ಬೆಳಗಾವಿ, ಜುಲೈ 05: ಪಶ್ಚಿಮ ಘಟ್ಟ ಮತ್ತು ಕನಕುಂಬಿ ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯು ಮಲಪ್ರಭಾ ನದಿಗೆ ಜೀವಕಳೆ ತಂದಿದೆ. ನದಿ ಈಗ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇದರ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಬ್ಬನಟ್ಟಿ ಗ್ರಾಮದ ಹೊರವಲಯದಲ್ಲಿರುವ ಪುರಾತನ ಮಾರುತಿ ಮಂದಿರ ಭಾಗಶಃ ಜಲಾವೃತಗೊಂಡಿದೆ.
ಮಂದಿರದ ಗರ್ಭಗುಡಿ ಸೇರಿದಂತೆ ರಾಮ, ಲಕ್ಷ್ಮಣ, ಸೀತಾ ಮೂರ್ತಿಗಳು ಮತ್ತು ಶಿವನ ಮಂದಿರ ಕೂಡ ಈಗಾಗಲೇ ನೀರಿನಲ್ಲಿ ಮುಳುಗಿವೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ದೇವಾಲಯವು ಮುಳುಗಡೆಯಾಗುವುದು ಸಾಮಾನ್ಯವಾಗಿದ್ದು, ಕೆಲವೊಮ್ಮೆ ನಾಲ್ಕು ತಿಂಗಳ ಕಾಲ ನೀರಿನಲ್ಲೇ ನಿಂತಿರುತ್ತದೆ. ನಿರಂತರ ಮಳೆಯಿಂದಾಗಿ ದೇವಾಲಯ ಸಂಪೂರ್ಣವಾಗಿ ಮುಳುಗಡೆಯಾಗುವ ಸಾಧ್ಯತೆ ಇದೆ.
ಭಕ್ತರು ನೀರಿನಿಂದ ಜಲಾವೃತಗೊಂಡಿರುವ ದೇವರ ದರ್ಶನವನ್ನು ದೇವಾಲಯದ ಹೊರಭಾಗದಲ್ಲೇ ನಿಂತುಕೊಂಡು ಮಾಡುತ್ತಿದ್ದಾರೆ. ಈ ಮಳೆಯಿಂದಾಗಿ ರೈತರ ಮುಖದಲ್ಲಿ ಸಂತಸ ಮೂಡಿದೆ. ನದಿ ತಟದಲ್ಲಿರುವ ಜಮೀನುಗಳು ಮತ್ತು ಇತರ ದೇವಾಲಯಗಳು ಕೂಡ ಜಲಾವೃತಗೊಳ್ಳುತ್ತಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ