ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಸೇರ್ಪಡೆ
ಬೆಂಗಳೂರು, ಜೂನ್ 14: ವನ್ಯಜೀವಿ ಪ್ರಿಯರಿಗೆ ಹಾಗೂ ಪ್ರವಾಸಿಗರಿಗೆ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಭರ್ಜರಿ ಸಿಹಿ ಸುದ್ದಿಯೊಂದು ಸಿಕ್ಕಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದಿಂದ ಕರೆತರಲಾಗಿದ್ದ ಚೀತಾಗಳು ಯಶಸ್ವಿಯಾಗಿ ಹೊಸ ವಾತಾವರಣಕ್ಕೆ ಹೊಂದಿಕೊಂಡಿದ್ದು, ಇಂದಿನಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿವೆ. ಇದರೊಂದಿಗೆ ಉದ್ಯಾನದಲ್ಲಿ ಜೀಬ್ರಾ ಮತ್ತು ನೀರಾನೆ ಮರಿಗಳು ಜನಿಸಿರುವುದು ಮೃಗಾಲಯದ ಸಂತಸವನ್ನು ಇಮ್ಮಡಿಗೊಳಿಸಿದೆ.
ಮುಖ್ಯಾಂಶಗಳು
- ಬನ್ನೇರುಘಟ್ಟ ಉದ್ಯಾನವನದಲ್ಲಿ ಹೊಸದಾಗಿ ಚೀತಾಗಳನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
- ಮೃಗಾಲಯದ ಉದ್ಯಾನದಲ್ಲಿ ಮುದ್ದಾದ ಜೀಬ್ರಾ ಮತ್ತು ಹಿಪ್ಪೋಪೊಟಮಸ್ ಮರಿಗಳು ಜನಿಸಿವೆ.
- ದಕ್ಷಿಣ ಆಫ್ರಿಕಾದಿಂದ ಬಂದ ಚೀತಾಗಳು ಕ್ವಾರಂಟೈನ್ ಮುಗಿಸಿ ಪ್ರದರ್ಶನಕ್ಕೆ ಸಜ್ಜಾಗಿವೆ.
ಉದ್ಯಾನದಲ್ಲಿ ಜೀಬ್ರಾ ಮತ್ತು ಹಿಪ್ಪೋ ಮರಿಗಳ ಕಲರವ
ಮೃಗಾಲಯದ ಸಂರಕ್ಷಣಾ ಸಂತಾನೋತ್ಪತ್ತಿ ಕಾರ್ಯಕ್ರಮಕ್ಕೆ ಮತ್ತೊಂದು ಯಶಸ್ಸು ಸಿಕ್ಕಿದ್ದು, ‘ಕಬಿನಿ’ ಹೆಸರಿನ ಜೀಬ್ರಾ ಆರೋಗ್ಯವಂತ ಹೆಣ್ಣು ಮರಿಗೆ ಜನ್ಮ ನೀಡಿದೆ. ನವಜಾತ ಮರಿ ತಾಯಿಯ ಹಾಲನ್ನು ಕುಡಿಯುತ್ತಾ ಸಕ್ರಿಯವಾಗಿದ್ದು, ಇದರ ಸೇರ್ಪಡೆಯೊಂದಿಗೆ ಉದ್ಯಾನದಲ್ಲಿನ ಜೀಬ್ರಾಗಳ ಒಟ್ಟು ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಮತ್ತೊಂದೆಡೆ, ‘ದಶ್ಯಾ’ ಹೆಸರಿನ ಹೆಣ್ಣು ನೀರಾನೆ ಕೂಡ ಮುದ್ದಾದ ಮರಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿಯ ಆರಂಭಿಕ ಹಂತದ ನೈಸರ್ಗಿಕ ಬಾಂಧವ್ಯಕ್ಕೆ ಯಾವುದೇ ಅಡಚಣೆಯಾಗದಂತೆ ಸಿಬ್ಬಂದಿ ವಿಶೇಷ ಮುನ್ನೆಚ್ಚರಿಕೆ ವಹಿಸಿದ್ದಾರೆ ಹಾಗೂ ಪ್ರಾಣಿ ಆವರಣದ ಸುತ್ತ ಸಾರ್ವಜನಿಕರಿಂದ ಯಾವುದೇ ತೊಂದರೆಯಾಗದಂತೆ ನಿಗಾ ಇರಿಸಿದ್ದಾರೆ.
ಹೊಸ ಪರಿಸರಕ್ಕೆ ಹೊಂದಿಕೊಂಡ ದಕ್ಷಿಣ ಆಫ್ರಿಕಾದ ಚೀತಾಗಳು
ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ದಕ್ಷಿಣ ಆಫ್ರಿಕಾದ ಇಂದೂನಾ ಪ್ರೈಮೇಟ್ ಆಂಡ್ ಪ್ಯಾರಟ್ ಪಾರ್ಕ್ನಿಂದ ಕರೆತರಲಾಗಿದ್ದ ಎರಡು ಗಂಡು ಮತ್ತು ಎರಡು ಹೆಣ್ಣು ಚೀತಾಗಳು ತಮ್ಮ ಕಡ್ಡಾಯ ಕ್ವಾರಂಟೈನ್ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಈ ಅವಧಿಯಲ್ಲಿ ಪಶುವೈದ್ಯರು ಹಾಗೂ ಪ್ರಾಣಿ ಪಾಲನಾ ಸಿಬ್ಬಂದಿ ಅವುಗಳ ಆರೋಗ್ಯ, ಆಹಾರ ಪದ್ಧತಿ ಮತ್ತು ಬೆಂಗಳೂರಿನ ಹವಾಮಾನಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹಗಲಿರುಳು ಸೂಕ್ಷ್ಮವಾಗಿ ಗಮನಿಸಿದ್ದರು. ಎಲ್ಲಾ ತಪಾಸಣೆಗಳು ತೃಪ್ತಿಕರವಾಗಿ ಕಂಡುಬಂದ ಹಿನ್ನೆಲೆಯಲ್ಲಿ, ಇದೀಗ ಅವುಗಳನ್ನು ಸಾರ್ವಜನಿಕರು ವೀಕ್ಷಿಸಬಹುದಾದ ವಿಶಾಲವಾದ ಹೊರಾಂಗಣ ಆವರಣಕ್ಕೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ ಬನ್ನೇರುಘಟ್ಟಕ್ಕೆ ನಾಲ್ಕು ಆಫ್ರಿಕನ್ ಚೀತಾಗಳ ಎಂಟ್ರಿ! ವಿದೇಶಿ ಅತಿಥಿಗಳಿಗೆ ಸಚಿವ ಖಂಡ್ರೆ ಅದ್ದೂರಿ ಸ್ವಾಗತ!
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳ ಪ್ರಕಾರ, ಈ ಎಲ್ಲಾ ಸಕಾರಾತ್ಮಕ ಬೆಳವಣಿಗೆಗಳು ಉದ್ಯಾನವನದ ವೈಜ್ಞಾನಿಕ ನಿರ್ವಹಣೆ, ವನ್ಯಜೀವಿ ಸಂರಕ್ಷಣೆ ಮತ್ತು ಪ್ರಾಣಿ ಕಲ್ಯಾಣಕ್ಕೆ ನೀಡುತ್ತಿರುವ ಆದ್ಯತೆಗೆ ಸಾಕ್ಷಿಯಾಗಿದೆ. ಮಾನವನ ಆರೈಕೆಯಲ್ಲೂ ವನ್ಯಜೀವಿಗಳು ನೈಸರ್ಗಿಕವಾಗಿ ವೃದ್ಧಿಯಾಗಲು ಪೂರಕ ವಾತಾವರಣವನ್ನು ಸೃಷ್ಟಿಸಿರುವುದಾಗಿ ಬಿಬಿಪಿ ಹೆಮ್ಮೆಯಿಂದ ಹೇಳಿಕೊಂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.