ಮಂಗಳೂರಿನ ಬೀಚ್ಗಳಲ್ಲಿ ಹೈಅಲರ್ಟ್Image Credit source: tv9
ಮಂಗಳೂರು, ಜೂನ್ 11: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕರಾವಳಿ ಜಿಲ್ಲೆಗಳಿಗೆ ಪ್ರವಾಸ ಮಾಡಲು ಯೋಜಿಸುತ್ತಿರುವ ಸಾರ್ವಜನಿಕರು ಹಾಗೂ ಪ್ರವಾಸಿಗರು ಇಂದಿನಿಂದ ಕಡ್ಡಾಯವಾಗಿ ಮುನ್ನೆಚ್ಚರಿಕೆ ವಹಿಸಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ (Monsoon) ಚುರುಕುಗೊಂಡಿದ್ದು, ಕಡಲ ತೀರದಲ್ಲಿ ಭಾರಿ ಪ್ರಮಾಣದ ಅಲೆಗಳ ಅಬ್ಬರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಮಂಗಳೂರಿನ ಎಲ್ಲಾ ಪ್ರಮುಖ ಬೀಚ್ಗಳಲ್ಲಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಹೈಅಲರ್ಟ್ ಘೋಷಿಸಿದ್ದು, ಕಡಲ ತೀರದ ಮನರಂಜನಾ ಚಟುವಟಿಕೆಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಬ್ರೇಕ್ ಹಾಕಲಾಗಿದೆ.
ಮುಖ್ಯಾಂಶಗಳು
- ಮುಂಗಾರು ಚುರುಕು; ಕಡಲ ತೀರದಲ್ಲಿ ಹೈಅಲರ್ಟ್.
- ವಾಟರ್ ಸ್ಪೋರ್ಟ್ಸ್ಗಳು ಸಂಪೂರ್ಣ ಸ್ಥಗಿತ.
- ಜೀವ ರಕ್ಷಕ ಸಿಬ್ಬಂದಿಯಿಂದ ನಿರಂತರ ಕಣ್ಗಾವಲು.
ತೇಲುವ ಸೇತುವೆ, ಬೋಟಿಂಗ್ ಸೇರಿದಂತೆ ಸಾಹಸ ಕ್ರೀಡೆಗಳು ಬಂದ್
ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಮಂಗಳೂರಿನ ಪ್ರಸಿದ್ಧ ಪಣಂಬೂರು ಬೀಚ್ (Panambur Beach), ತಣ್ಣೀರುಬಾವಿ ಹಾಗೂ ಸೋಮೇಶ್ವರ ಸೇರಿದಂತೆ ಜಿಲ್ಲೆಯ ಎಲ್ಲಾ ಬೀಚ್ಗಳಲ್ಲಿ ಜನಪ್ರಿಯ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ. ಇನ್ನು ಮುಂದೆ ಮುಂಗಾರು ಮುಗಿಯುವವರೆಗೆ ಪ್ರವಾಸಿಗರ ಅತ್ಯಂತ ಆಕರ್ಷಣೆಯಾಗಿದ್ದ ತೇಲುವ ಸೇತುವೆ (Floating Bridge), ಬೋಟಿಂಗ್, ಜೆಟ್ ಸ್ಕೀ (Jet Ski) ಹಾಗೂ ಪ್ಯಾರಾ ಸೈಲಿಂಗ್ ಸೇರಿದಂತೆ ಯಾವುದೇ ಸಾಹಸ ಹಾಗೂ ಮನರಂಜನಾ ಕ್ರೀಡೆಗಳಿಗೆ ಅವಕಾಶ ಇರುವುದಿಲ್ಲ. ಪ್ರವಾಸಿಗರ ಜೀವಕ್ಕೆ ಅಪಾಯ ಎದುರಾಗಬಾರದು ಎನ್ನುವ ಕಾರಣಕ್ಕೆ ಈ ಕಠಿಣ ನಿಯಮವನ್ನು ಜಾರಿಗೊಳಿಸಲಾಗಿದೆ.
ರಕ್ಷಣೆಗೆ ಹಗ್ಗದ ಬ್ಯಾರಿಕೇಡ್: ಪೊಲೀಸರ ಕಠಿಣ ನಿಗಾ
ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿರುವುದರಿಂದ ಪ್ರವಾಸಿಗರು ಯಾವುದೇ ಕಾರಣಕ್ಕೂ ನೀರಿಗೆ ಇಳಿಯದಂತೆ ತಡೆಯಲು ದಡದಲ್ಲೇ ಸುರಕ್ಷತಾ ಹಗ್ಗಗಳನ್ನು (Safety Ropes) ಕಟ್ಟಿ ಬ್ಯಾರಿಕೇಡ್ಗಳನ್ನು ನಿರ್ಮಿಸಲಾಗಿದೆ. ನಿಯಮ ಉಲ್ಲಂಘಿಸಿ ಯಾರಾದರೂ ಸಮುದ್ರಕ್ಕೆ ಇಳಿಯಲು ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಅನಾಹುತಗಳನ್ನು ತಪ್ಪಿಸಲು ಲೈಫ್ ಗಾರ್ಡ್ ಸಿಬ್ಬಂದಿ, ಕರಾವಳಿ ಕಾವಲುಪಡೆ (Coastal Security Police) ಹಾಗೂ ಸ್ಥಳೀಯ ಪೊಲೀಸರು ಬೀಚ್ಗಳಲ್ಲಿ ದಿನದ 24 ಗಂಟೆಯೂ ಹದ್ದಿನ ಕಣ್ಣಿಟ್ಟು ನಿರಂತರ ಕಾವಲು ಕಾಯುತ್ತಿದ್ದಾರೆ.
ದಡದಲ್ಲೇ ಕುಳಿತು ಅಲೆಗಳ ವೀಕ್ಷಣೆಗೆ ಮಾತ್ರ ಅವಕಾಶ
ಬೀಚ್ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರದೇ ಇದ್ದರೂ, ಕಡಲಿಗೆ ಇಳಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕರಾವಳಿಗೆ ಬರುವ ಪ್ರವಾಸಿಗರು ಕೇವಲ ದಡದ ಸುರಕ್ಷಿತ ಜಾಗದಲ್ಲಿ ಕುಳಿತು ಮುಂಗಾರು ಮಳೆಯ ಅಬ್ಬರದ ಅಲೆಗಳನ್ನು ವೀಕ್ಷಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರು ಮತ್ತು ಸ್ಥಳೀಯರು ಇಲಾಖೆಯ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ, ಅಧಿಕಾರಿಗಳೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ