Headlines

ಪಂದ್ಯಕ್ಕೆ ಕರೆದಿಲ್ಲವೆಂದು ಕ್ರಿಕೆಟ್ ಪಿಚ್ ಅನ್ನೇ ಉಳುಮೆ ಮಾಡಿದ ಭೂಪ! – Kannada News | Tractor Terror: Angry Local Ploughs Cricket Pitch Over Invitation Snub

ಕ್ರಿಕೆಟ್ ಅಂದ್ರೆ ಕ್ರೇಝ್, ಆದರೆ ಇಲ್ಲಿ ನಡೆದಿದ್ದು ಮಾತ್ರ ಕ್ರೇಝ್​ನ ಪರಮಾವಧಿ! ಪಂದ್ಯಕ್ಕೆ ಕರೆದಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಯುವಕನೊಬ್ಬ, ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕೇಳರಿಯದ ವಿಲಕ್ಷಣ ಕೃತ್ಯ ಎಸಗಿದ್ದಾನೆ. ಇಡೀ ಮೈದಾನ ಫೈನಲ್ ಪಂದ್ಯದ ಸಂಭ್ರಮದಲ್ಲಿದ್ದಾಗ, ದಿಢೀರನೆ ಟ್ರ್ಯಾಕ್ಟರ್‌ನೊಂದಿಗೆ ಎಂಟ್ರಿ ಕೊಟ್ಟ ಈ ಭೂಪ, ಇಡೀ ಪಿಚ್ ಅನ್ನೇ ಉಳುಮೆ ಮಾಡಿ ಆಯೋಜಕರಿಗೆ ಬಿಗ್ ಶಾಕ್ ನೀಡಿದ್ದಾನೆ. ಕ್ರೀಡಾ ಸ್ಫೂರ್ತಿಯೇ ಮರೆತ ಈ ಯುವಕನ ಹಠಕ್ಕೆ ಈಗ ಇಡೀ ಪಂದ್ಯಾವಳಿಯೇ ಬಲಿಯಾಗಿದೆ! ಇಂತಹದೊಂದು ವಿಧ್ವಂಸಕ ಕೃತ್ಯ ನಡೆದಿದ್ದು ಮಹಾರಾಷ್ಟದ ಜಳಗಾಂವ್ ಜಿಲ್ಲೆಯ ಧರಣಗಾಂವ್‌ನಲ್ಲಿ..!

ಘಟನೆಯ ವಿವರ:

ಧರಣಗಾಂವ್‌ನಲ್ಲಿ ‘ಜಳಗಾಂವ್ ರೂರಲ್ ಎಂಎಲ್ಎ ಕಪ್’ (Jalgaon Rural MLA Cup) ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯವು ಅತ್ಯಂತ ರೋಚಕವಾಗಿ ಸಾಗುತ್ತಿತ್ತು. ಆಟಗಾರರು ಮತ್ತು ಪ್ರೇಕ್ಷಕರು ಪಂದ್ಯದ ಸಂಭ್ರಮದಲ್ಲಿದ್ದಾಗ, ಇದ್ದಕ್ಕಿದ್ದಂತೆ ಯುವಕನೊಬ್ಬ ಟ್ರ್ಯಾಕ್ಟರ್‌ನೊಂದಿಗೆ ಮೈದಾನಕ್ಕೆ ನುಗ್ಗಿದ್ದಾನೆ.

ಅಲ್ಲದೆ ನೇರವಾಗಿ ಪಿಚ್​ನತ್ತ ಸಾಗಿದ ಯುವಕ, ಟ್ರ್ಯಾಕ್ಟರ್‌ಗೆ ಅಳವಡಿಸಿದ್ದ ನೇಗಿಲಿನಿಂದ ಪಿಚ್ ಅನ್ನು ಪೂರ್ತಿಯಾಗಿ ಉಳುಮೆ ಮಾಡಿ ಹಾಳುಗೆಡವಿದ್ದಾನೆ.

ವರದಿಗಳ ಪ್ರಕಾರ, ಈ ಕೃತ್ಯಕ್ಕೆ ಆಹ್ವಾನದ ವಿಚಾರವೇ ಮುಖ್ಯ ಕಾರಣ ಎನ್ನಲಾಗಿದೆ. ಪಂದ್ಯಾವಳಿಯ ಫೈನಲ್ ಪಂದ್ಯಕ್ಕೆ ಆತನನ್ನು ಅಥವಾ ಸ್ಥಳೀಯ ಪ್ರಮುಖ ನಾಯಕರೊಬ್ಬರನ್ನು ಆಹ್ವಾನಿಸದಿದ್ದಕ್ಕೆ ಕೋಪಗೊಂಡ ಯುವಕ ಈ ರೀತಿ ಪ್ರತಿಕ್ರಿಯಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಕೆಲ ಮೂಲಗಳ ಪ್ರಕಾರ, ಆಟಗಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸದಿದ್ದಕ್ಕೆ ಅಸಮಾಧಾನಗೊಂಡು ಆತ ಈ ವಿಧ್ವಂಸಕ ಕೃತ್ಯ ಎಸಗಿದ್ದಾನೆ.

ಆಮೇಲೇನಾಯ್ತು?

ಪಿಚ್ ಸಂಪೂರ್ಣವಾಗಿ ಹಾನಿಗೀಡಾದ ಕಾರಣ, ಅಂತಿಮ ಪಂದ್ಯವನ್ನು ತಕ್ಷಣವೇ ರದ್ದುಗೊಳಿಸಲಾಯಿತು. ಇದೀಗ ಪಿಚ್ ಮೇಲೆ ಟ್ರ್ಯಾಕ್ಟರ್ ಓಡಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇನ್ನು ಈ ಪಂದ್ಯಾವಳಿಗಾಗಿ  ಮೈದಾನವನ್ನು ಸಿದ್ಧಪಡಿಸಲು ದಿನಗಟ್ಟಲೆ ಶ್ರಮವಹಿಸಿದ್ದ ಆಯೋಜಕರು ಮತ್ತು ಆಟಗಾರರು ಈ ಘಟನೆಯಿಂದ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಐಪಿಎಲ್​ನಲ್ಲಿ ‘ದುರಾದೃಷ್ಟ’ದ ದಾಖಲೆ ಬರೆದ ಇಶಾನ್ ಕಿಶನ್

ಸದ್ಯಕ್ಕೆ ಈ ಬಗ್ಗೆ ಅಧಿಕೃತವಾಗಿ ಪೊಲೀಸ್ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿಲ್ಲವಾದರೂ, ಸ್ಥಳೀಯರಲ್ಲಿ ಈ ಘಟನೆಯು ತೀವ್ರ ಚರ್ಚೆಗೆ ಕಾರಣವಾಗಿದೆ.

Published On – 2:35 pm, Sun, 19 April 26

Source link

Leave a Reply

Your email address will not be published. Required fields are marked *