ಮಂಡ್ಯ, ಆ.14: ಶ್ರೀರಂಗಪಟ್ಟಣದ ಆರತಿ ಉಕ್ಕಡ ದೇವಸ್ಥಾನದಲ್ಲಿ ಕರ್ತವ್ಯನಿರತ ಮಹಿಳಾ ಪಿಎಸ್ಐ ಮೇಲೆ ಶಾಸಕರ ಪುತ್ರಿ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್ಗೌಡ ಅವರು ತಮ್ಮ ಮಗಳ ಪರವಾಗಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
“ಯಾರೇ ಆಗಿರಲಿ ತಪ್ಪು ಮಾಡಿದ್ದರೆ ಕಾನೂನಿನಂತೆ ಶಿಕ್ಷೆಯಾಗಲಿ, ನಾವು ಸಾರ್ವಜನಿಕ ಜೀವನದಲ್ಲಿರುವಾಗ ತಾಳ್ಮೆ ಕಳೆದುಕೊಳ್ಳಬಾರದು” ಎಂದು ಸುರೇಶ್ಗೌಡ ಅವರು ಹೇಳಿದ್ದಾರೆ. “ಭೀಮನ ಅಮಾವಾಸ್ಯೆಯ ದಿನ ನನ್ನ ಮಗಳು ಚಿಕ್ಕ ಮಕ್ಕಳನ್ನು ಕರೆದುಕೊಂಡು ಆರತಿ ಉಕ್ಕಡ ದೇವಸ್ಥಾನಕ್ಕೆ ಹೋಗಿ ಸರತಿ ಸಾಲಿನಲ್ಲಿ ನಿಂತಿದ್ದಳು. ಒಳಗೆ ಬಿಡುವಂತೆ ಪಿಎಸ್ಐ ಅವರಿಗೆ ಕೇಳಿದಾಗ, ಅದೇ ಸಮಯದಲ್ಲಿ ಇನ್ನೊಬ್ಬರನ್ನು ಬಿಟ್ಟಿದ್ದಕ್ಕೆ ಮಾತಿಗೆ ಮಾತು ಬೆಳೆದು ವಾಗ್ವಾದವಾಗಿದೆ.” ಎಂದು ಹೇಳಿದರು.
“ನನ್ನ ಮಗಳು ಕಪಾಳಕ್ಕೆ ಹೊಡೆದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಬಹಳ ಒತ್ತಡದಲ್ಲಿರುತ್ತಾರೆ. ಸಾರ್ವಜನಿಕ ಜೀವನದಲ್ಲಿರುವ ನಾವುಗಳು ಅಹಂಕಾರ ಪಡಬಾರದು ಹಾಗೂ ತಾಳ್ಮೆ ಕಳೆದುಕೊಳ್ಳಬಾರದಿತ್ತು. ಮಗಳ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. “ಯಾರೇ ಆಗಿರಲಿ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ, ಕಾನೂನು ಏನಿದೆ ಅದನ್ನು ನಾವು ಎದುರಿಸುತ್ತೇವೆ. ನನ್ನ ಮಗಳು ನೀಡಿದ್ದ ದೂರನ್ನು ಹಿಂಪಡೆಯಬೇಕಿತ್ತು. ನಾವು ಮತ್ತು ನಮ್ಮ ಕುಟುಂಬದವರೆಲ್ಲರೂ ದೈವಭಕ್ತರು, ಹೀಗೆ ಆಗಬಾರದಿತ್ತು.” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಂಡ್ಯದ ಆರತಿ ಉಕ್ಕಡದಲ್ಲಿ ಶಾಸಕ ಸುರೇಶ್ಗೌಡ ಪುತ್ರಿ ದರ್ಪ: ಮಹಿಳಾ ಪಿಎಸ್ಐಗೆ ಕಪಾಳಮೋಕ್ಷ ಮಾಡಿದ ಐಶ್ವರ್ಯ
“ಸಾರ್ವಜನಿಕ ಮತ್ತು ಧಾರ್ಮಿಕ ಸ್ಥಳಗಳಲ್ಲಿ ವಿಐಪಿ ಪ್ರೋಟೋಕಾಲ್ ವ್ಯವಸ್ಥೆಯನ್ನು ತೆಗೆದುಹಾಕಬೇಕು. ದೇವರ ಮುಂದೆ ನಾವೆಲ್ಲರೂ ಸಮಾನರು. ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಿ, ಅನಗತ್ಯವಾಗಿ ಬೆಳೆಸಬೇಡಿ” ಎಂದು ಮಾಧ್ಯಮಗಳು ಹಾಗೂ ಸಾರ್ವಜನಿಕರಲ್ಲಿ ಶಾಸಕರು ಮನವಿ ಮಾಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ