Headlines

ಪಶ್ಚಿಮ ಬಂಗಾಳದಲ್ಲಿ ಜೈಶ್ ಉಗ್ರ ಹಮೀದ್ ಮಂಡಲ್ ಬಂಧನ: ಸಿಎಂ ಸುವೇಂದು ಕಾರ್ಯಕ್ರಮಗಳ ಮೇಲೆ ಕಣ್ಣು – Kannada News | West Bengal: JeM Terrorist Hamid Mondal Arrested, Monitored CM, Huge Explosives Seized

ಕೋಲ್ಕತ್ತಾ, ಜುಲೈ 31: ಪಶ್ಚಿಮ ಬಂಗಾಳದ ಬರ್ಧಮಾನ್‌ನಲ್ಲಿ ಭಯೋತ್ಪಾದನಾ ವಿರೋಧಿ ಪಡೆ (STF) ನಡೆಸಿದ ಕಾರ್ಯಾಚರಣೆಯಲ್ಲಿ ‘ಜೈಶ್-ಎ-ಮೊಹಮ್ಮದ್’ (JeM) ಉಗ್ರ ಸಂಘಟನೆಯ ಸಕ್ರಿಯ ಸದಸ್ಯ ಹಮೀದ್ ಮಂಡಲ್ ಎಂಬುವವನನ್ನು ಶುಕ್ರವಾರ ಬಂಧಿಸಲಾಗಿದೆ. ಬಂಧಿತ ಉಗ್ರನಿಂದ ವಶಪಡಿಸಿಕೊಂಡ ಮೊಬೈಲ್ ಫೋನ್ ಮತ್ತು ಪ್ರಮುಖ ದಾಖಲೆಗಳನ್ನು ವಿಶ್ಲೇಷಿಸಿರುವ ಎಸ್‌ಟಿಎಫ್ ಪಡೆಗಳು, ಆತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳ ಕಾರ್ಯಕ್ರಮಗಳನ್ನು ಲಕ್ಷ್ಯವಿಟ್ಟು ವಿಐಪಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಎಂಬ ಭಾರಿ ಶಂಕೆ ವ್ಯಕ್ತಪಡಿಸಿವೆ.

ಬರ್ಧಮಾನ್‌ನ ನವೋದಯ ಟೌನ್‌ಶಿಪ್ ಪ್ರದೇಶದ ಬಾಡಿಗೆ ಫ್ಲಾಟ್‌ ಒಂದರ ಮೇಲೆ ಎಸ್‌ಟಿಎಫ್ ಪೊಲೀಸರು ದಾಳಿ ನಡೆಸಿ ಹಮೀದ್ ಮಂಡಲ್‌ನನ್ನು ವಶಕ್ಕೆ ಪಡೆದಿದ್ದಾರೆ. ಈತ ತನಿಖಾ ಸಂಸ್ಥೆಗಳ ಕಣ್ಣು ತಪ್ಪಿಸಲು ಕಳೆದ 2-3 ತಿಂಗಳುಗಳಿಂದ ರಹಸ್ಯವಾಗಿ ಈ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ. ಪೊಲೀಸ್ ಮೂಲಗಳ ಪ್ರಕಾರ, ಬಂಧಿತ ಮಂಡಲ್ 2019 ರ ಭೀಕರ ಪುಲ್ವಾಮಾ ಆತ್ಮಾಹುತಿ ದಾಳಿಯ ಮುಖ್ಯ ರೂವಾರಿಗಳಲ್ಲೊಬ್ಬನಾಗಿದ್ದ ಸಜ್ಜದ್ ಭಟ್ ನ ತೀರಾ ಆಪ್ತ ಸಹಚರನಾಗಿದ್ದಾನೆ.

ಆತ ಜುಲೈ 9 ರಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳ ಪ್ರವಾಸ ಹಾಗೂ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ತೀವ್ರವಾಗಿ ಗಮನಿಸುತ್ತಿದ್ದದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇನ್ನೊಂದೆಡೆ, ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ನಲ್ಹತಿ ಪ್ರದೇಶದ ಪಾಳುಬಿದ್ದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ಭಾರಿ ಪ್ರಮಾಣದ ಅಕ್ರಮ ಸ್ಫೋಟಕಗಳನ್ನು ಜಪ್ತಿ ಮಾಡಿದ್ದಾರೆ:

ವಶಪಡಿಸಿಕೊಂಡ ಸ್ಫೋಟಕಗಳು

800ಕೆಜಿಗೂ ಹೆಚ್ಚು ಅಮೋನಿಯಂ ನೈಟ್ರೇಟ್

1,200 ಕ್ಕೂ ಹೆಚ್ಚು ಜೆಲಾಟಿನ್ ಸ್ಟಿಕ್‌ಗಳು

105 ಡಿಟೋನೇಟರ್‌ಗಳು

36 ಸ್ಫೋಟಕ ಫ್ಯೂಸ್ ಕಾಯಿಲ್‌ಗಳು

ಅಷ್ಟು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದರ ಉದ್ದೇಶವೇನು ಹಾಗೂ ಉಗ್ರ ಹಮೀದ್ ಮಂಡಲ್‌ಗೂ ಈ ಸ್ಫೋಟಕಗಳಿಗೂ ಲಿಂಕ್ ಇದೆಯೇ ಎಂಬುದರ ಕುರಿತು ಎಸ್‌ಟಿಎಫ್ ಮತ್ತು ಸ್ಥಳೀಯ ಪೊಲೀಸರು ಜಂಟಿ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: ಜಮ್ಮು-ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಉಗ್ರರ ಗುಂಡಿನ ದಾಳಿ; ಪೋಲೀಸ್ ಕಾನ್​ಸ್ಟೆಬಲ್ ಹುತಾತ್ಮ

2019 ರ ಪುಲ್ವಾಮಾ ಭೀಕರ ದಾಳಿ: ಫೆಬ್ರವರಿ 14, 2019 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ ಕಾರನ್ನು ಸಿಆರ್‌ಪಿಎಫ್ (CRPF) ಯೋಧರ ಬಸ್‌ಗೆ ಡಿಕ್ಕಿ ಹೊಡೆಸಿದ್ದನು. ಈ ಭೀಕರ ದಾಳಿಯಲ್ಲಿ 40 ಭಾರತೀಯ ಯೋಧರು ವೀರಮರಣ ಅಪ್ಪಿದ್ದರು.

ಮುಂಬರುವ ಹಬ್ಬದ ಸೀಸನ್ ಹಾಗೂ ರಾಜಕೀಯ ಬೆಳವಣಿಗೆಗಳ ನಡುವೆ ಬಂಗಾಳದಲ್ಲಿ ಜೈಶ್ ಜಾಲ ಪತ್ತೆಯಾಗಿರುವುದು ಹಾಗೂ ಭಾರಿ ಪ್ರಮಾಣದಲ್ಲಿ ಸ್ಫೋಟಕ ಸಿಕ್ಕಿರುವುದು ಇಡೀ ಪೂರ್ವ ಭಾರತದಲ್ಲಿ ಹೈ ಅಲರ್ಟ್‌ಗೆ ಕಾರಣವಾಗಿದೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಾಗುವುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *