
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2019ರಲ್ಲಿ ಆರಂಭವಾಗಿದ್ದು, ರೈತರ ವ್ಯವಸಾಯಕ್ಕೆ ಧನಸಹಾಯ ಮಾಡುವ ಉದ್ದೇಶ ಹೊಂದಿದೆ. ಸ್ವಂತ ಕೃಷಿ ಭೂಮಿ ಹೊಂದಿರುವ ರೈತರು ಈ ಯೋಜನೆ ಅಡಿ ವರ್ಷಕ್ಕೆ 6,000 ರೂ ಅನ್ನು ಪಡೆಯಬಹುದು. ಇದನ್ನು ವರ್ಷಕ್ಕೆ ಮೂರು ಕಂತುಗಳಲ್ಲಿ ಕೇಂದ್ರ ಸರ್ಕಾರ ನೀಡುತ್ತದೆ. ಇಲ್ಲಿಯವರೆಗೆ ಒಟ್ಟು 22 ಕಂತುಗಳ ಹಣವನ್ನು ಬಿಡುಗಡೆ ಮಾಡಲಾಗಿದೆ. ಒಟ್ಟಾರೆ 4.25 ಲಕ್ಷ ಕೋಟಿ ರೂ ಅನ್ನು ಸರ್ಕಾರವು ರೈತರಿಗೆ ನೀಡಿದೆ.
ಪಿಎಂ ಕಿಸಾನ್ ಯೋಜನೆಯಲ್ಲಿ ಫಲಾನುಭವಿ ರೈತರಿಗೆ ಸರ್ಕಾರ ನೇರ ಹಣ ವರ್ಗಾವಣೆ ಸಿಸ್ಟಂ (ಡಿಬಿಟಿ) ಮೂಲಕ ಹಣ ನೀಡುತ್ತದೆ. ರೈತರ ನೊಂದಾಯಿತ ಬ್ಯಾಂಕ್ ಖಾತೆಗೆ ಹಣ ನೇರವಾಗಿ ಜಮೆ ಆಗುತ್ತದೆ. ಇದು ವಿಶ್ವದ ಅತಿದೊಡ್ಡ ಡಿಬಿಟಿ ಸ್ಕೀಮ್ ಎಂದು ದಾಖಲೆ ಸ್ಥಾಪಿಸಿದೆ.
ಇದನ್ನೂ ಓದಿ: ಹೂಡಿಕೆದಾರರನ್ನು ಸೆಳೆಯುತ್ತಿವೆ ವ್ಯಾಲ್ಯೂ ಮ್ಯೂಚುವಲ್ ಫಂಡ್ಗಳು; ಏನಿವುಗಳ ವಿಶೇಷತೆ?
ಪಿಎಂ ಕಿಸಾನ್ ಯೋಜನೆಗೆ ಯಾರು ಅರ್ಹರು, ಯಾರು ಅರ್ಹರಲ್ಲ?
ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸುವವರು ಭಾರತೀಯ ಪ್ರಜೆಯಾಗಿರಬೇಕು; ಸ್ವಂತ ಕೃಷಿ ಭೂಮಿ ಹೊಂದಿರಬೇಕು. ಇವು ಮೂಲಭೂತ ಅರ್ಹತೆ ಅಂಶಗಳು. ಹಾಗೆಯೇ, ರೈತರಾಗಿದ್ದಾಗ್ಯೂ ಕೆಲವೊಂದಿಷ್ಟು ಅಂಶಗಳು ಯೋಜನೆಗೆ ಅನರ್ಹಗೊಳಿಸುತ್ತವೆ. ಅವುಗಳೇನು ಎನ್ನುವ ವಿವರ ಇಲ್ಲಿದೆ.
ರೈತರಾದರೂ ಈ ಕೆಳಗಿನವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಯೋಜನೆ ಅಲಭ್ಯ
- ಹಾಲಿ ಮತ್ತು ಮಾಜಿ ಶಾಸಕರು, ಸಂಸದರು, ಜಿಪಂ ಸದಸ್ಯರು
- ವಕೀಲರು, ವೈದ್ಯರು, ಆರ್ಟಿಟೆಕ್ಟ್ ಇತ್ಯಾದಿ ವೃತ್ತಿಪರರು
- ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು
- ನಿವೃತ್ತಗೊಂಡು ಮಾಸಿಕ 10,000 ರೂಗೂ ಅಧಿಕ ಪಿಂಚಣಿ ಪಡೆಯುತ್ತಿರುವವರು
- ಐಟಿ ರಿಟರ್ನ್ಸ್ ಕಟ್ಟುತ್ತಿರುವವರು
- 2019ರ ನಂತರ ಜಮೀನು ಖರೀದಿ ಮಾಡಿರುವವರು.
ಮತ್ತೊಂದು ಸಂಗತಿ ಎಂದರೆ, ಒಂದೇ ಕುಟುಂಬದಲ್ಲಿ ಇಬ್ಬರಿಗೆ ಈ ಯೋಜನೆ ಫಲಾನುಭವಿಯಾಗಲು ಅವಕಾಶ ಇರುವುದಿಲ್ಲ. ಒಬ್ಬರಿಗೆ ಮಾತ್ರವೇ ಅವಕಾಶ ಇರುತ್ತದೆ.
ಇದನ್ನೂ ಓದಿ: ನಾಮಿನಿ ಹೆಸರಿಸದೆಯೇ ಹೂಡಿಕೆದಾರ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹೂಡಿಕೆಗೆ ಏನಾಗುತ್ತದೆ?
ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸುವುದು ಹೇಗೆ?
- ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಹೋಗಿ. ಅದರ ವಿಳಾಸ: pmkisan.gov.in/
- ಮುಖ್ಯಪುಟದಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಇರುತ್ತದೆ. ಅಲ್ಲಿ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಅನ್ನು ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ನಂಬರ್ ಹಾಕಿ, ಕ್ಯಾಪ್ಚಾ ನಮೂದಿಸಿ.
- ಅಲ್ಲಿ ಕೇಳಲಾಗುವ ವಿವರಗಳನ್ನು ಭರ್ತಿ ಮಾಡಿ, ‘ಯೆಸ್’ ಕ್ಲಿಕ್ ಮಾಡಿ.
- ಪಿಎಂ ಕಿಸಾನ್ ಅಪ್ಲಿಕೇಶನ್ ಫಾರ್ಮ್ ತೆರೆಯುತ್ತದೆ. ಅಲ್ಲಿ ಮಾಹಿತಿ ತುಂಬಿಸಿ, ಸೇವ್ ಮಾಡಿ.
- ರೆಫರೆನ್ಸ್ಗೆಂದು ಒಂದು ಪ್ರಿಂಟೌಟ್ ಬೇಕಾದರೆ ತೆಗೆದುಕೊಳ್ಳಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ