ಬೆಂಗಳೂರಿನ ಧಾರ್ಮಿಕ ವೈಭವದ ಪ್ರತೀಕವಾದ 'ಬೆಂಗಳೂರು ಕರಗ' ಉತ್ಸವವು ತಡರಾತ್ರಿ ಅತ್ಯಂತ ಅದ್ಧೂರಿಯಾಗಿ ಮತ್ತು ಸಾಂಪ್ರದಾಯಿಕವಾಗಿ ಸಂಪನ್ನಗೊಂಡಿದೆ. ತಿಗಳರಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಈ ಶಕ್ತ್ಯೋತ್ಸವವನ್ನು ಕಣ್ಣುಂಬಿಕೊಳ್ಳಲು ಭಕ್ತಸಾಗರವೇ ಹರಿದುಬಂದಿತ್ತು.
ಅರ್ಚಕ ಎ. ಜ್ಞಾನೇಂದ್ರ ಅವರು ಸತತ 16ನೇ ಬಾರಿಗೆ ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡ ದ್ರೌಪದಮ್ಮನ ಕರಗವನ್ನು ಹೊತ್ತು ಸಾಗಿದರು. ಧಾರ್ಮಿಕ ವಿಧಿವಿಧಾನಗಳ ನಂತರ ಹಸಿ ಕರಗ ದೇವಸ್ಥಾನದಿಂದ ಹೊರಬರುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲುಮುಟ್ಟಿತ್ತು.
ಕೈಯಲ್ಲಿ ಖಡ್ಗ ಹಿಡಿದು 'ಗೋವಿಂದ.. ಗೋವಿಂದ..' ಎಂದು ನಾಮಸ್ಮರಣೆ ಮಾಡುತ್ತಿದ್ದ ವೀರಕುಮಾರರ ಸಾಹಸ ಮೆರವಣಿಗೆಗೆ ವಿಶೇಷ ಕಳೆ ನೀಡಿತ್ತು. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಗರುಡಾಚಾರ್ ಮತ್ತು ಎನ್.ಎ. ಹ್ಯಾರಿಸ್ ಸೇರಿದಂತೆ ಹಲವು ಗಣ್ಯರು ದ್ರೌಪದಮ್ಮನ ದರ್ಶನ ಪಡೆದರು.
ಪ್ರತಿಬಾರಿಯಂತೆ ಈ ಬಾರಿಯೂ ಕರಗವು ಚಿಕ್ಕಪೇಟೆಯ ಹಜ್ರತ್ ತವಕ್ಕಲ್ ಶಾ ಮಸ್ತಾನ್ ದರ್ಗಾಕ್ಕೆ ಭೇಟಿ ನೀಡಿತು. ಮುಸ್ಲಿಂ ಬಾಂಧವರು ಸಾಂಪ್ರದಾಯಿಕವಾಗಿ ಸ್ವಾಗತಿಸಿ ಪೂಜೆ ಸಲ್ಲಿಸುವ ಮೂಲಕ ಕೋಮು ಸೌಹಾರ್ದತೆಯನ್ನು ಮೆರೆದರು.
ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಟ ಕರಗವು ದೊಡ್ಡಪೇಟೆ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಕೆ.ಆರ್. ಮಾರುಕಟ್ಟೆಯ ಉದ್ಭವ ಗಣಪತಿ, ಅರಳೇಪೇಟೆಯ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನ, ಅಣ್ಣಮ್ಮ ದೇವಿ ದೇವಸ್ಥಾನ ಮತ್ತು ಯಲಹಂಕ ಗೇಟ್ ಆಂಜನೇಯಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸ್ವೀಕರಿಸಿತು.
“ಬೆಂಗಳೂರು ಕರಗ ಕೇವಲ ಒಂದು ಉತ್ಸವವಲ್ಲ, ಇದು ನಮ್ಮ ಸಂಸ್ಕೃತಿಯ ಬೇರು. ಭಕ್ತರ ಸಂಭ್ರಮ ಮತ್ತು ವ್ಯವಸ್ಥಿತ ಆಚರಣೆ ನಮಗೆ ಹೆಮ್ಮೆ ತಂದಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.





