Headlines

ಬುದ್ಧಿ ಮಾತು ಹೇಳಿದ್ದೇ ತಪ್ಪಾಯ್ತಾ? ಸ್ನೇಹಿತನ ಮೇಲೆ ಮನಸೋ ಇಚ್ಛೆ ಹಲ್ಲೆ; ಮಲೆನಾಡನ್ನೇ ಬೆಚ್ಚಿಬೀಳಿಸಿದ ಕೃತ್ಯ – Kannada News | Hosanagara Drunk Attack: Man Critically Injured in Brutal Highway Assault by Friend

ಸ್ನೇಹಿತನಿಂದ ಹಲ್ಲೆImage Credit source: tv9 kannada

ಶಿವಮೊಗ್ಗ, ಆಗಸ್ಟ್ 16: ಅವರಿಬ್ಬರು ಒಂದೇ ಊರಿನವರು. ಕಷ್ಟ-ಸುಖ ಹಂಚಿಕೊಂಡವರು. ಆದರೆ ಮದ್ಯದ ಅಮಲು ತಲೆಗೇರಿದಾಗ ಆ ಸ್ನೇಹ, ಕರುಣೆ ಎಲ್ಲವೂ ಕರಗಿ ಬೂದಿಯಾಗಿದೆ. ಹೊಸನಗರ ತಾಲೂಕಿನ ಗರ್ತಿಕೇರಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಇಬ್ಬರು ಸ್ನೇಹಿತರ (Friend) ನಡುವೆ ನಡೆದ ಕ್ಷುಲ್ಲಕ ಜಗಳ, ಕೊನೆಗೆ ಒಬ್ಬನ ಕ್ರೂರ ಅಟ್ಟಹಾಸ ಹಾಗೂ ಇನ್ನೊಬ್ಬನ ಜೀವನ್ಮರಣದ ಹೋರಾಟಕ್ಕೆ ಕಾರಣವಾಗಿದೆ. ಮಾನವೀಯತೆಯನ್ನೇ ಮರೆತು ನಡುರಸ್ತೆಯಲ್ಲೇ ಸ್ನೇಹಿತನ ಮೇಲೆ ನಡೆದ ದಾಳಿ (Attack) ಇಡೀ ಮಲೆನಾಡನ್ನೇ ಬೆಚ್ಚಿಬೀಳಿಸಿದೆ.

ನಡೆದಿದ್ದೇನು?

ಶನಿವಾರ ರಾತ್ರಿ ಮಂಜುನಾಥ್ ಮತ್ತು ರಾಘವೇಂದ್ರ ಎಂಬ ಸ್ನೇಹಿತರು ಒಟ್ಟಿಗೆ ಮದ್ಯಪಾನ ಮಾಡಿದ್ದಾರೆ. ಬಳಿಕ ರಾಘವೇಂದ್ರನನ್ನು ಸುರಕ್ಷಿತವಾಗಿ ಮನೆಗೆ ಡ್ರಾಪ್ ಮಾಡಲು ಮಂಜುನಾಥ್ ಮುಂದಾಗಿದ್ದಾನೆ. ಈ ವೇಳೆ ರಾಘವೇಂದ್ರ ಫೋನ್‌ನಲ್ಲಿ ಯಾರಿಗೋ ಸಿಟ್ಟಿನಿಂದ ಬೈದಾಡುತ್ತಿದ್ದಾಗ, ‘ರಾತ್ರಿಯಾಗಿದೆ, ಇದೆಲ್ಲ ಬಿಟ್ಟು ಮನೆಗೆ ಹೋಗು’ ಎಂದು ಮಂಜುನಾಥ್ ಸಮಾಧಾನದಿಂದ ಬುದ್ಧಿ ಹೇಳಿದ್ದಾರೆ.

ಬುದ್ಧಿ ಮಾತು ಹೇಳಿದ್ದೇ ತಪ್ಪಾಯ್ತಾ?

ಕೌಟುಂಬಿಕ ಕಲಹದಿಂದ ಹೆಂಡತಿ ಬಿಟ್ಟು ಹೋಗಿದ್ದ ಮಾನಸಿಕ ಒತ್ತಡದಲ್ಲಿದ್ದ ರಾಘವೇಂದ್ರನಿಗೆ, ಕುಡಿದ ಅಮಲಿನಲ್ಲಿ ಈ ಮಾತು ತೀವ್ರ ಸಿಟ್ಟು ತರಿಸಿದೆ. ‘ನನಗೆ ಬುದ್ಧಿ ಹೇಳುವಷ್ಟು ದೊಡ್ಡವನಾದೆಯಾ?’ ಎಂದು ಜಗಳ ತೆಗೆದ ಆತ, ಕ್ಷಣಾರ್ಧದಲ್ಲಿ ರಾಕ್ಷಸನಾಗಿ ಬದಲಾಗಿದ್ದಾನೆ. ಅಲ್ಲಿ ಇದ್ದ ರಾಡ್​ನಿಂದ ಮಂಜುನಾಥ್​​ನ ಎರಡು ಕಾಲಿಗೆ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಆತನ ದೇಹದ ಮೇಲೆ ನಿಂತು ತನ್ನ ಕ್ರೌರ್ಯ ಮೆರೆದಿದ್ದಾನೆ.

ಇದನ್ನೂ ಓದಿ: ರಾತ್ರೋರಾತ್ರಿ ಕೊಟ್ಟಿಗೆಗೆ ನುಗ್ಗಿ ಗೋವುಗಳ ಕಳತನ: ಹಿಡಿಯಲು ಹೋದ ಬಜರಂಗದಳ ಕಾರ್ಯಕರ್ತರ ಹತ್ಯೆಗೆ ಯತ್ನ

ಇನ್ನು ರಾಘವೇಂದ್ರನ ವರ್ತನೆ ನೋಡಿದ ಸ್ಥಳೀಯರು ವಿಚಾರಿಸಿದ್ದಾರೆ. ಯಾವಾಗ ಸ್ಥಳೀಯರು ತರಾಟೆ ತೆಗೆದುಕೊಂಡರೋ ಹೈಡ್ರಾಮಾ ಶುರು ಮಾಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸುತ್ತೇನೆಂದು ಗಾಯಗೊಂಡಿರುವ ಕಾಲು ಹಿಡಿದು ಎಳೆಯುತ್ತಾನೆ. ಈ ಘಟನೆ ನೋಡಿದ ಸ್ಥಳೀಯರು ರಿಪ್ಪನಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ರಾಘವೇಂದ್ರ ಸ್ಥಳದಿಂದ ಪರಾರಿ ಆಗಿದ್ದಾನೆ.

ಸಾವು ಬದುಕಿನ ಮಧ್ಯೆ ಹೋರಾಟ

ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಂಜುನಾಥ್‌ನನ್ನು ತಕ್ಷಣ ರಿಪ್ಪನಪೇಟೆ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಎರಡೂ ಕಾಲುಗಳಿಗೆ ಗಂಭೀರವಾಗಿ ಗಾಯವಾಗಿದೆ. ತಲೆಗೂ ಬಲವಾದ ಪೆಟ್ಟು ಬಿದ್ದಿರುವುದರಿಂದ ಸ್ಥಿತಿ ಚಿಂತಾಜನಕವಾಗಿದೆ.

ಆರೋಪಿ ಅರೆಸ್ಟ್​​

ಅತ್ತ ನಡುರಸ್ತೆಯಲ್ಲಿ ನಡೆದ ಈ ಭೀಕರ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ರಿಪ್ಪನಪೇಟೆ ಪೊಲೀಸರು, ಪರಾರಿಯಾಗಿದ್ದ ರಾಘವೇಂದ್ರನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಅಪಘಾತದಲ್ಲಿ ಯುವಕ-ಯುವತಿ ದುರ್ಮರಣ: ಆದಿಯೋಗಿ ದರ್ಶನ ಪಡೆದು ಮರಳುತ್ತಿದ್ದವರು ಮಸಣಕ್ಕೆ

ಒಟ್ಟಿನಲ್ಲಿ ಸ್ನೇಹಿತನಿಗೆ ಒಳ್ಳೆಯ ಮನಸ್ಸಿನಿಂದ ಬುದ್ಧಿ ಹೇಳಲು ಹೋದ ಜೀವವೊಂದು ಇಂದು ಸಾವು-ಬದುಕಿನ ನಡುವೆ ಹೋರಾಡುತ್ತಿದೆ. ಕುಡಿತದ ಅಮಲು ಮತ್ತು ಕ್ಷಣಿಕ ಆಕ್ರೋಶಕ್ಕೆ ವರ್ಷಗಳ ಸ್ನೇಹ ಬಲಿಯಾಗಿದ್ದು, ಮಂಜುನಾಥ್ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *