Headlines

ಮತ್ತೆ ಸಂಡೂರಿನಲ್ಲಿ ಗಣಿ ವಿಸ್ತರಣೆ ಆತಂಕ: ಸುಪ್ರೀಂ ಕೋರ್ಟ್ ಅದೇಶ ಮೀರಿ ಹೆಚ್ಚುವರಿ ಗಣಿಗಾರಿಕೆಗೆ ನಡೆಯುತ್ತಿದೆಯಾ ಸಿದ್ಧತೆ? – Kannada News | Mining Expansion Fears in Sandur: Allegations of Excess Iron Ore Extraction Beyond Supreme Court Limit in Ballari

ಮತ್ತೆ ಸಂಡೂರಿನಲ್ಲಿ ಗಣಿ ವಿಸ್ತರಣೆ ಆತಂಕImage Credit source: tv9

ಬಳ್ಳಾರಿ, ಮಾರ್ಚ್ 2: ಗಣಿನಾಡು ಎಂದೇ ಪ್ರಸಿದ್ಧಿಯಲ್ಲಿರುವ ಬಳ್ಳಾರಿಯ (Ballari) ಸಂಡೂರಿನಲ್ಲಿ (Sandur) ಮತ್ತೆ ಗಣಿ ವಿಸ್ತರಣೆ ಭೀತಿ ತಲೆದೋರಿದೆ. ಅರಣ್ಯ ಪ್ರದೇಶದ ಹೆಚ್ಚುವರಿ ಭೂಮಿಯನ್ನು ಗಣಿಗಾರಿಕೆಗೆ ನೀಡಲು ಸದ್ದಿಲ್ಲದೆ ಸಿದ್ಧತೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳಲ್ಲಿ ಆತಂಕ ಹೆಚ್ಚಿಸಿದೆ. ಸಂಡೂರಿನ ಸ್ವಾಮಿಮಲೈ ಅರಣ್ಯ ವ್ಯಾಪ್ತಿಯ ದೇವದಾರಿ ಅರಣ್ಯ ಪ್ರದೇಶದಲ್ಲಿ ಸುಮಾರು 1,000 ಎಕರೆ ಹಾಗೂ ರಾಮಗಡ ಅರಣ್ಯ ಪ್ರದೇಶದಲ್ಲಿ 150 ಎಕರೆ ಸೇರಿ ಒಟ್ಟು 1,150 ಎಕರೆ ಅರಣ್ಯ ಭೂಮಿಯನ್ನು ಗಣಿಗಾರಿಕೆಗೆ ನೀಡಲು ಯತ್ನ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಭೂಮಿಯನ್ನು ಕುದುರೆಮುಖ ಐರನ್ ಓರ್ ಕಂಪನಿ (KIOCL) ಮತ್ತು ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (VISL)ಗೆ ಲೀಸ್ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ?

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸಂಡೂರು ಭಾಗದಲ್ಲಿ ವರ್ಷಕ್ಕೆ 30 ಮಿಲಿಯನ್ ಟನ್‌ಗಳಷ್ಟು ಮಾತ್ರ ಅದಿರು ಗಣಿಗಾರಿಕೆಗೆ ಅವಕಾಶವಿದೆ. ಆದರೆ ಇದನ್ನು 50 ಮಿಲಿಯನ್ ಟನ್‌ಗಳಿಗೆ ಹೆಚ್ಚಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಇದು ನ್ಯಾಯಾಲಯದ ನಿಯಮ ಉಲ್ಲಂಘನೆಯಾಗಬಹುದು ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಸಂಡೂರಿನ ಅರಣ್ಯ ಪ್ರದೇಶದ ಒಟ್ಟು 32 ಸಾವಿರ ಹೆಕ್ಟೇರ್ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಈಗಾಗಲೇ ಗಣಿಗಾರಿಕೆಯಿಂದ ಗಣಿ ಧೂಳು, ಅಂತರ್ಜಲ ಸಮಸ್ಯೆ, ಆರೋಗ್ಯ ಸಮಸ್ಯೆಗಳು ಮತ್ತು ಪರಿಸರ ಹಾನಿ ಸೇರಿದಂತೆ ಹಲವು ಸಮಸ್ಯೆಗಳನ್ನು ಸ್ಥಳೀಯರು ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮತ್ತಷ್ಟು ಅರಣ್ಯ ಪ್ರದೇಶವನ್ನು ಗಣಿಗಾರಿಕೆಗೆ ನೀಡಿದರೆ ಲಕ್ಷಾಂತರ ಮರಗಳು ನಾಶವಾಗುವ ಸಾಧ್ಯತೆ ಇದೆ ಎಂದು ಜನರು ಎಚ್ಚರಿಸಿದ್ದಾರೆ.

ಸ್ಥಳೀಯರ ಅಭಿಪ್ರಾಯದಂತೆ, ಈಗಾಗಲೇ ಸಂಡೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಎಂಡಿಸಿ (NMDC) ಗಣಿಯಿಂದಲೇ ಅಗತ್ಯವಾದ ಅದಿರನ್ನು ಪಡೆದು ಕೈಗಾರಿಕೆಗಳನ್ನು ನಡೆಸಬಹುದು. ಕುದುರೆಮುಖ ಐರನ್ ಓರ್ ಕಂಪನಿ ಹಾಗೂ ವಿಐಎಸ್‌ಎಲ್ ಕಾರ್ಖಾನೆಗಳನ್ನು ಬಳ್ಳಾರಿ ಜಿಲ್ಲೆಯ ಕುಡುತಿನಿ ಭಾಗದಲ್ಲಿ ಸ್ಥಾಪಿಸಲು ರೈತರು ಸಾವಿರಾರು ಎಕರೆ ಭೂಮಿ ನೀಡಿರುವುದಾಗಿ ಹೇಳಲಾಗಿದೆ. ಆದ್ದರಿಂದ ಹೊಸ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದಕ್ಕೆ ಬದಲಾಗಿ ಈಗಿರುವ ಸಂಪನ್ಮೂಲಗಳನ್ನು ಬಳಸಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

“ಯಾವುದೇ ಕಾರಣಕ್ಕೂ ಹೊಸ ಗಣಿಗಾರಿಕೆಗೆ ಅವಕಾಶ ನೀಡಬಾರದು. ಪರಿಸರ, ಅರಣ್ಯ ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ಧಾರ ಕೈಗೊಳ್ಳಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಮತ್ತೆ ‘ಗಣಿ’ ಉರುಳು? ಮಾಜಿ ಸಚಿವನಿಂದ 884 ಕೋಟಿ ನಷ್ಟ ವಸೂಲಿ?

ಒಟ್ಟಿನಲ್ಲಿ, ಸಂಡೂರಿನ ಹಸಿರು ಕಾಡುಗಳನ್ನು ಮತ್ತಷ್ಟು ಗಣಿಗಾರಿಕೆಗೆ ತೆರೆದುಕೊಟ್ಟರೆ ಸಸ್ಯ-ಪ್ರಾಣಿ ಸಂಕುಲಕ್ಕೆ ಭಾರೀ ಹಾನಿಯಾಗುವ ಸಾಧ್ಯತೆ ಇದೆ. ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆಯೂ ಸಮಾನವಾಗಿ ಮುಖ್ಯ ಎಂದು ಸ್ಥಳೀಯರು, ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *