Headlines

ಬೇರೆ ಪಕ್ಷಕ್ಕೆ ಹೋಗುವುದಿದ್ದರೆ ಮೊದಲು ರಾಜೀನಾಮೆ ಕೊಡಿ; ಶಿವಸೇನೆ ಸಂಸದರಿಗೆ ಸಂಜಯ್ ರಾವತ್ ಸವಾಲು – Kannada News | Resign if you want to switch Sanjay Raut challenges rebel MPs of Uddhav Thackeray Shiv Sena

ನವದೆಹಲಿ, ಜೂನ್ 17: ಶಿವಸೇನೆ (ಯುಬಿಟಿ) ಪಕ್ಷದಲ್ಲಿ ಮತ್ತೊಂದು ಬಿರುಕು ಮೂಡಲಿದೆ ಎಂಬ ವದಂತಿಗಳು ಹರಡುತ್ತಿರುವ ಬೆನ್ನಲ್ಲೇ, ಉದ್ಧವ್ ಠಾಕ್ರೆ ಬಣದ ಪ್ರಮುಖ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ರಾವತ್ (Sanjay Raut) ಇಂದು ದೆಹಲಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಬಂಡಾಯಗಾರರಿಗೆ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ. “ಪಕ್ಷಾಂತರ ಮಾಡಬೇಕೆಂಬ ಆಲೋಚನೆ ಇರುವವರು ಮೊದಲು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಹೋಗಲಿ” ಎಂದು ಬಹಿರಂಗ ಸವಾಲು ಹಾಕಿದ್ದಾರೆ. ಈ ಬೆಳವಣಿಗೆಯು ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಶಿವಸೇನೆ ಠಾಕ್ರೆ ಬಣದ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಹಗಲಿರುಳು ಶ್ರಮಿಸಿ ಇವರನ್ನು ಲೋಕಸಭೆಗೆ ಗೆಲ್ಲಿಸಿದ್ದಾರೆ. ಉದ್ಧವ್ ಠಾಕ್ರೆ ಅವರ ನಾಯಕತ್ವ ಹಾಗೂ ಪಕ್ಷದ ಚಿಹ್ನೆಯಡಿ ಗೆದ್ದು ಬಂದಿರುವ ಸಂಸದರು, ಈಗ ಪಕ್ಷದಲ್ಲಿ ಇರಲು ಇಷ್ಟವಿಲ್ಲದಿದ್ದರೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಗುಡುಗಿದ್ದಾರೆ. ಆಶ್ಚರ್ಯದ ಸಂಗತಿಯೆಂದರೆ, ಉದ್ಧವ್ ಬಣದ ಒಟ್ಟು 9 ಲೋಕಸಭಾ ಸಂಸದರ ಪೈಕಿ ಕೇವಲ ಮೂವರು (ಅರವಿಂದ್ ಸಾವಂತ್, ಅನಿಲ್ ದೇಸಾಯಿ ಮತ್ತು ರಾಜಾಭಾವು ವಾಜೆ) ಮಾತ್ರ ಸಂಜಯ್ ರಾವತ್ ಅವರ ಈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಉದ್ಧವ್ ಠಾಕ್ರೆಯವರ ಶಿವಸೇನೆಯಲ್ಲಿ ಬಿರುಕು; ಪ್ರತ್ಯೇಕ ಗುಂಪು ರಚಿಸುತ್ತಾರಾ ಯುಟಿಬಿ ಸಂಸದರು?

ನಮ್ಮ ಪಕ್ಷದ ಸಂಸದರನ್ನು ಸೆಳೆಯಲು ವಿರೋಧಿ ಬಣಗಳು ಮತ್ತು ತೃತೀಯ ಶಕ್ತಿಗಳು ಹಣದ ಹೊಳೆಯನ್ನೇ ಹರಿಸುತ್ತಿವೆ ಎಂದು ಸಂಜಯ್ ರಾವತ್ ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಪಕ್ಷದ ಸಂಸದರನ್ನು ಖರೀದಿಸಲು ತಲಾ 50 ಕೋಟಿ ರೂ. ಹಾಗೂ ಇತರೆ ಆಮಿಷಗಳನ್ನು ಒಡ್ಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭ್ಯವಿದೆ. ಕೆಲವು ಸಂಸದರನ್ನು ರಹಸ್ಯವಾಗಿ ಕರೆದೊಯ್ಯಲು ಈಗಾಗಲೇ ವಿಶೇಷ ಚಾರ್ಟರ್ಡ್ ವಿಮಾನಗಳ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.

ಪಕ್ಷದ ‘ವಿಪ್’ ಈಗಲೂ ಜಾರಿಯಲ್ಲಿದೆ. ಪಕ್ಷದ ಅಸ್ತಿತ್ವದ ಕಾನೂನು ಹೋರಾಟ ಮುಂದುವರಿದಿದ್ದು, ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಕುರಿತು ಲೋಕಸಭಾ ಸ್ಪೀಕರ್ ಅವರಿಗೆ ಅಧಿಕೃತ ಪತ್ರ ಬರೆಯಲಾಗಿದೆ ಎಂದು ಸಂಜಯ್ ರಾವತ್ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *