ನವದೆಹಲಿ, ಜುಲೈ 22: ದೇಶದಲ್ಲಿ ಸಾಲು ಸಾಲು ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ(Question Paper Leak) ಪ್ರಕರಣಗಳು ಯುವಕರನ್ನು ತೀವ್ರ ನಿರಾಶೆಗೆ ತಳ್ಳಿವೆ. ಸರ್ಕಾರಗಳು ಬದಲಾದರೂ, ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಒಂದಲ್ಲ ಒಂದು ರೀತಿಯಲ್ಲಿ ಈ ‘ಸಾಂಸ್ಥಿಕ ಅಕ್ರಮ’ಗಳನ್ನು ತಡೆಯಲು ವಿಫಲವಾಗುತ್ತಿವೆ. ಅಧಿಕಾರದಲ್ಲಿದ್ದಾಗ ತಡೆಯಲಾಗದ ವಿಷಯಗಳನ್ನು, ವಿರೋಧ ಪಕ್ಷದಲ್ಲಿದ್ದಾಗ ಅದೇ ವಿಷಯವನ್ನು ಎತ್ತಿ ಹಿಡಿಯುವ ರಾಜಕೀಯ ಚಕ್ರ ನಿರಂತರವಾಗಿ ನಡೆಯುತ್ತಿದೆ. ಈ ಸತ್ಯವನ್ನು ಸ್ವತಃ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರೇ ಮುಕ್ತವಾಗಿ ಒಪ್ಪಿಕೊಂಡಿದ್ದು, ರಾಜಸ್ಥಾನದ ಪರೀಕ್ಷಾ ಸೋರಿಕೆ ಘಟನೆಗಳನ್ನು ಉಲ್ಲೇಖಿಸಿ ನೀಡಿರುವ ಹೇಳಿಕೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ರಾಜಸ್ಥಾನದಲ್ಲಿ ನಾವು ಪ್ರಯತ್ನಿಸಿದೆವು, ಆದರೆ ಆಗಲಿಲ್ಲ
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ನಡೆದ ಪರೀಕ್ಷಾ ಅಕ್ರಮಗಳ ಬಗ್ಗೆ ಮಾತನಾಡಿದ್ದ ಪ್ರಿಯಾಂಕಾ ಗಾಂಧಿ, ಪ್ರಶ್ನೆಪತ್ರಿಕೆ ಸೋರಿಕೆ ಎನ್ನುವುದು ಕೇವಲ ಒಂದು ರಾಜ್ಯದ ಸಮಸ್ಯೆಯಲ್ಲ, ಅದು ಇಡೀ ದೇಶವನ್ನು ಬಾಧಿಸುತ್ತಿರುವ ಬೃಹತ್ ಜ್ವಲಂತ ಸಮಸ್ಯೆ. ರಾಜಸ್ಥಾನದಲ್ಲಿ ನಮ್ಮ ಸರ್ಕಾರವಿದ್ದಾಗ ಇದನ್ನು ತಡೆಯಲು ನಾವು ಶಕ್ತಿಮೀರಿ ಪ್ರಯತ್ನಿಸಿದೆವು, ಅಂದಿನ ಸಿಎಂ ಅಶೋಕ್ ಗೆಹ್ಲೋಟ್ ಜೀ ಕೂಡ ಸಾಕಷ್ಟು ಶ್ರಮಿಸಿದರು. ಆದರೆ, ನಮಗೂ ಅದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಮತ್ತಷ್ಟು ಓದಿ: ನೀಟ್ ಪರೀಕ್ಷಾ ಅಕ್ರಮದ ತೀವ್ರ ಪ್ರತಿಭಟನೆ ನಡುವೆ ವೈರಲ್ ಆಯ್ತು ಅರವಿಂದ್ ಅವರ ಎರಡು ವರ್ಷಗಳ ಹಳೆಯ ಭವಿಷ್ಯವಾಣಿ
ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳು ಕೇವಲ ಒಬ್ಬಿಬ್ಬರು ಮಾಡುವ ತಪ್ಪುಗಳಲ್ಲ, ಪರೀಕ್ಷಾ ಮಂಡಳಿ, ಉಸ್ತುವಾರಿ ವಹಿಸುವವರು, ಕೆಲವು ಪೋಷಕರು ಮತ್ತು ಮಧ್ಯವರ್ತಿಗಳು ಸೇರಿ ಇಡೀ ವ್ಯವಸ್ಥೆಯೊಳಗಿನ ಲೋಪದೋಷಗಳನ್ನು ಬಳಸಿಕೊಂಡು ಪರೀಕ್ಷೆಗೂ ಮುನ್ನವೇ ಕುತಂತ್ರ ನಡೆಸಿ ಶಾರ್ಟ್ಕಟ್ಗಳನ್ನು ಕಂಡುಕೊಳ್ಳುತ್ತಾರೆ.
ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದು ಅಥವಾ ಎಲ್ಲೆಂದರಲ್ಲಿ ಕಸ ಚೆಲ್ಲುವುದನ್ನು ಜನರು ತಮ್ಮ ‘ಹಕ್ಕು’ ಅಥವಾ ಸಾಹಸ ಎಂಬಂತೆ ಬಿಂಬಿಸಿಕೊಳ್ಳುವಂತೆಯೇ, ಶಾರ್ಟ್ಕಟ್ನಲ್ಲಿ ಯಶಸ್ಸು ಗಳಿಸಲು ಅಕ್ರಮ ಎಸಗುವುದು ಕೂಡ ಸಮಾಜದಲ್ಲಿ ಸಹಜವೆಂಬಂತಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ಪೋಸ್ಟ್ ಮಾಡಿದ್ದಾರೆ.
ವಿಡಿಯೋ
🚨🚨This should be posted again
“Paper Leak is the issue of the entire country, we tried to stop it, Gehlot ji tried it, but he couldn’t”
: Priyanka Gandhi on Rajasthan Paper Leaks pic.twitter.com/VUbZLXY9PV
— Politics Pe Charcha (@politicscharcha) July 21, 2026
ರಾಜಕೀಯ ಪಕ್ಷಗಳ ಇಬ್ಬಂದಿ ತನ
ಪರೀಕ್ಷಾ ಪಾರದರ್ಶಕತೆ ತರುವುದು ತೀವ್ರ ಕಷ್ಟಕರವೆನಿಸಿ, ಅಕ್ರಮಗಳನ್ನು ತಡೆಯಲು ಸರ್ಕಾರಗಳು ಹೆಣಗಾಡುತ್ತವೆ. ಅದೇ ವಿಪಕ್ಷದಲ್ಲಿದ್ದಾಗ ಪರೀಕ್ಷಾ ಸೋರಿಕೆಯನ್ನೇ ಅಸ್ತ್ರವಾಗಿಸಿಕೊಂಡು ಆಡಳಿತ ಪಕ್ಷದ ವಿರುದ್ಧ ಬೃಹತ್ ಹೋರಾಟಗಳನ್ನು ರೂಪಿಸುತ್ತವೆ. ಪ್ರಿಯಾಂಕಾ ಗಾಂಧಿ ಅವರ ಈ ಪ್ರಾಮಾಣಿಕ ಒಪ್ಪಿಗೆಯು, ಪ್ರಶ್ನೆಪತ್ರಿಕೆ ಸೋರಿಕೆ ಎನ್ನುವುದು ಕೇವಲ ರಾಜಕೀಯ ಕೆಸರೆರಚಾಟದ ವಿಷಯವಾಗದೆ, ಪಕ್ಷಾತೀತವಾಗಿ ಇಡೀ ದೇಶದ ಶಿಕ್ಷಣ ವ್ಯವಸ್ಥೆಯನ್ನೇ ಆಳವಾಗಿ ಸ್ವಚ್ಛಗೊಳಿಸಬೇಕಾದ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 10:01 am, Wed, 22 July 26