಕಾಂಡಕ್ಕೆ ಪಾಕಿಸ್ತಾನವೇ ಹೊಣೆ; ಭಾರತ ಖಂಡನೆ

ರಾವಲಾಕೋಟ್‌ನ ಈದ್ಗಾ ಮೈದಾನದಲ್ಲಿ ನಡೆದ ಪ್ರತಿಭಟನೆಯು ಈ ಪ್ರದೇಶದ ಮೇಲಿನ ಪಾಕಿಸ್ತಾನದ ನಿಯಂತ್ರಣಕ್ಕೆ ಇಲ್ಲಿಯವರೆಗಿನ ಪ್ರಬಲ ಸವಾಲುಗಳಲ್ಲಿ ಒಂದಾಗಿದೆ. ದಶಕಗಳ ರಾಜಕೀಯ ನಿರ್ಲಕ್ಷ್ಯ, ಆರ್ಥಿಕ ಶೋಷಣೆ ಮತ್ತು ಆಡಳಿತಾತ್ಮಕ ದಬ್ಬಾಳಿಕೆಗಾಗಿ ಪಾಕಿಸ್ತಾನ ಸರ್ಕಾರ ಹಾಗೂ ಭದ್ರತಾ ಪಡೆಗಳನ್ನು ಆರೋಪಿಸಿರುವ ಪ್ರತಿಭಟನಾಕಾರರು, ಚಳುವಳಿಯನ್ನು ಹತ್ತಿಕ್ಕಲು ಅಧಿಕಾರಿಗಳು ಅಗತ್ಯ ಆಹಾರ ಪೂರೈಕೆಯ ಮೇಲೆ ದಿಗ್ಬಂಧನ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *