ಬೆಂಗಳೂರು, ಆ.15: ಸರ್ಕಾರಿ ಜಾಗಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಹಾಗೂ ಸಾರ್ವಜನಿಕ ಸ್ಥಳಗಳನ್ನು ಬಳಸಲು ಸರ್ಕಾರದ ಪೂರ್ವಾನುಮತಿ ಕಡ್ಡಾಯಗೊಳಿಸುವ ಮಸೂದೆ (Bill) ಕುರಿತಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಟಿವಿ9ಗೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಆರ್ಎಸ್ಎಸ್ ಅಥವಾ ಬಿಜೆಪಿಯನ್ನು ನಿಷೇಧಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನ್ವಯವೇ ಈ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
“ಸರ್ಕಾರಿ ಜಾಗದಲ್ಲಿ ಏನೇ ಕಾರ್ಯಕ್ರಮ ಮಾಡಿದರೂ ಅಥವಾ ರಸ್ತೆಗಳನ್ನು ಬಳಸಬೇಕಾದರೂ ಅನುಮತಿ ಪಡೆಯುವುದು ಕಡ್ಡಾಯ. ನಾವು ಸಹ ರಸ್ತೆ ಬಳಸುವಾಗ ಅನುಮತಿ ಪಡೆಯುತ್ತೇವೆ. ಸಾರ್ವಜನಿಕ ಸ್ಥಳಗಳ ದುರುಪಯೋಗ ತಡೆಯಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನ್ವಯವೇ ಈ ಮಸೂದೆಯನ್ನು ತರಲಾಗುತ್ತಿದೆ.” ಎಂದು ಗೃಹಸಚಿವ ಹೇಳಿದ್ದಾರೆ.
“ಬಿಲ್ನಲ್ಲಿ ಎಲ್ಲಿಯೂ ನಿಷೇಧ (Ban) ಎಂಬ ಪದ ಬಳಸಿಲ್ಲ. ಯಾವುದೇ ಸಂಘ-ಸಂಸ್ಥೆಗಳ ಹೆಸರನ್ನು ಪ್ರತ್ಯೇಕವಾಗಿ ಉಲ್ಲೇಖಿಸಿಲ್ಲ. ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡಬೇಕಾದರೂ ಅನುಮತಿ ಬೇಕು. ಹೀಗಿರುವಾಗ ಆರ್ಎಸ್ಎಸ್ ಅಥವಾ ಬಿಜೆಪಿಯನ್ನು ನಿಷೇಧಿಸಿದ್ದೇವೆ ಎಂದು ಯಾರು ಹೇಳಿದರು? ಬಿಲ್ ಅನ್ನು ಯಾರಾದರೂ ಸರಿಯಾಗಿ ಓದಿದ್ದಾರಾ? ಯಾರಾದರೂ ಧ್ವಜ ಹಿಡಿಯುವುದರಿಂದ ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಯಾವುದೇ ವಸ್ತುವಿನಿಂದ ಸಮಾಜದಲ್ಲಿ ಪ್ರಚೋದನೆ ಸೃಷ್ಟಿಸಿದರೆ ಅಥವಾ ಪ್ರಚೋದನಕಾರಿ ಎಂದು ದೂರು ಬಂದರೆ ಖಂಡಿತವಾಗಿಯೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಿಂದನೆ ಅಥವಾ ಪ್ರಚೋದನೆ ಇಲ್ಲದಿದ್ದ ಮೇಲೆ ಅವರಿಗೆ ಏಕೆ ಭಯ?” ಎಂದು ಹೇಳಿದರು.
ಇದನ್ನೂ ಓದಿ: ಆರ್ಎಸ್ಎಸ್ ನೋಂದಣಿ ಆಗಿಲ್ಲ, ಮುಂದೆಯೂ ಆಗಲ್ಲ: ಪ್ರಿಯಾಂಕ್ ಖರ್ಗೆಗೆ ಬಿ.ಎಲ್. ಸಂತೋಷ್ ತಿರುಗೇಟು
“ಆರ್ಎಸ್ಎಸ್ ಬಗ್ಗೆ ಮಾತನಾಡಿದರೆ ನಾಶವಾಗುತ್ತೀರಿ’ ಎಂದಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, “ನನ್ನನ್ನು ನಾಶ ಮಾಡಬೇಕು ಎಂದಿದ್ದರೆ ಮಾಡಿ. ಆರ್ಎಸ್ಎಸ್ನ ರಹಸ್ಯವೇನು? ಕಾನೂನಾತ್ಮಕವಾಗಿ ಮಾತನಾಡಿದರೆ ನಾಶ ಮಾಡುತ್ತೀರಾ? ಆರ್ಎಸ್ಎಸ್ ಕಾನೂನಿಗಿಂತ ಮೀರಿದೆಯಾ? ಬೆದರಿಕೆ ಹಾಕಿ ಹೆದರಿಸುವುದು ನನ್ನ ಹತ್ತಿರ ನಡೆಯುವುದಿಲ್ಲ. ಕೊಲೆ ಮಾಡುತ್ತೀರಾ ಅಷ್ಟೇ ತಾನೇ?” ಎಂದು ಖಾರವಾಗಿ ಪ್ರಶ್ನಿಸಿದರು. ವಿಧೇಯಕದಲ್ಲಿ ಏನಾದರೂ ಲೋಪಗಳಿದ್ದರೆ ಸದನದಲ್ಲಿ ಬಂದು ಚರ್ಚಿಸಿ. ಸರಿಯಿಲ್ಲ ಎಂದರೆ ತಿದ್ದುಪಡಿ ಮಾಡಿಕೊಳ್ಳುತ್ತೇವೆ. ರಾಜ್ಯಪಾಲರು ತಮ್ಮ ಹಕ್ಕನ್ನು ಚಲಾಯಿಸುತ್ತಾರೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ.” ಎಂದು ಹೇಳಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ