Headlines

ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಅಭಾವ: ಬಂಕ್‌ಗಳ ಮುಂದೆ ವಾಹನ ಸವಾರರ ಸಾಲು, ತೀವ್ರಗೊಂಡ ಇಂಧನ ಆತಂಕ – Kannada News | Fuel Crisis in Bengaluru: Petrol and Diesel Shortage in HP and Bharat Petroleum Bunks Due to Supply Issues

ಸಾಂದರ್ಭಿಕ ಚಿತ್ರ (ಎಐ)Image Credit source: Google Gemini

ಬೆಂಗಳೂರು, ಮೇ 6: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಆಟೋ ಎಲ್‌ಪಿಜಿ (Auto LPG) ಬಿಕ್ಕಟ್ಟಿನ ಬೆನ್ನಲ್ಲೇ ಈಗ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲೂ ಭಾರೀ ವ್ಯತ್ಯಯ ಉಂಟಾಗಿದೆ. ನಗರದಲ್ಲಿ ತೈಲ ಪೂರೈಕೆ ಮಾಡುವ ಪ್ರಮುಖ ಕಂಪನಿಗಳಾದ ಎಚ್‌ಪಿ (HP) ಮತ್ತು ಭಾರತ್ ಪೆಟ್ರೋಲಿಯಂ (BP) ಬಂಕ್‌ಗಳಲ್ಲಿ ಕಳೆದ ಎರಡು ದಿನಗಳಿಂದ ಇಂಧನ ದಾಸ್ತಾನು ಖಾಲಿಯಾಗುತ್ತಿದ್ದು, ವಾಹನ ಸವಾರರಲ್ಲಿ ಆತಂಕ ಮನೆಮಾಡಿದೆ. ಖಾಸಗಿ ಬಂಕ್‌ಗಳಲ್ಲಿ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಬಂಕ್‌ಗಳ ಮೇಲೆ ಒತ್ತಡ ಹೆಚ್ಚಾಗಿದ್ದು, ಪೂರೈಕೆ ಸರಪಳಿ ಕಡಿತಗೊಂಡಿದೆ.

ಪೆಟ್ರೋಲ್, ಡೀಸೆಲ್ ಅಭಾವದ ಮುಖ್ಯಾಂಶಗಳು

  • ಎಚ್‌ಪಿ ಮತ್ತು ಭಾರತ್ ಪೆಟ್ರೋಲಿಯಂ ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಸ್ಟಾಕ್ ಸಮಸ್ಯೆ ತೀವ್ರ.
  • ಶೆಲ್, ಜಿಯೋ ಮತ್ತು ನಯಾರಾ ಅಂತಹ ಖಾಸಗಿ ಬಂಕ್‌ಗಳಲ್ಲಿ ಬೆಲೆ ಏರಿಕೆಯಿಂದಾಗಿ ಸಾರ್ವಜನಿಕ ಬಂಕ್‌ಗಳತ್ತ ಮುಖ ಮಾಡಿದ ಜನ.
  • ತೈಲ ವ್ಯಾಪಾರಿಗಳು ಲಕ್ಷಾಂತರ ರೂಪಾಯಿ ಮುಂಗಡ ಹಣ ಪಾವತಿಸಿದರೂ ಡಿಪೋಗಳಿಂದ ಪೂರೈಕೆಯಾಗದ ಇಂಧನ.

ಎಲ್‌ಪಿಜಿ ಬಿಕ್ಕಟ್ಟಿನ ನೆನಪು

ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಆಟೋ ಎಲ್‌ಪಿಜಿ ಮತ್ತು ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿ ದೊಡ್ಡ ಸಂಚಲನ ಮೂಡಿಸಿತ್ತು. ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ಹೋಟೆಲ್ ದರ ಏರಿಕೆಯಾಗಿದ್ದರೆ, ಪಿಜಿ ಬಾಡಿಗೆಗಳು ಹೆಚ್ಚಾಗುವ ಭೀತಿಯೂ ಎದುರಾಗಿದೆ. ಅದರ ಬೆನ್ನಲ್ಲೇ ಈಗ ಪೆಟ್ರೋಲ್ ಮತ್ತು ಡೀಸೆಲ್ ಸಿಗದೆ ಜನರು ಬಂಕ್‌ಗಳ ಮುಂದೆ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಟೋ ಎಲ್‌ಪಿಜಿಗಾಗಿ ಸವಾರರು ಗಂಟೆಗಟ್ಟಲೆ ಕಾಯುತ್ತಿದ್ದ ದೃಶ್ಯಗಳು ಈಗ ಪೆಟ್ರೋಲ್ ಬಂಕ್‌ಗಳ ಮುಂದೆಯೂ ಮರುಕಳಿಸುವ ಆತಂಕ ಶುರುವಾಗಿದೆ.

ಡಿಪೋಗಳಿಂದ ಪೂರೈಕೆ ಸ್ಥಗಿತ

ತೈಲ ಮಾರಾಟಗಾರರು ಇಂಧನಕ್ಕಾಗಿ ಮುಂಗಡವಾಗಿ ಹಣ ಪಾವತಿಸಿದ್ದರೂ, ಡಿಪೋಗಳಿಂದ ಬಂಕ್‌ಗಳಿಗೆ ಸರಿಯಾದ ಸಮಯಕ್ಕೆ ಸರಬರಾಜು ಆಗುತ್ತಿಲ್ಲ. ಇಂಡಿಯನ್ ಆಯಿಲ್ (Indian Oil) ಬಂಕ್‌ಗಳಲ್ಲಿ ಸದ್ಯಕ್ಕೆ ಪೂರೈಕೆ ಸುಗಮವಾಗಿದ್ದರೂ, ಎಚ್‌ಪಿ ಮತ್ತು ಭಾರತ್ ಬಂಕ್‌ಗಳಲ್ಲಿ ಮಾತ್ರ ಪರಿಸ್ಥಿತಿ ಬಿಗಡಾಯಿಸಿದೆ.

ಇದನ್ನೂ ಓದಿ: ಹೋಟೆಲ್, ಆಟೋ ಬೆನ್ನಲ್ಲೇ ಈಗ ಪಿಜಿ ಸರದಿ: ಬೆಂಗಳೂರಿನಲ್ಲಿ ಶೇ 10ರಷ್ಟು ದುಬಾರಿಯಾಗಲಿದೆ ಪಿಜಿ ಬಾಡಿಗೆ

ಕೆಲವು ಬಂಕ್‌ಗಳಲ್ಲಿ ಇಂದು ದಾಸ್ತಾನು ಬಂದಿದೆ ಎಂದು ಮಾಲೀಕರು ಹೇಳುತ್ತಿದ್ದಾರಾದರೂ, ಬೇಡಿಕೆಗೆ ತಕ್ಕಷ್ಟು ಇಂಧನ ಸಿಗುತ್ತಿಲ್ಲ. ಈ ಪೂರೈಕೆ ಕೊರತೆಯ ಬಗ್ಗೆ ತೈಲ ಕಂಪನಿಗಳಿಂದ ಬಂಕ್ ಮಾಲೀಕರಿಗೆ ಇನ್ನು ಯಾವುದೇ ಸ್ಪಷ್ಟ ಮಾಹಿತಿ ದೊರೆತಿಲ್ಲ. ಇದು ವಾಹನ ಸವಾರರ ಆತಂಕವನ್ನು ಇಮ್ಮಡಿಗೊಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *