ಮಲ್ಲಿಕಾರ್ಕುನ ಖರ್ಗೆ ಮತ್ತು ರಾಹುಲ್ ಗಾಂಧಿImage Credit source: PTI
ಬೆಂಗಳೂರು, ಆಗಸ್ಟ್ 03: ಸಿಎಂ ಡಿಕೆ ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆ ಸಂಬಂಧ 20 ಜನರ ಹೆಸರನ್ನು ಒಳಗೊಂಡ ಪಟ್ಟಿ ಹೈಕಮಾಂಡ್ನಿಂದ ಬಿಡುಗಡೆ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಮಂತ್ರಿಗಿರಿ ಸಿಗದಿದ್ದಕ್ಕೆ ಮುನಿಸಿಕೊಂಡಿರುವ ಕೆಲ ಶಾಸಕರು ರಾಜೀನಾಮೆ ನೀಡೋದಾಗಿ ಅದಾಗಲೇ ಘೋಷಣೆ ಮಾಡಿದ್ದಾರೆ. ಆದರೆ ಪಕ್ಷದ ಶಾಸಕ ರಾಜೀನಾಮೆ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ವರಿಷ್ಠರು, ಸಿಎಂ ಡಿ.ಕೆ.ಶಿವಕುಮಾರ್ಗೆ ಕರೆ ಮಾಡಿ ಈ ಬಗ್ಗೆ ವಿವರ ಕೇಳಿದ್ದಾರೆ ಎನ್ನಲಾಗಿದೆ.
ರಾಜೀನಾಮೆ ಅಂಗೀಕರಿಸಲು ಸೂಚನೆ
ರಾಜೀನಾಮೆ ಬೆದರಿಕೆ ಹಾಕಿರುವ ಶಾಸಕರ ಕುರಿತು ವರಿಷ್ಠರು ವಿವರಣೆ ಕೇಳಿದ್ದು, ಸಚಿವ ಸ್ಥಾನ ಸಿಗದಿದ್ದವರಿಗೆ ನಿಗಮ ಮಂಡಳಿ ಕೊಡುತ್ತೇವೆ. ಅದನ್ನೂ ಮೀರಿ ರಾಜೀನಾಮೆ ನೀಡಿದರೆ ಅಂಗೀಕರಿಸಿ ಎಂದಿ ಸಿಎಂ ಡಿಕೆಶಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ನೂತನ ಸಚಿವರ ಪ್ರಮಾಣವಚನಕ್ಕು ಮುನ್ನವೇ ವರಿಷ್ಠರ ತೀರ್ಮಾನದ ಬಗ್ಗೆ ಕೆಲ ಕಾಂಗ್ರೆಸಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಡುವೆಯೇ ಹೈಕಮಾಂಡ್ನ ಈ ಸೂಚನೆ ಭಾರಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ‘ಇದು ನಿರಾಶಾದಾಯಕ ಪಟ್ಟಿ’: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತನ್ವೀರ್ ಸೇಠ್ ತೀವ್ರ ಬೇಸರ
ರಾಜೀನಾಮೆಗೆ ಮುಂದಾಗಿರುವ ಕೆಲ ಶಾಸಕರು
ಮಂತ್ರಿಗಿರಿ ಸಿಗದ್ದಕ್ಕೆ ಮುನಿಸಿಕೊಂಡಿರುವ ವಿಜಯಪುರ ಜಿಲ್ಲೆಯ ಇಂಡಿ ಶಾಸಕ ಯಶವಂತರಾಯಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸ್ಪೀಕರ್ ರುದ್ರಪ್ಪ ಲಮಾಣಿಗೆ ರಾಜೀನಾಮೆ ಪತ್ರವನ್ನು ಅವರು ಸಲ್ಲಿಕೆ ಮಾಡಿದ್ದರೆ, ಇತ್ತ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಳೆ (ಆಗಸ್ಟ್ 4) ಬೆಳಗ್ಗೆ 10 ಗಂಟೆಗೆ ಶಾಸಕ ಸ್ಥಾನ ಹಾಗೂ ನಿಗಮ ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದವರು ಘೋಷಿಸಿದ್ದಾರೆ. ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಭದ್ರಾವತಿ ಎಂಎಲ್ಎ ಸಂಗಮೇಶ್, 30-40 ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಬಿಜೆಪಿಗರು 50 ಕೋಟಿ ಕೊಡ್ತೀನಿ ಅಂದ್ರೂ ಹೋಗಿಲ್ಲ. ಆದರೆ ಮಂತ್ರಿ ಮಾಡ್ತೀವಿ ಎಂದು ಹೇಳಿ ಮೋಸ ಮಾಡಿದ್ದಾರೆ. 136 ಸ್ಥಾನ ಇದೆ ಅಂತಾ ಕಾಂಗ್ರೆಸ್ಗೆ ಹಮ್ಮು ಬಂದಿದೆ. ನಾಳೆ ನನ್ನ ಕ್ಷೇತ್ರದ ಜನರ ಜೊತೆಗೆ ಸಭೆ ನಡೆಸುತ್ತೇನೆ. ಕ್ಷೇತ್ರದ ಜನ ಹೇಳಿದ್ರೆ ನಾನು ರಾಜೀನಾಮೆ ಕೊಡ್ತೇನೆ ಎಂದವರು ತಿಳಿಸಿದ್ದಾರೆ.
ವರದಿ: ಈರಣ್ಣಾ ಬಸವ, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.