ಬಿಡದಿ ಟೌನ್ಶಿಪ್ ಯೋಜನೆImage Credit source: tv9 kannada
ರಾಮನಗರ, ಜುಲೈ 15: ಬಿಡದಿ ಟೌನ್ಶಿಪ್ ಯೋಜನೆ ವಿವಾದ (Bidadi Township Row) ಸಂಘರ್ಷ ಜೋರಾಗಿದೆ. ಇತ್ತೀಚೆಗೆ ಸರ್ವೆ ಮಾಡಲು ಬಂದಿದ್ದ ಜಿಬಿಎ ಅಧಿಕಾರಿಗಳಿಗೆ ಪ್ರತಿಭಟನಾನಿರತ ಮಹಿಳೆಯರು ಪೊರಕೆ ಏಟು ನೀಡಿದ್ದರು. ಕಲ್ಲು ತೂರಿ ಕಾರು ಜಖಂ ಗೊಳಿಸಿದ್ದರು. ಮತ್ತೊಂದೆಡೆ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಸಿಎಂ ಡಿಕೆ ಶಿವಕುಮಾರ್ಗೆ (DK Shivakumar) ಪತ್ರ ಬರೆಯುವ ಮೂಲಕ ಯೋಜನೆ ಕೈಬಿಡುವಂತೆ ಆಗ್ರಹಿಸಿದ್ದಾರೆ. ಇಷ್ಟೆಲ್ಲಾ ವಿರೋಧದ ಮಧ್ಯೆ ಇದೀಗ ಸರ್ಕಾರ ಎರಡನೇ ಹಂತದ ಅಂತಿಮ ಅಧಿಸೂಚನೆ ಬಿಡುಗಡೆ ಮಾಡಿದೆ.
ರಾಮನಗರ ಜಿಲ್ಲೆಯ ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎರಡನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಬಿಡದಿ ಹೋಬಳಿಯ ಪ್ರಮುಖ ಮೂರು ಗ್ರಾಮಗಳ ಒಟ್ಟು 2,550 ಎಕರೆ ಜಮೀನನ್ನು ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಭೂಸ್ವಾಧೀನಕ್ಕೊಳಪಟ್ಟ ಗ್ರಾಮಗಳು ಮತ್ತು ವಿಸ್ತೀರ್ಣದ ವಿವರ
- ಕೆಜಿ ಗೊಲ್ಲರಪಾಳ್ಯ: ಒಟ್ಟು 315 ಎಕರೆ (ಇದರಲ್ಲಿ 5 ಎಕರೆ ಕರಾಬು ಜಮೀನು ಸೇರಿದೆ).
- ಬನ್ನಿಗಿರಿ ಗ್ರಾಮ: ಒಟ್ಟು 775 ಎಕರೆ 6 ಗುಂಟೆ (ಇದರಲ್ಲಿ 99 ಎಕರೆ ಕರಾಬು ಜಮೀನು ಸೇರಿದೆ).
- ಅರಳಾಳುಸಂದ್ರ: ಒಟ್ಟು 1,460 ಎಕರೆ 21 ಗುಂಟೆ (ಇದರಲ್ಲಿ 30 ಎಕರೆ ಕರಾಬು ಜಮೀನು ಸೇರಿದೆ).
ಯಾರ ಆಸ್ತಿಯನ್ನೂ ಬಲವಂತವಾಗಿ ತೆಗೆದುಕೊಳ್ಳಲ್ಲ: ಸಿಎಂ ಡಿಕೆ ಶಿವಕುಮಾರ್
ಇನ್ನು ಇತ್ತ ಬೆಂಗಳೂರಿನಲ್ಲಿ ಟೌನ್ಶಿಪ್ ಯೋಜನೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ‘‘ ಬಿಡದಿ ಟೌನ್ಶಿಪ್ ನನ್ನ ಕನಸಿನ ಯೋಜನೆ ಅಲ್ಲ. ಈ ಯೋಜನೆಗೆ ನಾನು ಪಿತಾಮಹ ಆಗಲು ಇಷ್ಟಪಡುವುದಿಲ್ಲ. ಯಾರ ಆಸ್ತಿಯನ್ನೂ ಬಲವಂತವಾಗಿ ತೆಗೆದುಕೊಳ್ಳಲ್ಲ. ಸ್ವಇಚ್ಛೆಯಿಂದ ರೈತರು ಕೊಟ್ಟರೆ ಮಾತ್ರ ಭೂಸ್ವಾಧೀನ ಮಾಡುತ್ತೇವೆ. ಜಮೀನು ಕೊಡುವಂತೆ ರೈತರಿಗೆ ನಾವು ಒತ್ತಾಯ ಮಾಡಲ್ಲ’’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಡದಿ ಟೌನ್ಶಿಪ್ ವಿವಾದ: ಯೋಜನೆ ಕೈಬಿಡುವಂತೆ ಸಿಎಂಗೆ ಮಾಜಿ ಪ್ರಧಾನಿ ದೇವೇಗೌಡರಿಂದ ಪತ್ರ
‘‘ರಾಜ್ಯದ ವಿವಿಧ ಯೋಜನೆಗಳಿಗೆ ಭೂ ಸ್ವಾಧೀನ ಆಗಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಸ್ವಾಧೀನ ನಾನೇ ಮಾಡಿದ್ದೇನೆ. ಎಸ್.ಎಂ.ಕೃಷ್ಣ, ಮೊಯ್ಲಿ ಕಾಲದಲ್ಲಿ ಏನಾಗಿದೆ ಎಲ್ಲಾ ನೋಡಿದ್ದೇವೆ. ಬಿಎಸ್ ಯಡಿಯೂರಪ್ಪ ಕಾಲದಲ್ಲಿ ಹೆಚ್ಡಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಯೋಜನೆಯನ್ನು ರೂಪಿಸಲಾಯಿತು. 5 ಉಪನಗರಗಳ ಯೋಜನೆ ಆಗಬೇಕೆಂದು ಸಮ್ಮಿಶ್ರ ಸರ್ಕಾರದಲ್ಲೇ HD ಕುಮಾರಸ್ವಾಮಿ ಯೋಜನೆ ಮಾಡಿದ್ದರು. ನಿನ್ನೆ ಗಲಾಟೆ ಆದ ಜಾಗಗಳನ್ನು ಹೊಸದಾಗಿ ಸೇರ್ಪಡೆ ಮಾಡಿದರು’’ ಎಂದಿದ್ದಾರೆ.
ಬಿಡದಿ ಟೌನ್ಶಿಪ್ ಯೋಜನೆಗೆ ನಾನು ಫೌಂಡೇಶನ್ ಹಾಕಿಲ್ಲ ಎಂದ ಸಿಎಂ
ಇನ್ನು ಟೌನ್ಶಿಪ್ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ‘‘ದೇವೇಗೌಡರು ನನಗೆ ಪತ್ರ ಬರೆದಿದ್ದಾರೆ. ಅವರ ಸುಪುತ್ರರ ಸುದ್ದಿಗೋಷ್ಠಿ ನೋಡಿದ್ದೇನೆ. ನಿನ್ನೆ ಬಿಡದಿಯಲ್ಲಿ ನಡೆದ ಘಟನೆಯಿಂದ ಮನಸ್ಸಿಗೆ ನೋವಾಗಿದೆ. ರಾಜಕೀಯ ಕುಮ್ಮಕ್ಕಿನಿಂದ ಈ ಘಟನೆ ನಡೆದಿದೆ. ರೈತರನ್ನು ತಪ್ಪು ದಾರಿಗೆ ಎಳೆಯುವ ಸಂಚು ನಡೆಯುತ್ತಿದೆ. ಬಿಡದಿ ಟೌನ್ಶಿಪ್ ಯೋಜನೆಗೆ ನಾನು ಫೌಂಡೇಶನ್ ಹಾಕಿಲ್ಲ’’ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.