ಪುಷ್ಪ ಸಿನಿಮಾ ಶೈಲಿಯಲ್ಲಿ ಅಕ್ರಮ ಸ್ಪಿರಿಟ್ ಸಾಗಾಟ: 35 ಲಕ್ಷ ಮೌಲ್ಯದ ಟ್ಯಾಂಕರ್ ಜಪ್ತಿ, ಓರ್ವನ ಬಂಧನ! – Kannada News | Pushpa Style Spirit Smuggling Busted in Belagavi: Spirit Worth 35 Lakh Seized

ಪುಷ್ಪ ಸಿನಿಮಾ ಶೈಲಿಯಲ್ಲಿ ಅಕ್ರಮ ಸ್ಪಿರಿಟ್ ಸಾಗಾಟ

ಬೆಳಗಾವಿ, ಮೇ 23: ಸೂಪರ್ ಹಿಟ್ ‘ಪುಷ್ಪ’ ಸಿನಿಮಾದಲ್ಲಿ ಟ್ಯಾಂಕರ್ ಒಳಗೆ ಹಾಲಿನ ಕೆಳಗೆ ಶ್ರೀಗಂಧದ ತುಂಡುಗಳನ್ನು ಬಚ್ಚಿಟ್ಟು ಸಾಗಿಸುವ ದೃಶ್ಯವನ್ನು ನೀವೆಲ್ಲರೂ ನೋಡಿರುತ್ತೀರಿ. ಅದೇ ಮಾದರಿಯ ಖತರ್ನಾಕ್ ಐಡಿಯಾ ಬಳಸಿ, ಆಯಿಲ್ ಟ್ಯಾಂಕರ್‌ನಲ್ಲಿ ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದ ಬೃಹತ್ ಜಾಲವನ್ನು ಬೆಳಗಾವಿ (Belagavi) ಜಿಲ್ಲೆಯ ಅಬಕಾರಿ ಅಧಿಕಾರಿಗಳು ಭೇದಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಮದ ಬಳಿ ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 35 ಲಕ್ಷ ರೂಪಾಯಿ ಮೌಲ್ಯದ 14 ಸಾವಿರ ಲೀಟರ್ ಸ್ಪಿರಿಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಅಕ್ರಮ ದಂಧೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ, ಟ್ಯಾಂಕರ್ ಅನ್ನು ಜಪ್ತಿ ಮಾಡಲಾಗಿದೆ.

ಮುಖ್ಯಾಂಶಗಳು

  • ಬೆಳಗಾವಿಯ ಜಾಂಬೋಟಿಯಲ್ಲಿ 35 ಲಕ್ಷ ಮೌಲ್ಯದ ಸ್ಪಿರಿಟ್ ಜಪ್ತಿ ಮಾಡಲಾಗಿದೆ.
  • ಆಯಿಲ್ ಟ್ಯಾಂಕರ್ ಬಳಸಿ ಪುಷ್ಪ ಸಿನಿಮಾ ಶೈಲಿಯಲ್ಲಿ ಸ್ಪಿರಿಟ್ ಸಾಗಿಸಲಾಗುತ್ತಿತ್ತು.
  • ನೆಲಮಂಗಲದಿಂದ ಗೋವಾಕ್ಕೆ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ‘ಪುಷ್ಪ’ ಪ್ಲಾನ್!

ಬಂಧಿತ ಗ್ಯಾಂಗ್ ಅಧಿಕಾರಿಗಳನ್ನು ಡೈವರ್ಟ್ ಮಾಡಲು ಅತ್ಯಂತ ಚಾಣಾಕ್ಷ ತಂತ್ರ ರೂಪಿಸಿತ್ತು. ಟ್ಯಾಂಕರ್‌ನ ಮೂರು ಭಾಗಗಳಲ್ಲಿ ಸಣ್ಣ ಸಣ್ಣ ಪೈಪ್‌ಗಳನ್ನು ಅಳವಡಿಸಿ, ಅದರಲ್ಲಿ ಮಾತ್ರ ಆಯಿಲ್ (ತೈಲ) ತುಂಬಿಸಲಾಗಿತ್ತು. ಅಧಿಕಾರಿಗಳು ತಪಾಸಣೆ ನಡೆಸುವಾಗ ಕೇವಲ ಆ ಪೈಪ್‌ಗಳಲ್ಲಿದ್ದ ಆಯಿಲ್ ತೋರಿಸಿ ಇದು ಆಯಿಲ್ ಟ್ಯಾಂಕರ್ ಎಂದು ನಂಬಿಸಿ ನುಣುಚಿಕೊಳ್ಳುತ್ತಿದ್ದರು. ಆದರೆ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಖಾನಾಪುರ ಅಬಕಾರಿ ಅಧಿಕಾರಿಗಳಿಗೆ ತಪಾಸಣೆ ವೇಳೆ ತೀವ್ರ ಸಂಶಯ ಮೂಡಿದೆ. ತಕ್ಷಣವೇ ಟ್ಯಾಂಕರ್‌ನಲ್ಲಿದ್ದ ಆಯಿಲ್ ಪೈಪ್‌ಗಳನ್ನು ಹೊರತೆಗೆದು ಆಳವಾಗಿ ಪರಿಶೀಲಿಸಿದಾಗ, ಅದರ ಸುತ್ತಲೂ ಸಾವಿರಾರು ಲೀಟರ್ ಸ್ಪಿರಿಟ್ ತುಂಬಿಟ್ಟಿರುವುದು ಪತ್ತೆಯಾಗಿದ್ದು, ಅಧಿಕಾರಿಗಳೇ ಒಂದು ಕ್ಷಣ ಶಾಕ್ ಆಗಿದ್ದಾರೆ.

ಇದನ್ನೂ ಓದಿ Kalaburgi Accident: ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಮೃತನ ತಂದೆ ಗೋಳು!

ನೆಲಮಂಗಲದಿಂದ ಗೋವಾಕ್ಕೆ ಸಾಗಾಟ

ಸಾಮಾನ್ಯವಾಗಿ ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸರಬರಾಜಾಗುವ ಪ್ರಕರಣಗಳು ಹೆಚ್ಚಿರುತ್ತವೆ. ಆದರೆ, ಈ ಕತರ್ನಾಕ್ ಗ್ಯಾಂಗ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಿಂದ ಗೋವಾಕ್ಕೆ ಈ ಸ್ಪಿರಿಟ್ ಅನ್ನು ಅಕ್ರಮವಾಗಿ ಸಾಗಿಸುತ್ತಿತ್ತು ಎನ್ನಲಾಗಿದೆ. ಸದ್ಯಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳು ಇಡೀ ಜಾಲವನ್ನು ಪತ್ತೆ ಹಚ್ಚಿದ್ದು, ಬಂಧಿತ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಅಕ್ರಮ ದಂಧೆಯ ಹಿಂದೆ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆ ಮತ್ತು ಇದರ ಅಸಲಿ ಕಿಂಗ್‌ಪಿನ್ ಯಾರು ಎಂಬ ಕುರಿತು ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *