ಬಾಗಲಕೋಟೆ, ಏಪ್ರಿಲ್ 23: ಜಿಲ್ಲೆಯಲ್ಲಿ ಆನ್ಲೈನ್ ಟ್ರೇಡಿಂಗ್ (Online Trading) ಹೆಸರಲ್ಲಿ ಮೇಲಿಂದ ಮೇಲೆ ವಂಚನೆಗಳು (Fraud) ನಡೆಯುತ್ತಿವೆ. ಸಾಮಾಜಿ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ವಂಚನೆ ಮಾಡುತ್ತಿರುವುದು ಈಗಾಗಲೇ ಅನೇಕ ಬಾರಿ ನಡೆದಿದೆ. ಈಗ ಮತ್ತೊಬ್ಬರ ಖಾತೆಗಳನ್ನು ಬಳಸಿಕೊಂಡು ಕೋಟ್ಯಂತರ ರೂ ವಂಚನೆ ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ಆನ್ಲೈನ್ ವಂಚನೆ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ಇದೀಗ ಸುಣ್ಣದ ಬಟ್ಟಿ ಕಾರ್ಮಿಕರ ಖಾತೆಗಳನ್ನು ಬಳಸಿಕೊಂಡು ರಾಜಸ್ಥಾನದ ಮೂಲದ ವಂಚಕರು ಮೋಸ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಮುಧೋಳ ಭಾಗದ ಸುಣ್ಣದ ಬಟ್ಟಿಯ ಹತ್ತಕ್ಕೂ ಅಧಿಕ ಕಾರ್ಮಿಕರ ಬ್ಯಾಂಕ್ ಖಾತೆಗಳನ್ನು ರಾಜಸ್ಥಾನದ ಮೂಲದ ಮನೋಜ್ ಪೋತದಾರ ಬಳಸಿಕೊಂಡು ವಂಚನೆ ಮಾಡಿದ್ದಾನೆ.
ಬರೋಬ್ಬರಿ 2 ಕೋಟಿಗೂ ಅಧಿಕ ಹಣ ವರ್ಗಾವಣೆ
ಮನೋಜ್ ಪೋತದಾರ ಅಲ್ಪಸ್ವಲ್ಪ ಹಣ ನೀಡಿ ಮಾರುತಿ ಎಂಬ ವ್ಯಕ್ತಿಯ ಕಡೆಯಿಂದ ಹತ್ತಕ್ಕೂ ಅಧಿಕ ಕಾರ್ಮಿಕರ ಖಾತೆಗಳನ್ನು ಪಡೆದಿದ್ದ. ಅದರ ಜೊತೆಗೆ ಫೋನ್ ನಂಬರ್ ಕೂಡ ಪಡೆದು ತಾನೇ ಆ ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದ. ಆ ಮೂಲಕ ಬೇರೆಯವರಿಗೆ ಟ್ರೇಡಿಂಗ್ ಹೆಸರಲ್ಲಿ ಮೋಸ ಮಾಡಿ ಅದರಿಂದ ಬಂದ ಹಣವನ್ನು ಈ ಖಾತೆಗಳಿಗೆ ವರ್ಗಾಯಿಸಿ ಆ ಹಣವನ್ನು ಲೂಟಿ ಮಾಡಿದ್ದಾನೆ. ಬರೋಬ್ಬರಿ 2 ಕೋಟಿಗೂ ಅಧಿಕ ಹಣವನ್ನು ಹತ್ತಕ್ಕೂ ಅಧಿಕ ಜನ ಕಾರ್ಮಿಕರ ಖಾತೆಗೆ ವರ್ಗಾವಣೆಯಾಗಿತ್ತು. ಇತ್ತ ತಮ್ಮ ಖಾತೆಗೆ ಅಧಿಕ ಹಣ ಬಂದ ತಕ್ಷಣ ಕಾರ್ಮಿಕರು ಬಾಗಲಕೋಟೆ ಸಿಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಬಾಗಲಕೋಟೆ ಸಿಇಎನ್ ಪೊಲೀಸರು ಮನೋಜ್ ಪೋತದಾರ ಹಾಗೂ ಮಾರುತಿಯನ್ನ ಬಂಧಿಸಿದ್ದಾರೆ.
ಟ್ರೇಡಿಂಗ್ ವಂಚನೆಯಲ್ಲಿ ಈ ಹಿಂದೆ ವೈದ್ಯರು, ಇಂಜಿನಿಯರ್ಗಳು, ಶಿಕ್ಷಕರು ಸೇರಿದಂತೆ ಕೆಲ ಜನರು ಕೂಡ ಮೋಸ ಹೋದ ಪ್ರಕರಣಗಳಿವೆ. ಇದೀಗ ಕಾರ್ಮಿಕರ ಖಾತೆಗಳನ್ನು ಬಳಸಿಕೊಂಡು ವಂಚಿಸಲಾಗಿದೆ. ಸದ್ಯ ಈ ಕೃತ್ಯ ಸಾರ್ವಜನಿಕರಿಲ್ಲಿ ಆತಂಕ ಮೂಡಿಸಿದೆ.
ಕಠಿಣ ಶಿಕ್ಷೆಗೆ ಸಾರ್ವಜನಿಕರು ಆಗ್ರಹ
ಯಾವುದೇ ವ್ಯಕ್ತಿಗಳು ತಮ್ಮ ಖಾತೆಗಳನ್ನು ಬೇರೆಯವರಿಗೆ ನೀಡಬಾರದು. ಜೊತೆಗೆ ಅವುಗಳನ್ನು ನಿರ್ವಹಣೆ ಮಾಡುವುದಕ್ಕೆ ಅವಕಾಶ ಕೊಡಬಾರದು. ಮುಗ್ಧ ಜನರನ್ನು ತಮ್ಮ ವಂಚನೆಗೆ ಬಳಸಿಕೊಂಡು ಮೋಸ ಮಾಡುವ ಇಂತಹ ಕೃತ್ಯಕ್ಕೆ ಜನರು ಆಸ್ಪದ ನೀಡಬಾರದು, ಜೊತೆಗೆ ಪೊಲೀಸರು ಇಂತಹ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ: ದೇಣಿಗೆ ಕೊಡಿಸುವ ನೆಪದಲ್ಲಿ ವಂಚನೆ: ಎರಡು ದಿನದಲ್ಲೇ 2 ಕೋಟಿ ರೂ ಪಂಗನಾಮ
ಒಟ್ಟಿನಲ್ಲಿ ಟ್ರೇಡಿಂಗ್ ಹೆಸರಲ್ಲಿ ಮೇಲಿಂದ ಮೇಲೆ ಇಂತಹ ಕೃತ್ಯಗಳು ನಡೆಯುತ್ತಿದ್ದು, ಪೊಲೀಸರು ಇಂತಹ ಜಾಲವನ್ನು ಬೇರು ಸಮೇತ ಕಿತ್ತೆಸೆಯಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.