‘ಬೆಂಗಳೂರು ಟ್ರಾಫಿಕ್ ನಿಮಗೆ ತಾಳ್ಮೆಯ ಪಾಠ ಕಲಿಸುತ್ತೆ’: ರೋಡ್ ರೇಜ್ ಪ್ರಕರಣದಲ್ಲಿ ಟೆಕ್ಕಿಗೆ ಹೈಕೋರ್ಟ್ ಚಾಟಿ!

‘ಬೆಂಗಳೂರು ಟ್ರಾಫಿಕ್ ನಿಮಗೆ ತಾಳ್ಮೆಯ ಪಾಠ ಕಲಿಸುತ್ತೆ’: ರೋಡ್ ರೇಜ್ ಪ್ರಕರಣದಲ್ಲಿ ಟೆಕ್ಕಿಗೆ ಹೈಕೋರ್ಟ್ ಚಾಟಿ!

ಬೆಂಗಳೂರು, ಏಪ್ರಿಲ್ 7: ‘ನಿಮಗೆ ತಾಳ್ಮೆ ಇಲ್ಲದಿದ್ದರೆ ಇಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಬೆಂಗಳೂರಿನ (Bangalore) ಟ್ರಾಫಿಕ್ ನಿಮಗೆ ತಾಳ್ಮೆಯನ್ನು ಕಲಿಸುತ್ತದೆ. ರೋಡ್ ರೇಜ್ ಅಥವಾ ರಸ್ತೆಯ ಮೇಲಿನ ಇಂತಹ ಉದ್ಧಟತನದ ವರ್ತನೆಗಳನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ’ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಗಂಭೀರವಾಗಿ ಟೆಕ್ಕಿಯೊಬ್ಬರಿಗೆ ಎಚ್ಚರಿಕೆ ನೀಡಿದೆ. ತನ್ನ ವಿರುದ್ಧ ದಾಖಲಾಗಿದ್ದ ರೋಡ್​ ರೇಜ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಈ ಮೌಖಿಕ ಎಚ್ಚರಿಕೆ ನೀಡಿದೆ.

ಘಟನೆಯ ಹಿನ್ನೆಲೆ

2025ರ ಅಕ್ಟೋಬರ್ 26ರಂದು ಎಂಎಸ್ ರಾಮಯ್ಯ ಆಸ್ಪತ್ರೆಯ ಸಿಗ್ನಲ್ ಬಳಿ ಘಟನೆ ನಡೆದಿತ್ತು. ಅರ್ಜಿದಾರ ಸಾಫ್ಟ್‌ವೇರ್ ಇಂಜಿನಿಯರ್ ಕಾರು ಚಲಾಯಿಸುತ್ತಿದ್ದು, ಸ್ಕೂಟರ್‌ಗೆ ಗುದ್ದಿದ್ದರು ಎಂಬ ಆರೋಪ ಇದೆ. ಇದರಿಂದ ಸ್ಕೂಟರ್‌ನಲ್ಲಿದ್ದ ದಂಪತಿ ಮತ್ತು ಮಗು ಕೆಳಗೆ ಬಿದ್ದಿದ್ದರು. ಇದು ಉದ್ದೇಶಪೂರ್ವಕವಾಗಿ ನಡೆದ ‘ರೋಡ್ ರೇಜ್’ ಘಟನೆ ಎಂದು ದೂರು ದಾಖಲಾಗಿತ್ತು. ಮೊದಲು ಸಂಚಾರಿ ಪೊಲೀಸರ ಬಳಿ ಇದ್ದ ಪ್ರಕರಣವನ್ನು ಸದಾಶಿವನಗರ ಪೊಲೀಸರಿಗೆ ವರ್ಗಾಯಿಸಿದ ನಂತರ, ಬಿಎನ್‌ಎಸ್ ಸೆಕ್ಷನ್ 109 (1) ಅಡಿಯಲ್ಲಿ ಕೊಲೆ ಯತ್ನದ ಪ್ರಕರಣವನ್ನೂ ಸೇರಿಸಲಾಗಿತ್ತು.

ಹೈಕೋರ್ಟ್ ಹೇಳಿದ್ದೇನು?

ಅರ್ಜಿದಾರರ ಪರ ವಕೀಲರು, ‘ನನ್ನ ಕಕ್ಷಿದಾರರಿಗೆ ಯಾವುದೇ ಕೆಟ್ಟ ಉದ್ದೇಶವಿರಲಿಲ್ಲ, ಸುಖಾಸುಮ್ಮನೆ ಕೊಲೆ ಯತ್ನದ ಕೇಸ್ ಹಾಕಲಾಗಿದೆ’ ಎಂದು ವಾದಿಸಿದರು. ಆದರೆ ಇದನ್ನು ಒಪ್ಪದ ನ್ಯಾಯಮೂರ್ತಿಗಳು, ‘ರಸ್ತೆಯ ಮೇಲೆ ನಡೆಯುವ ಜಗಳ ಅಥವಾ ಆವೇಶವೇ ಇಂತಹ ಗಂಭೀರ ಸೆಕ್ಷನ್‌ಗಳನ್ನು ಹಾಕಲು ಕಾರಣವಾಗಬಹುದು. ಸದ್ಯ ತನಿಖೆ ನಡೆಯುತ್ತಿರುವುದರಿಂದ ನಾವು ಮಧ್ಯಪ್ರವೇಶ ಮಾಡುವುದಿಲ್ಲ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮನೆ ಕಟ್ಟುವವರಿಗೆ ಜಿಬಿಎ ಬಂಪರ್ ಗಿಫ್ಟ್! ಸೆಟ್ ಬ್ಯಾಕ್ ಉಲ್ಲಂಘನೆ ಮಿತಿ ವಿಸ್ತರಣೆ

ಅಲ್ಲದೆ, ಚಾರ್ಜ್ ಶೀಟ್ ಸಲ್ಲಿಸಿದ ನಂತರ ಬೇಕಿದ್ದರೆ ಮತ್ತೆ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಸೂಚಿಸಿದರು. ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ಅರ್ಜಿಯನ್ನು ಹಿಂಪಡೆದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *