ಮುಂಬೈ, ಜೂನ್ 18: ಮಧ್ಯಪ್ರದೇಶದ ಛತ್ತರ್ಪುರದ ಬಾಗೇಶ್ವರ್ ಧಾಮ್ನಲ್ಲಿ ಪ್ರಾರ್ಥನೆ ಸಲ್ಲಿಸಲು ತೆರಳಿದ್ದಾಗ ತೀವ್ರ ಹೃದಯಾಘಾತದಿಂದ (Heart Attack) ಕೊನೆಯುಸಿರೆಳೆದಿದ್ದಾರೆ. ಸದಾ ಬಾಗೇಶ್ವರ್ ಧಾಮ್ನಲ್ಲೇ ಇರಲು ಬಯಸುತ್ತಿದ್ದ ಅವರ ಭಕ್ತಿಯನ್ನು ಗೌರವಿಸಿ, ಮುಂಬೈನಿಂದ ಬಂದ ಕುಟುಂಬಸ್ಥರು ಛತ್ತರ್ಪುರದಲ್ಲೇ ಅವರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮೃತರನ್ನು ಮುಂಬೈನ ಐರೋಲಿ ನಿವಾಸಿ 63 ವರ್ಷದ ಸತೀಶ್ ಕಾಮದ್ ಎಂದು ಗುರುತಿಸಲಾಗಿದೆ. ಬಾಗೇಶ್ವರ್ ಧಾಮ್ನ ಪರಮ ಭಕ್ತರಾಗಿದ್ದ ಸತೀಶ್ ಜೂನ್ 1ರಂದು ಧಾಮ್ಗೆ ಆಗಮಿಸಿ, ದೇವಾಲಯದ ಸಮೀಪವಿರುವ ಲಾಡ್ಜ್ವೊಂದರಲ್ಲಿ ತಂಗಿದ್ದರು. ಅವರು ಆಗಾಗ ಇಲ್ಲಿಗೆ ಭೇಟಿ ನೀಡುತ್ತಿದ್ದರು.
ಜೂನ್ 15ರ ಸಂಜೆ ಸತೀಶ್ ಅವರು ದೇವಾಲಯದ ಆವರಣದಲ್ಲಿರುವ ‘ರಾಮ್ ದರ್ಬಾರ್’ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಂದು ರಾತ್ರಿ ಅವರು ಉಳಿದುಕೊಂಡಿದ್ದ ಲಾಡ್ಜ್ಗೆ ಹಿಂತಿರುಗಿದಾಗ ಪಕ್ಕದ ರೂಂನಲ್ಲಿದ್ದ ಕೆಲವು ಯುವತಿಯರು ಅವರು ಕಾಣೆಯಾಗಿರುವ ಬಗ್ಗೆ ಮುಂಬೈನಲ್ಲಿದ್ದ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಕುಟುಂಬಸ್ಥರು ಸತೀಶ್ ಅವರ ಮೊಬೈಲ್ಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ನಂತರ ಪೊಲೀಸರು ಅದೇ ನಂಬರ್ ಬಳಸಿ ಕುಟುಂಬವನ್ನು ಸಂಪರ್ಕಿಸಿ ಸತೀಶ್ ಅವರ ಸಾವಿನ ಸುದ್ದಿಯನ್ನು ತಿಳಿಸಿದ್ದಾರೆ.
ಇದನ್ನೂ ಓದಿ: 30,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಪೈಲಟ್ಗೆ ಹೃದಯಾಘಾತ; ಪ್ರಯಾಣಿಕರ ಕತೆ ಏನಾಯ್ತು?
ಈ ಸುದ್ದಿ ತಿಳಿಯುತ್ತಿದ್ದಂತೆ ಸತೀಶ್ ಅವರ ಪತ್ನಿ ಸ್ನೇಹಾ ಕಾಮದ್, ಮಗಳು ಕೃತಿಕಾ ಕಾಮದ್ ಮತ್ತು ಸಹೋದರ ದಿನೇಶ್ ಕಾಮದ್ ಮುಂಬೈನಿಂದ ವಿಮಾನದ ಮೂಲಕ ಛತ್ತರ್ಪುರಕ್ಕೆ ಧಾವಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ನಂತರ, ಬುಧವಾರ ಛತ್ತರ್ಪುರದ ಭೈನ್ಸಾಸುರ್ ಮುಕ್ತಿ ಧಾಮ್ನಲ್ಲಿ ಸತೀಶ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಸಹೋದರ ದಿನೇಶ್ ಕಾಮದ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಅಂತ್ಯಸಂಸ್ಕಾರದ ನಂತರ ಮಾತನಾಡಿದ ಮಗಳು ಕೃತಿಕಾ, “ನನ್ನ ತಂದೆ ಬಾಗೇಶ್ವರ್ ಧಾಮ್ನ ಪರಮ ಭಕ್ತರಾಗಿದ್ದರು. ತಮ್ಮ ಜೀವನದ ಕೊನೆಯ ಕ್ಷಣಗಳನ್ನು ಇಲ್ಲೇ ಕಳೆಯಬೇಕೆಂದು ಅವರು ಯಾವಾಗಲೂ ಬಯಸುತ್ತಿದ್ದರು. ಅವರ ಆಸೆಯಂತೆ ಅವರ ಸಂಸ್ಕಾರವನ್ನು ಇಲ್ಲೇ ನೆರವೇರಿಸಿದ್ದೇವೆ” ಎಂದು ಕಣ್ಣೀರಿಟ್ಟಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ