, ಹುಬ್ಬಳ್ಳಿ ಪೊಲೀಸ್ ಠಾಣೆ ಗಲಾಟೆImage Credit source: Tv9 kannada
ಹುಬ್ಬಳ್ಳಿ, ಮೇ.16: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಕೇಶ್ವಾಪುರ ಪೊಲೀಸ್ ಠಾಣೆಯ ಒಳಗೇ ಎರಡು ಕುಟುಂಬಗಳ ಮಧ್ಯೆ ಭೀಕರ ಗಲಾಟೆ ನಡೆದಿದ್ದು, ಪೊಲೀಸರ ಕಣ್ಣೆದುರಲ್ಲೇ ಗರ್ಭಿಣಿ ಮಹಿಳೆ ಸೇರಿದಂತೆ ಯುವಕನ ಕುಟುಂಬಸ್ಥರ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ.
ಈಶ್ವರ ತಾಳಂಬರಿ ಮತ್ತು ನಿಖಿತಾ ಎಂಬುವರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ, ಇವರ ಪ್ರೇಮ ಸಂಬಂಧಕ್ಕೆ ಯುವತಿ ನಿಖಿತಾ ಕುಟುಂಬಸ್ಥರಿಂದ ತೀವ್ರ ವಿರೋಧವಿತ್ತು. ಇದೇ ವಿಚಾರವಾಗಿ ಯುವತಿಯ ಸಹೋದರ ಗಿರೀಶ್ ಎಂಬಾತ ಈಶ್ವರ್ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ಬಗ್ಗೆ ದೂರು ನೀಡಲು ಈಶ್ವರ್ ತನ್ನ ಕುಟುಂಬಸ್ಥರೊಂದಿಗೆ ಕೇಶ್ವಾಪುರ ಪೊಲೀಸ್ ಠಾಣೆಗೆ ಆಗಮಿಸಿದ್ದರು.
ಈಶ್ವರ್ ಕುಟುಂಬ ದೂರು ನೀಡಲು ಬಂದ ವಿಷಯ ತಿಳಿದು ಯುವತಿಯ ಕಡೆಯವರು ಕೂಡ ಠಾಣೆಗೆ ಧಾವಿಸಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿಯ ಕಣ್ಣೆದುರಲ್ಲೇ ಮಾತಿಗೆ ಮಾತು ಬೆಳೆದು, ಯುವತಿಯ ಕಡೆಯವರು ಠಾಣೆಯ ಒಳಗೇ ಇಟ್ಟಿದ್ದ ಕಟ್ಟಿಗೆಯಿಂದ ಯುವಕನ ಕುಟುಂಬಸ್ಥರ ಮೇಲೆ ಮುಗಿಬಿದ್ದಿದ್ದಾರೆ. ಹಲ್ಲೆಯ ತೀವ್ರತೆಗೆ ಗರ್ಭಿಣಿ ಮಹಿಳೆ ಎಂದೂ ನೋಡದೆ ಆಕೆಯ ಮೇಲೂ ಕೈ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಠಾಣೆಯ ಒಳಗೆ ಗಲಾಟೆ ಜೋರಾಗುತ್ತಿದ್ದಂತೆ ಅಲ್ಲಿದ್ದ ಸಿಬ್ಬಂದಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ವರುಣನ ರೌದ್ರಾವತಾರಕ್ಕೆ ಇಬ್ಬರು ಬಲಿ: ಮೈಸೂರಲ್ಲಿ ರೈತ ಮಹಿಳೆ, ಬಳ್ಳಾರಿಯಲ್ಲಿ ಯುವಕ ಸಿಡಿಲಿಗೆ ಸಾವು!
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಯುವಕ ಈಶ್ವರ್ನನ್ನು ತಕ್ಷಣವೇ ಚಿಕಿತ್ಸೆಗಾಗಿ ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಎರಡೂ ಕುಟುಂಬಗಳಿಂದ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ