
ಆನೇಕಲ್, ಏಪ್ರಿಲ್ 06: ಕನ್ನಡಿಗರನ್ನು ಹಿಂಬಾಲಿಸಿಕೊಂಡು ಬಂದ ತಮಿಳುನಾಡಿನ ಗೂಂಡಾಗಳು ಟಿಟಿ ವಾಹನವನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಚಾಲಕನಿಗೆ ಮಾರಣಾಂತಿಕವಾಗಿ ಹಲ್ಲೆ (attack) ಮಾಡಿ ದರ್ಪ ಮೆರೆದಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಟೋಲ್ ಬಳಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರ ಹಿಡಿದು ಟಿಟಿ ವಾಹನ ಹಿಂಬಾಲಿಸಿ ಬಂದಿದ್ದ ತಮಿಳಿಗರು, ಮಹಿಳೆಯರು, ಮಕ್ಕಳು ಇದ್ದಾರೆಂದು ಗೋಗರೆದರೂ ಬಿಡದೆ ಟಿಟಿ ವಾಹನದ ಗಾಜು ಪುಡಿಗೈದು ಅಟ್ಟಹಾಸ ಮೆರೆದಿದ್ದಾರೆ. ಸದ್ಯ ಚಾಲಕ ರಾಮಕೃಷ್ಣ ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಡೆದಿದ್ದೇನು?
ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ವೈಟ್ಫೀಲ್ಡ್ನಿಂದ ತಮಿಳುನಾಡಿನ ಕೃಷ್ಣಗಿರಿಗೆ ಟಿಟಿ ವಾಹನದ ಚಾಲಕ ರಾಮಕೃಷ್ಣ ಕನ್ನಡಿಗರನ್ನು ಕರೆದುಕೊಂಡು ಬಾಡಿಗೆಗೆ ಹೋಗಿದ್ದರು. ಈ ವೇಳೆ ಟೆಂಪೊ ಟ್ರಾವೆಲರ್ನಲ್ಲಿದ್ದ ಕನ್ನಡಿಗರ ಜೊತೆ ಅಲ್ಲಿನ ಸ್ಥಳೀಯರು ಕಿರಿಕ್ ತೆಗೆದಿದ್ದರು. ಅಲ್ಲಿಂದ ತಪ್ಪಿಸಿಕೊಂಡು ಕನ್ನಡಿಗರು ಟಿಟಿ ವಾಹನದಲ್ಲಿ ಅತ್ತಿಬೆಲೆ ಕಡೆಗೆ ಬಂದಿದ್ದಾರೆ.
ಇದನ್ನೂ ಓದಿ: ಕನ್ನಡಿಗರ ಮೇಲೆ ದರ್ಪ ತೋರಿದ ತಮಿಳು ಪುಂಡರು: ಕನ್ನಡ ಧ್ವಜ ಬಿಚ್ಚುವಂತೆ ಟಿಟಿ ವಾಹನ ಅಡ್ಡ ಹಾಕಿ ರೌಡಿಸಂ
ಅಷ್ಟಕ್ಕೆ ಸುಮ್ಮನಾಗದ ತಮಿಳುನಾಡಿನ ಗೂಂಡಾಗಳು ದೊಣ್ಣೆ, ಮಾರಕಾಸ್ತ್ರ ಹಿಡಿದು ಟಿಟಿ ವಾಹನ ಹಿಂಬಾಲಿಸಿ ಬಂದಿದ್ದಾರೆ. ಅತ್ತಿಬೆಲೆ ಟೋಲ್ನಲ್ಲಿ ಟಿಟಿ ಅಡ್ಡಗಟ್ಟಿದ ಗೂಂಡಾಗಳು ರಾಷ್ಟ್ರೀಯ ಹೆದ್ದಾರಿಯಲ್ಲೇ ವಾಹನದ ಗಾಜು ಪುಡಿಗಟ್ಟಿದ್ದಾರೆ. ಚಾಲಕ ರಾಮಕೃಷ್ಣ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: Video : ಅಂಗಡಿ ಹೆಸರನ್ನು ಕನ್ನಡದಲ್ಲಿ ಹಾಕಿ ಎನ್ನೋದಕ್ಕೆ ನೀವ್ಯಾರು : ಹಿರಿಯನಾಗರಿಕನ ಮುಂದೆ ದರ್ಪ ತೋರಿದ ಮಹಿಳೆ
ಮಹಿಳೆಯರು ಮತ್ತು ಮಕ್ಕಳು ಇದ್ದಾರೆಂದು ಗೋಗರೆದರೂ ಬಿಡದೆ ಹಲ್ಲೆ ಮಾಡಿದ್ದಾರೆ. ತಮಿಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತಮಿಳು ಗೂಂಡಾಗಳ ದಬ್ಬಾಳಿಕೆಯ ದೃಶ್ಯ ಟಿಟಿ ವಾಹನದ ಡ್ಯಾಶ್ ಕ್ಯಾಮರಾದಲ್ಲಿ ಸೆರೆ ಆಗಿದೆ.
ಸದ್ಯ ಟಿಟಿ ಚಾಲಕ ರಾಮಕೃಷ್ಣ ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಪ್ರಕರಣದ ಕುರಿತಾಗಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.