ಪಾಕ್ ಉಗ್ರನ ಜೊತೆ ರಾಜ್ಯದ ಇಬ್ಬರ ಲಿಂಕ್: ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲು! – Kannada News

ಪಾಕ್ ಮೂಲದ ವ್ಯಕ್ತಿ ಜೊತೆ ರಾಜ್ಯದ ಇಬ್ಬರು ನಂಟು

ತುಮಕೂರು, ಜೂನ್ 08: ಪಾಕಿಸ್ತಾನ (Pakistan) ಮೂಲದ ಶಂಕಿತ ಉಗ್ರನೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ತುಮಕೂರು ಮತ್ತು ದಾವಣಗೆರೆ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಅತ್ಯಂತ ಭಯಾನಕ ಸಂಚು ಬಯಲಾಗಿದೆ. ಇನ್‌ಸ್ಟಾಗ್ರಾಮ್ ಮೂಲಕ ಯುವಕರನ್ನು ಸಂಪರ್ಕಿಸಿ, ಬ್ರೈನ್‌ವಾಶ್ ಮಾಡಿ ದೇಶದಲ್ಲಿ ಕುಕೃತ್ಯಕ್ಕೆ ಪಾಕ್ ಉಗ್ರ ರಾಣಾ ಸಂಚು ರೂಪಿಸಿದ್ದ ಕಹಾನಿಯನ್ನು ತನಿಖೆಯ ವೇಳೆ ಹೊರಬಂದಿದೆ.

ಮುಖ್ಯಾಂಶಗಳು

  • ತುಮಕೂರಿನಲ್ಲಿ ಪಾಕ್ ಉಗ್ರನ ಜೊತೆ ನಂಟು ಹೊಂದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
  • ಇನ್‌ಸ್ಟಾಗ್ರಾಮ್ ಚಾಟಿಂಗ್ ಮೂಲಕ ಯುವಕರ ಬ್ರೈನ್‌ವಾಶ್ ಮಾಡಿರುವುದು ವಿಚಾರಣೆಯಲ್ಲಿ ಬಯಲಾಗಿದೆ.
  • ಕುಕೃತ್ಯಕ್ಕಾಗಿ 50 ರಿಂದ 60 ಜನರನ್ನು ಸಿದ್ಧಪಡಿಸಲು ಸಂಚು ರೂಪಿಸಲಾಗಿತ್ತು.

ಕಳೆದ ಒಂದು ತಿಂಗಳ ಹಿಂದೆಯಷ್ಟೇ ಇನ್‌ಸ್ಟಾಗ್ರಾಮ್ ಮೂಲಕ ಯುವಕರಿಗೆ ಪರಿಚಯವಾಗಿದ್ದ ಪಾಕಿಸ್ತಾನದ ರಾಣಾ ಎಂಬಾತ, ಆರಂಭದಲ್ಲಿ ಧರ್ಮದ ಆಚರಣೆ ಹಾಗೂ ಧರ್ಮಗುರುಗಳ ಪ್ರವಚನಗಳನ್ನು ಹಂಚಿಕೊಳ್ಳುತ್ತಿದ್ದನು. ಆ ನಂತರ ಧರ್ಮಕ್ಕಾಗಿ ಕೆಲಸ ಮಾಡಬೇಕು ಎಂದು ಬಂಧಿತ ಅಲ್ಲಾಬಕ್ಷು ತಲೆಯಲ್ಲಿ ವಿಷ ತುಂಬಿ ಬ್ರೈನ್‌ವಾಶ್ ಮಾಡಿದ್ದ ಎನ್ನಲಾಗಿದೆ. ಅಲ್ಲಾಬಕ್ಷು ಮೊಬೈಲ್‌ನಲ್ಲಿ ಪಾಕಿಸ್ತಾನದ ಕೋಡ್ ಹೊಂದಿರುವ ನಂಬರ್ ಪತ್ತೆಯಾಗಿದ್ದು, ಅದನ್ನು ‘Rana bhi bhi’ ಎಂದು ಆತ ಸೇವ್ ಮಾಡಿಕೊಂಡಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.

ಆರೋಪಿಗಳ ಎಕ್ಸ್‌ಕ್ಲೂಸಿವ್ ಚಾಟ್ ಬಯಲು

ಪಾಕ್ ಉಗ್ರ ರಾಣಾ ಸಂಪರ್ಕಕ್ಕೆ ಸಿಕ್ಕ ಬಳಿಕ ಅಲ್ಲಾಬಕ್ಷು ಇನ್‌ಸ್ಟಾಗ್ರಾಮ್‌ನಲ್ಲಿ ಹಿಂದಿ ಭಾಷೆಯಲ್ಲಿ ನಡೆಸಿದ ಚರ್ಚೆಯ ಇನ್‌ಸೈಡ್ ಮಾಹಿತಿ ಲಭ್ಯವಾಗಿದೆ. ರಾಣಾ ಪ್ರಚೋದನೆಗೆ ಮಾರುಹೋಗಿದ್ದ ಅಲ್ಲಾಬಕ್ಷು ಆತನಿಗೆ, “ಇನ್ಷಾ ಅಲ್ಲಾ, ಯಾವುದೇ ಕೆಲಸ ಇರಲಿ, ಯಾವುದೇ ರೀತಿಯ ಕೆಲಸ ಇರಲಿ, ನಿನ್ನ ತಮ್ಮನನ್ನು ನೆನಪಿಸಿಕೊ. ನಾನು ಖಂಡಿತವಾಗಲೂ ಮಾಡುತ್ತೇನೆ” ಎಂದು ಭರವಸೆ ನೀಡಿದ್ದನು. ಅಷ್ಟೇ ಅಲ್ಲದೆ, “ಇನ್ಷಾ ಅಲ್ಲಾ ಈಗ ನಾವಿಬ್ಬರು ಜೊತೆಯಾಗಿದ್ದೇವೆ. ನಮ್ಮ ಕೋಮಿಗೋಸ್ಕರ ಜೊತೆಯಾಗಿ ಕೆಲಸ ಮಾಡೋಣ” ಎಂದು ಹೇಳಿರುವುದು ಪತ್ತೆಯಾಗಿದೆ.

50 ರಿಂದ 60 ಮಂದಿಯನ್ನು ತಯಾರು ಮಾಡು ಎಂದಿದ್ದ ರಾಣಾ

“ದೇವರ ಕೆಲಸ ನಾವೆಲ್ಲಾ ಒಟ್ಟಾಗಿ ಮಾಡೋಣ” ಎಂದು ಹೇಳುತ್ತಿದ್ದ ರಾಣಾ, ಅಲ್ಲಾಬಕ್ಷುಗೆ ದ್ವೇಷದ ತರಬೇತಿ ನೀಡಿದ್ದ. “ನಮ್ಮ ಧರ್ಮದವರನ್ನು ದ್ವೇಷಿಸುವವರನ್ನು ಹಂತ ಹಂತವಾಗಿ ನಾಶ ಮಾಡಬೇಕು. ಅದಕ್ಕಾಗಿ 50 ರಿಂದ 60 ಮಂದಿಯನ್ನು ತಯಾರು ಮಾಡು. ನಾನು ಹೇಳಿದ ಹಾಗೆ ಅವರಿಗೆ ತರಬೇತಿ ನೀಡು, ನಿನಗೆ ಎಷ್ಟು ಹಣ ಬೇಕೋ ಅಷ್ಟು ನಾನು ಕೊಡುತ್ತೇನೆ” ಎಂದು ಆಮಿಷ ಒಡ್ಡಿದ್ದ.

ಇದೇ ವೇಳೆ ಅಲ್ಲಾಬಕ್ಷು, “ನೀನು ಭಾರತದಲ್ಲಿ ಬೇರೆ ಯಾರನ್ನಾದರೂ ಸಂಪರ್ಕಿಸಿದ್ದೀಯಾ?” ಎಂದು ಪ್ರಶ್ನಿಸಿದಾಗ, ರಾಣಾನೇ ಆತನಿಗೆ ಜಮೀರ್ ಖಾನ್ ಎಂಬ ಮತ್ತೊಬ್ಬನನ್ನು ಪರಿಚಯಿಸಿದ್ದ. ಈ ಇಬ್ಬರು ಜೊತೆಯಾಗಿ ದೇಶ ವಿರೋಧಿ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಬೆನ್ನಲ್ಲೇ ಕೇಂದ್ರ ಗುಪ್ತಚರ ಇಲಾಖೆಗೆ ಮಹತ್ವದ ಸುಳಿವು ಲಭ್ಯವಾಗಿದೆ.

ಇದನ್ನೂ ಓದಿ ಪಾಕ್ ಉಗ್ರನ ಜತೆ ಸಂಪರ್ಕ ಹೊಂದಿದ್ದ ಇಬ್ಬರ ಬಂಧನ: ಕರ್ನಾಟಕದಲ್ಲಿ ಬೇರೂರುತ್ತಿವೆ ಉಗ್ರರ ಸ್ಲೀಪರ್ ಸೆಲ್!

ಕೂಡಲೇ ಅಲರ್ಟ್ ಆದ ಗುಪ್ತಚರ ಇಲಾಖೆ ನೀಡಿದ ನಿಖರ ಮಾಹಿತಿ ಆಧರಿಸಿ ತುಮಕೂರು ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಖಾಕಿ ಪಡೆ ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಭಯೋತ್ಪಾದನಾ ಸಂಚಿನ ಮತ್ತಷ್ಟು ಆಳವಾದ ಸಂಗತಿಗಳನ್ನು ಕೆದಕುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:55 am, Mon, 8 June 26

Source link

Leave a Reply

Your email address will not be published. Required fields are marked *