ನೀಟ್ ಮರುಪರೀಕ್ಷೆ: ಭದ್ರತೆ, ಗುಪ್ತಚರ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳೊಂದಿಗೆ ಸಚಿವ ಧರ್ಮೇಂದ್ರ ಪ್ರಧಾನ್ ಸಭೆ – Kannada News | Neet UG re exam: Dharmendra Pradhan chairs high level meeting with Security and Intelligence agencies

ನವದೆಹಲಿ, ಮೇ 20: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಮುಂಬರುವ ನೀಟ್-ಯುಜಿ (NEET-UG) ಮರು-ಪರೀಕ್ಷೆಯ (Re-examination) ಹಿನ್ನೆಲೆಯಲ್ಲಿ ಕೇಂದ್ರ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದಾರೆ. ಪರೀಕ್ಷೆಯನ್ನು ಸುರಕ್ಷಿತ, ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆಸಲು ಕಟ್ಟುನಿಟ್ಟಿನ ನಿಗಾ ಮತ್ತು ದೋಷರಹಿತ ಭದ್ರತಾ ವ್ಯವಸ್ಥೆಗಳನ್ನು ಮಾಡುವಂತೆ ಅವರು ಒತ್ತಿಹೇಳಿದ್ದಾರೆ.

ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಮಹಾನಿರ್ದೇಶಕರು ಸಹ ಈ ಸಭೆಯಲ್ಲಿ ಭಾಗವಹಿಸಿದ್ದರು. ಪರೀಕ್ಷಾ ಪ್ರಕ್ರಿಯೆಯಲ್ಲಿ ಎದುರಾಗಬಹುದಾದ ಯಾವುದೇ ರೀತಿಯ ಲೋಪದೋಷಗಳನ್ನು ಮುಂಚಿತವಾಗಿಯೇ ಗುರುತಿಸಲು ಮತ್ತು ಸಮಯಕ್ಕೆ ಸರಿಯಾಗಿ ತಡೆಗಟ್ಟುವ ಹಾಗೂ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧತೆಗಳನ್ನು ವಿವರವಾಗಿ ಪರಿಶೀಲಿಸಲಾಯಿತು.

ಧರ್ಮೇಂದ್ರ ಪ್ರಧಾನ್ ಸಭೆ ನಡೆಸುತ್ತಿರುವ ವಿಡಿಯೋ

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಭೆ

ಇದೇ ಸಂದರ್ಭದಲ್ಲಿ ಪ್ರಮುಖ ಸಾಮಾಜಿಕ ಮಾಧ್ಯಮಗಳಾದ ಮೆಟಾ (Meta), ಗೂಗಲ್ (Google) ಮತ್ತು ಟೆಲಿಗ್ರಾಮ್ (Telegram) ಪ್ರತಿನಿಧಿಗಳೊಂದಿಗೆ ಮತ್ತೊಂದು ಪ್ರತ್ಯೇಕ ಸಭೆ ನಡೆಸಲಾಯಿತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ, ವಿಶೇಷವಾಗಿ ಟೆಲಿಗ್ರಾಮ್ ಚಾನೆಲ್‌ಗಳು ಮತ್ತು ಅನಾಮಧೇಯ ಆನ್‌ಲೈನ್ ಗ್ರೂಪ್‌ಗಳ ಮೂಲಕ ಹರಡುತ್ತಿರುವ ಸುಳ್ಳು ಸುದ್ದಿಗಳ (Misinformation) ಬಗ್ಗೆ ಸಭೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಯಿತು.

ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆಯಿಂದ 7 ಲಕ್ಷ ಕೋಟಿ ರೂ ಉಳಿತಾಯ, ಜಿಡಿಪಿ ಶೇ. 1.6 ವೃದ್ಧಿ: ಜೆಪಿಸಿ ಅನಿಸಿಕೆ

ಸುಳ್ಳು ಸುದ್ದಿಗಳ ಜಾಲ ಮತ್ತು ತನಿಖೆ

ಅಧಿಕಾರಿಗಳು ಗಮನಿಸಿದಂತೆ, ಪ್ರಮುಖ ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ ಇಂತಹ ಹಲವಾರು ಚಾನೆಲ್‌ಗಳು ಸಕ್ರಿಯಗೊಳ್ಳುತ್ತವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಸುಳ್ಳು ಹಕ್ಕುಗಳು, ಕ್ಲಿಕ್‌ಬೈಟ್ (clickbait) ಕಂಟೆಂಟ್‌ಗಳು ಮತ್ತು ಧೃಢೀಕರಿಸದ ಮಾಹಿತಿಗಳನ್ನು ಹರಡುವ ಮೂಲಕ ಇವು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮತ್ತು ಗೊಂದಲವನ್ನು ಸೃಷ್ಟಿಸುತ್ತವೆ. ಇಂತಹ ಲಿಂಕ್‌ಗಳು ಬಳಕೆದಾರರನ್ನು ಸ್ವಯಂಚಾಲಿತ ಬೋಟ್‌ಗಳು (bots) ಮತ್ತು ಸುಳ್ಳು ಮಾಹಿತಿಯನ್ನು ಹರಡುವ ನಕಲಿ ಗ್ರೂಪ್‌ಗಳಿಗೆ ಕರೆದೊಯ್ಯುತ್ತವೆ ಎಂದು ಸಭೆಯಲ್ಲಿ ಎತ್ತಿ ತೋರಿಸಲಾಯಿತು.

ಗುಪ್ತಚರ ಸಂಸ್ಥೆಗಳು ನೀಡಿದ ಮಾಹಿತಿಯ ಪ್ರಕಾರ, ಕೇವಲ ಕೆಲವು ನಿರ್ದಿಷ್ಟ ಫೋನ್ ಸಂಖ್ಯೆಗಳನ್ನು ಬಳಸಿಕೊಂಡು ಇಂತಹ ನಕಲಿ ಮತ್ತು ಸಂಶಯಾಸ್ಪದ ಚಾನೆಲ್‌ಗಳನ್ನು ನಿರ್ವಹಿಸಲಾಗುತ್ತಿದೆ. ಇದು ವ್ಯವಸ್ಥಿತ ಮತ್ತು ಸಂಘಟಿತ ಜಾಲವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ.

ಇದನ್ನೂ ಓದಿ: ಭಾರತ-ಇಟಲಿ ನಡುವೆ ವಿಶೇಷ ಕಾರ್ಯತಂತ್ರಾತ್ಮಕ ಪಾಲುದಾರಿಕೆ: ಪಿಎಂ ಮೋದಿ ಘೋಷಣೆ

ಶಿಕ್ಷಣ ಸಚಿವರ ಕಡಕ್ ಸೂಚನೆಗಳು

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂತಹ ಜಾಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ:

  • ಪರೀಕ್ಷೆಗೂ ಮುನ್ನ ಸುಳ್ಳು ಮಾಹಿತಿ, ಪ್ರಚಾರ ಮತ್ತು ಆತಂಕವನ್ನು ಹರಡುವ ಚಾನೆಲ್‌ಗಳನ್ನು ಮುಂಚಿತವಾಗಿಯೇ ಗುರುತಿಸಿ, ಬ್ಲಾಕ್ ಮಾಡಲು ಮತ್ತು ಅವುಗಳನ್ನು ಡಿಲೀಟ್ (takedown) ಮಾಡಲು ಆದೇಶಿಸಿದ್ದಾರೆ.
  • ಸುಳ್ಳು ಸುದ್ದಿಗಳನ್ನು ತಕ್ಷಣವೇ ತಡೆಗಟ್ಟಲು ಮತ್ತು ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡಲು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಶಿಕ್ಷಣ ಸಚಿವಾಲಯ, ಎನ್‌ಟಿಎ (NTA) ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಬೇಕು ಎಂದು ಸಚಿವರು ಒತ್ತಿಹೇಳಿದ್ದಾರೆ.
  • ವಿದ್ಯಾರ್ಥಿಗಳನ್ನು ಇಂತಹ ದಾರಿ ತಪ್ಪಿಸುವ ಜಾಲಗಳಿಂದ ರಕ್ಷಿಸುವುದು ಮತ್ತು ಪರೀಕ್ಷಾ ಪ್ರಕ್ರಿಯೆಯ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಉಳಿಸಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 7:02 pm, Wed, 20 May 26

Source link

Leave a Reply

Your email address will not be published. Required fields are marked *