ಬೆಂಗಳೂರು, ಜೂ.29: ಮಳೆಗಾಲದ ಜಿಟಿಜಿಟಿ ವಾತಾವರಣ ಶುರುವಾಗುತ್ತಿದ್ದಂತೆಯೇ ವಿಷಪೂರಿತ ಉರಗಗಳು ಬೆಚ್ಚಗಿನ ಜಾಗ ಹುಡುಕಿಕೊಂಡು ಮನೆಗಳ ಒಳಗೆ ನುಗ್ಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದೀಗ ನೆಲಮಂಗಲ ನಗರದ ರಾಶಿ ಗೇಟ್ ವೇ ಬಡಾವಣೆಯಲ್ಲಿ ಇಂತಹದ್ದೇ ಒಂದು ಮೈ ಜುಂ ಎನಿಸುವ ಘಟನೆ ನಡೆದಿದ್ದು, ಮನೆಯ ಹೊರಗಿದ್ದ ಶೂ ರ್ಯಾಕ್ ಒಳಗೆ ದೈತ್ಯ ನಾಗರಹಾವೊಂದು ಪ್ರತ್ಯಕ್ಷವಾಗಿದೆ. ಮನೆಯೊಂದರಲ್ಲಿ ಯುವಕನೊಬ್ಬ ಹೊರಗೆ ಹೋಗಲೆಂದು ಶೂ ರ್ಯಾಕ್ನಿಂದ ಶೂ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಆತನ ಅರಿವಿಗೂ ಬಾರದಂತೆ ಶೂಗಳ ಮಧ್ಯೆ ಸುರುಳಿ ಸುತ್ತಿಕೊಂಡು ಕುಳಿತಿದ್ದ ದೈತ್ಯ ನಾಗರಹಾವು ಪ್ರತ್ಯಕ್ಷವಾಗಿದೆ. ಯುವಕ ತೀವ್ರ ಆತಂಕಕ್ಕೆ ಒಳಗಾಗಿ, ಕಿರುಚಾಡುತ್ತಾ ಹಿಂದಕ್ಕೆ ಓಡಿದ್ದಾನೆ. ಕೂಡಲೇ ಕುಟುಂಬಸ್ಥರು ನೆಲಮಂಗಲದ ಪ್ರಸಿದ್ಧ ಉರಗ ರಕ್ಷಕ ಸ್ನೇಕ್ ಅರುಣ್ ಅವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಉರಗ ರಕ್ಷಕ ಅರುಣ್ ಅವರು, ಶೂ ರ್ಯಾಕ್ನಲ್ಲಿ ಅತ್ಯಂತ ಜಾಗರೂಕತೆಯಿಂದ ಅಡಗಿ ಕುಳಿತಿದ್ದ ನಾಗರಹಾವನ್ನು ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಅದನ್ನು ಯಾರಿಗೂ ತೊಂದರೆಯಾಗದಂತೆ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ