ಬೆಂಗಳೂರು, ಜುಲೈ 28: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ಅವಧಿ ವಿಸ್ತರಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಕರ್ನಾಟಕ ಹೈಕೋರ್ಟ್ ಇತ್ಯರ್ಥಪಡಿಸಿದೆ.ಸಾಹಿತಿ ದೇವನೂರು ಮಹದೇವ, ಇತಿಹಾಸ ತಜ್ಞ ರಾಮಚಂದ್ರ ಗುಹಾ, ನಿವೃತ್ತ ಮೇಜರ್ ಜನರಲ್ ಎಸ್.ಜಿ. ವಂಬಟ್ಕೆರೆ ಹಾಗೂ ಲೇಖಕಿ ಸಬೀಹಾ ಭೂಮಿಗೌಡ ಅವರು ಈ ಅರ್ಜಿ ಸಲ್ಲಿಸಿದ್ದರು. ಬಿಎಲ್ಒಗಳಿಗೆ ಸಮರ್ಪಕ ಮಾಹಿತಿ ಹಾಗೂ ತರಬೇತಿ ಇಲ್ಲದಿರುವುದು ಮತ್ತು ಮತದಾರರ ನೆರವು ಕೇಂದ್ರಗಳ ಸರಿಯಾದ ಕಾರ್ಯನಿರ್ವಹಣೆ ಕೊರತೆಯಿಂದ ಸುಮಾರು 70 ಲಕ್ಷ ಮತದಾರರು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ವಾದ ಮಂಡಿಸಿದ್ದರು.
ಹೈಕೋರ್ಟ್ ಮಧ್ಯಪ್ರವೇಶ ಅನಗತ್ಯ ಎಂದ ಪೀಠ
ಇದಕ್ಕೆ ಚುನಾವಣಾ ಆಯೋಗದ ಪರ ವಕೀಲ ಶರತ್ ದೊಡ್ವಾಡ್ ಪ್ರತಿಕ್ರಿಯಿಸಿ, “ಅಗತ್ಯ ಬಿದ್ದರೆ SIR ಅವಧಿಯನ್ನು ವಿಸ್ತರಿಸಲಾಗುವುದು. ಕರಡು ಪಟ್ಟಿ ಪ್ರಕಟವಾದ ನಂತರವೂ ಬಿಟ್ಟುಹೋದ ಮತದಾರರು ಅರ್ಜಿ ಸಲ್ಲಿಸಲು ಅವಕಾಶವಿದೆ” ಎಂದು ಕೋರ್ಟ್ಗೆ ತಿಳಿಸಿದರು. ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದಿಸಿ, ಸರ್ಕಾರವೂ ಮತದಾರರ ಹಕ್ಕು ರಕ್ಷಿಸುವಂತೆ ಆಯೋಗಕ್ಕೆ ಮನವಿ ಸಲ್ಲಿಸಿದೆ ಎಂದರು. ಚುನಾವಣಾ ಆಯೋಗವು ಈ ಸಮಸ್ಯೆಗಳನ್ನು ಬಗೆಹರಿಸಲು ಸಮರ್ಥವಾಗಿದೆ ಹಾಗೂ ಇದೇ ವಿಷಯಗಳು ಸುಪ್ರೀಂಕೋರ್ಟ್ನಲ್ಲಿಯೂ ಪರಿಶೀಲನೆಯಲ್ಲಿರುವುದರಿಂದ ಈ ಹಂತದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಅನಗತ್ಯವೆಂದು ಪೀಠವು ಅರ್ಜಿಯನ್ನು ಇತ್ಯರ್ಥಗೊಳಿಸಿದೆ.
ಡಿಜಿಟಲೀಕರಣ ವಿಳಂಬ
ಮನೆ-ಮನೆ ಸಮೀಕ್ಷೆಯಲ್ಲಿ ಜೂನ್ 29ರಿಂದ 59,050 ಬಿಎಲ್ಒಗಳು ನಮೂನೆಗಳನ್ನು ವಿತರಿಸಿದ್ದರೂ, ಭರ್ತಿ ಮಾಡಿದ ಫಾರಂಗಳನ್ನು ಆ್ಯಪ್ಗೆ ಅಪ್ಲೋಡ್ ಮಾಡುವ ಡಿಜಿಟಲೀಕರಣ ಕಾರ್ಯ ಪ್ರಸ್ತುತ ಶೇ.69.51ರಷ್ಟು ಮಾತ್ರ ಪೂರ್ಣಗೊಂಡಿದೆ. 2002ರ SIR ದಾಖಲೆಗಳ ‘ಸೆಲ್ಫ್ ಮ್ಯಾಪಿಂಗ್’ ಹಾಗೂ ‘ಪ್ರೊಜೆನಿ ಮ್ಯಾಪಿಂಗ್’ ಮಾಹಿತಿ ಪತ್ತೆಹಚ್ಚುವಲ್ಲಿ ಉಂಟಾಗಿರುವ ತಾಂತ್ರಿಕ ತೊಡಕಿನಿಂದ ಈ ಪ್ರಕ್ರಿಯೆ ವಿಳಂಬವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ ಮತದಾರರ ಪಟ್ಟಿ ಪರಿಷ್ಕರಣೆ: 5.54 ಕೋಟಿ ನಮೂನೆಗಳ ವಿತರಣೆ ಪೂರ್ಣ; ASDDO ಪಟ್ಟಿಯಲ್ಲಿ 52.97 ಲಕ್ಷ ಮತದಾರರು !
ಇದುವರೆಗೆ ಸಲ್ಲಿಕೆಯಾದ 3.85 ಕೋಟಿ ನಮೂನೆಗಳಲ್ಲಿ 1.56 ಕೋಟಿ ಮತದಾರರು ಸೆಲ್ಫ್ ಮ್ಯಾಪಿಂಗ್ ಹಾಗೂ 1.93 ಕೋಟಿ ಮಂದಿ ಪ್ರೊಜೆನಿ ಮ್ಯಾಪಿಂಗ್ ಪೂರ್ಣಗೊಳಿಸಿದ್ದಾರೆ. ಯಾವುದೇ ಮ್ಯಾಪಿಂಗ್ ಮಾಹಿತಿ ಇಲ್ಲದೆ ಸಲ್ಲಿಕೆಯಾಗಿರುವ 17.19 ಲಕ್ಷ (ಶೇ. 3.1) ನಮೂನೆದಾರರಿಗೆ ಕರಡು ಪಟ್ಟಿ ಪ್ರಕಟವಾದ ನಂತರ ಅಗತ್ಯ ದಾಖಲೆ ಸಲ್ಲಿಸಲು ನೋಟಿಸ್ ನೀಡಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ