ಪತಿ ಬಿಟ್ಟು ನವವಿವಾಹಿತೆ ನಾಪತ್ತೆ; ವಿಷಯ ತಿಳಿದ ಮಾವ ಹೃದಯಾಘಾತದಿಂದ ಸಾವು!

ಪತಿ ಬಿಟ್ಟು ನವವಿವಾಹಿತೆ ನಾಪತ್ತೆ; ವಿಷಯ ತಿಳಿದ ಮಾವ ಹೃದಯಾಘಾತದಿಂದ ಸಾವು!

ಕೊಪ್ಪಳ, ಮಾರ್ಚ್​​ 26: ಮದುವೆ ಎಂಬುದು ಎರಡು ಕುಟುಂಬಗಳ ನಡುವೆ ಹೊಸ ಸಂಬಂಧ ಬೆಸೆಯುವ ಸೇತುವೆ. ಬಲಗಾಲಿಟ್ಟು ಪತಿ ಮನೆಗೆ ಬರುವವಳು ತಮ್ಮ ಮನೆಯನ್ನು ಬೆಳಗಿಸುತ್ತಾಳೆ. ವಂಶೋದ್ಧಾರಕ್ಕೆ ಆಕೆ ಕಾರಣವಾಗುತ್ತಾಳೆ ಎಂಬ ಭಾವನೆ ನಮ್ಮಲ್ಲಿದೆ. ಆದರೆ ಇತ್ತೀಚಿಗೆ ಇವುಗಳಿಗೆ ವಿರುದ್ಧ ಎಂಬಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಮದುವೆಯಾಗಿ ಕೆಲ ದಿನಗಳ ಒಳಗೆಯೇ ನಾನಾ ಕಾರಣಕ್ಕೆ ದಾಂಪತ್ಯ ಸಂಬಂಧ ಹಳಸಿ ಅದೆಷ್ಟೋ ಕುಟುಂಬಗಳು ಸರ್ವನಾಶ ಆದ ಉದಾಹರಣೆಯನ್ನೂ ಕೇಳಿದ್ದೇವೆ. ಇಂತಹುದ್ದೇ ಮನಕಲಕುವ ಘಟನೆಯೊಂದೀಗ ಕರ್ನಾಟಕದ ಕೊಪ್ಪಳದಲ್ಲಿ ನಡೆದಿದೆ.

ಮೂಲತಃ ಕೊಪ್ಪಳದ ಗೌರಿ ಅಂಗಳ ನಿವಾಸಿ ನಾಗರಾಜ್​​ ಎಂಬವರ ವಿವಾಹ ರಾಯಚೂರ ಜಲ್ಲೆಯ ಸಿಂದನೂರಿನ ಸಂಜನಾ ಎಂಬಾಕೆಯ ಜೊತೆ ಫೆಬ್ರವರಿ 8ರಂದು ನಡೆದಿತ್ತು. ಎರಡೂ ಕುಟುಂಬಳ ಪರಸ್ಪರ ಒಪ್ಪಿಗೆಯ ಮೇಲೆಯೇ ಕೊಪ್ಪಳದ ಪಾರ್ಥಾ ಕಲ್ಯಾಣ ಮಂಟಪದಲ್ಲಿ ಮದುವೆಕಾರ್ಯ ನೆರವೇರಿತ್ತು. ಆ ಬಳಿಕ ದಂಪತಿ ನಾಗರಾಜ್​​ ಅವರ ಮನೆಯ ಮೇಲಿನ ಮಹಡಿಯಲ್ಲಿ ವಾಸವಿದ್ದರು. ಈ ನಡುವೆ ಮಾರ್ಚ್​​ 21ರ ರಾತ್ರಿ ರಾತ್ರಿ 8.30ರ ಸುಮಾರಿಗೆ ಸಂಜನಾ ತನಗೆ ಆರೋಗ್ಯ ಸರಿ ಇಲ್ಲದ ಕಾರಣ ಔಷಧ ತರುವಂತೆ ಪತಿ ನಾಗರಾಜ್​​ಗೆ ತಿಳಿಸಿದ್ದಾಳೆ. ಹೀಗಾಗಿ ಮಾತ್ರೆ ತರಲೆಂದು ತೆರಳಿದ್ದ ನಾಗರಾಜ್​​ 15 ನಿಮಿಷಗಳ ಬಳಿಕ ಮನೆಗೆ ಹಿಂದಿರುಗಿದ್ದಾರೆ. ಆದರೆ ಆ ವೇಳೆ ಹೆಂಡತಿ ಸಂಜನಾ ಮನೆಯಲ್ಲಿ ಇಲ್ಲದಿರೋದು ಗಮನಕ್ಕೆ ಬಂದಿದೆ. ಹೀಗಾಗಿ ಕೆಳ ಮಹಡಿಯಲ್ಲಿರುವ ಸಹೋದರನ ಮನೆಗೆ ತೆರಳಿ ನಾಗರಾಜ್​​ ಪತ್ನಿ ಬಗ್ಗೆ ವಿಚಾರಿಸಿದ್ದಾರೆ. ಆದರೆ ಆಕೆ ಇಲ್ಲಿಗೆ ಬಂದಿಲ್ಲ ಎಂಬ ಉತ್ತರ ದೊರೆತಿದೆ. ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದಾಗಲೂ ಆಕೆಯ ಬಗ್ಗೆ ಮಾಹಿತಿ ಸಿಗದ ಕಾರಣ ಪತಿ ನಾಗರಾಜ್​​ ಈ ಬಗ್ಗೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ತುಂಗಭದ್ರಾ ಎಡದಂಡೆ ಕಾಲುವೆ ಭಾಗದ ರೈತರಿಗೆ ಗುಡ್​ನ್ಯೂಸ್; ಸಚಿವರಿಂದ ಮಹತ್ವದ ಭರವಸೆ

ಈ ನಡುವೆ ಮನಕಲಕುವ ಘಟನೆಯೊಂದು ನಡೆದಿದೆ. ಸೊಸೆ ನಾಪತ್ತೆಯಾಗಿರುವ ವಿಚಾರ ತಿಳಿದ ನಾಗರಾಜ್​​ ತಂದೆ ಖಂಡೆಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಂಜನಾ ವಿಚಾರವಾಗಿ ಅವರು ಮಾನಸಿಕವಾಗಿ ತೀವ್ರ ನೊಂದಿದ್ದರು ಎನ್ನಲಾಗಿದೆ. ಇನ್ನು ನಾಪತ್ತೆಯಾಗಿರುವ ನವ ವಿವಾಹಿತೆ ತವರು ಮನೆಗೂ ತೆರಳಿಲ್ಲ ಎನ್ನಲಾಗಿದ್ದು, ಆಕೆಯ ಸಹೋದರ ಕೂಡ ಹುಡುಕಾಟ ನಡೆಸುತ್ತಿದ್ದಾರೆ. ಸಂಜನಾ ಕೈಯಲ್ಲಿ ರವಿ ಎಂಬ ಟ್ಯಾಟೂ ಇರೋದಾಗಿ ದೂರಿನಲ್ಲಿ‌ ಉಲ್ಲೇಖಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *