ಬೆಂಗಳೂರಿನಲ್ಲಿ ಶೂಟೌಟ್: ವಿಚ್ಛೇದನ ಕೋರ್ಟ್​​​​​ನಲ್ಲಿರುವಾಗಲೇ ಹೆಂಡ್ತಿಯನ್ನ ಗುಂಡಿಕ್ಕಿ ಕೊಂದ ಪತಿ – Kannada News | A man shots his wife dead on a busy road In Bengaluru after she asking divorce

ಬೆಂಗಳೂರು, (ಡಿಸೆಂಬರ್ 23):  ಗಂಡ ಹೆಂಡತಿ (Husband And Wife) ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಹೆಂಡತಿ ಜೊತೆ ಜಗಳ ತೆಗೆದ ಪತಿ ಏಕಾಏಕಿ ಗನ್‌ ತೆಗೆದು ಹೆಂಡತಿ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರಿನ (Bengaluru) ಬಸವೇಶ್ವರ ನಗರದ ವೆಸ್ಟಿನ್ ಹೋಟೆಲ್‌ ಬಳಿ ನಡೆದಿದೆ. ಇದರಿಂದ ಗಂಭೀರ ಗಾಯಗೊಂಡು ಪತ್ನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಮೃತ ಮಹಿಳೆಯನ್ನು ಭುವನೇಶ್ವರಿ ಎಂದು ಗುರುತಿಸಲಾಗಿದ್ದು, ಆರೋಪಿಯಾದ ಪತಿ ಬಾಲ ಮುರುಗನ್ ಘಟನೆ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ವಿಚ್ಛೇದನ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಬರುತ್ತಿರುವಾಗಲೇ ಬಾಲ ಮುರುಗನ್, ನಡುರಸ್ತೆಯಲ್ಲೇ ಹೆಂಡತಿ ಭುವನೇಶ್ವರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಶೂಟೌಟ್​​​ನಿಂದ ಬಸವೇಶ್ವರ ನಗರವೇ ಬೆಚ್ಚಿಬಿದ್ದಿದೆ.

ಹೆಂಡ್ತಿ ಮೇಲೆ ಅನುಮಾನಪಟ್ಟು ಶೂಟ್​

ಬಾಲಮುರುಗನ್​ ಹಾಗೂ ಭುವನೇಶ್ವರಿ 2011ರಲ್ಲಿ ಮದುವೆಯಾಗಿದ್ದು, ಬಳಿಕ ತಮಿಳುನಾಡಿನ ಸೇಲಂನಿಂದ ಬಂದು ಬೆಂಗಳೂರಿನ ರಾಜಾಜಿನಗರದಲ್ಲಿ ಎರಡು ಮಕ್ಕಳೊಂದಿಗೆ ನೆಲೆಸಿದ್ದರು. ಬಾಲಮುರುಗನ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಪತ್ನಿ ಭುವನೇಶ್ವರಿ ಬ್ಯಾಂಕ್ ಉದ್ಯೋಗಿ ಆಗಿದ್ದರು.ಆದ್ರೆ, ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಈ ಸಂಬಂಧ ಆಗಾಗ ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತು ಭುವನೇಶ್ವರಿ, ವಿಚ್ಛೇದನ ಕೇಳಿದ್ದಳು. ಇದಕ್ಕೆ ಮುರುಗನ್ ಒಪ್ಪಿರಲಿಲ್ಲ. ಕೊನೆಗೆ ಭುವನೇಶ್ವರಿ 2024ರಲ್ಲಿ ಮುರುಗನ್​​ನಿಂದ ದೂರವಾಗಿ ಕೆಪಿ ಅಗ್ರಹಾರಕ್ಕೆ ಶಿಫ್ಟ್ ಆಗಿದ್ದರು. ಬಳಿಕ ಅವರು ಡಿವೋರ್ಸ್‌ ಗಾಗಿ ಕೋರ್ಟ್​​​ಗೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಕೋರ್ಟ್​​ ಮುರುಗನ್​​ಗೆ ನೋಟಿಸ್ ನೀಡಿತ್ತು. ಅದರಂತೆ ಮುರುಗನ್ ನ್ಯಾಯಾಲಯಕ್ಕೆ ಹಾಜರಾಗಿದ್ದ. ಇತ್ತ ಭುವನೇಶ್ವರಿ ಸಹ ವಿಚಾರಣೆಗೆ ಹಾಜರಾಗಿದ್ದು, ಎಲ್ಲಾ ವಿಚಾರಣೆ ಮುಗಿಸಿ ಕೋರ್ಟ್​​​ನಿನಿಂದ ಇಬ್ಬರು ಆಚೆ ಬಂದಿದ್ದರು.

ಇದನ್ನೂ ಓದಿ: ತನಗೆ ಮರ್ಯಾದೆ ಕೊಡ್ಲಿಲ್ಲ ಅಂತಾ ಹೆಂಡತಿಯನ್ನೇ ಕೊಲ್ಲಲು ಸುಪಾರಿ ಕೊಟ್ಟ ಪತಿ!

ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ತೀವ್ರ ಸ್ವರೂಪ ಹೋಗಿದೆ. ಇದರಿಂದ ಆಕ್ರೋಶಗೊಂಡ ಪತಿ ಮುರುಗನ್, ನಡು ರಸ್ತೆಯಲ್ಲೇ ಗನ್ ತೆಗೆದು ಪತ್ನಿ ಭುವನೇಶ್ವರಿ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಭುವನೇಶ್ವರಿಯನ್ನು ಕೂಡಲೇ ಆಸ್ಪತ್ರೆಗೆ ದಾಖಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಹೆಂಡ್ತಿಗೆ ಶೂಟ್ ಮಾಡಿ ಪೊಲೀಸ್ ಠಾಣೆಗೆ

ಹೆಂಡತಿ ಮೇಲೆ ಗುಂಡು ಹಾರಿಸಿದ ಬಳಿಕ ಮುರುಗನ್​ ನೇರವಾಗಿ ಮಾಗಡಿ ರಸ್ತೆ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ. ಕೂಡಲೇ ಪೊಲಿಸರು, ಶೂಟೌಟ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಅನೈತಿಕ ಸಂಬಂಧ ಅನುಮಾನ ಹಾಗೂ ಡಿವೋರ್ಸ್​​ ಕೇಳಿರುವುದಕ್ಕೆ ಕೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಈ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಇನ್ನು ಆರೋಪಿ ಪಿಸ್ತೂಲನ್ನು ಅಕ್ರಮವಾಗಿ ತರಿಸಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆಯೂ  ತನಿಖೆ ಕೈಗೊಂಡಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *