Headlines

ಮದುವೆ ಮನೆಗೆ ಬಂದು ಗ್ರಾಮದ ಮುಖ್ಯಸ್ಥರನ್ನು ಗುಂಡಿಕ್ಕಿ ಕೊಂದಿದ್ದ ಗ್ಯಾಂಗ್​ಸ್ಟರ್ ಹರ್ನೂರ್​ ಎನ್​ಕೌಂಟರ್​ನಲ್ಲಿ ಸಾವು – Kannada News | Suspect in Punjab Sarpanch Killing Shot Dead in Police Encounter

ಅಮೃತಸರ, ಜನವರಿ 07: ಮದುವೆ(Marriage) ಮನೆಗೆ ಬಂದು ಗ್ರಾಮದ ಮುಖ್ಯಸ್ಥ ಜರ್ಮಲ್ ಸಿಂಗ್ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಗ್ಯಾಂಗ್​ಸ್ಟರ್ ಹರ್ನೂರ್​ ಸಿಂಗ್​ನನ್ನು ಪೊಲೀಸರು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಿರುವ ಘಟನೆ ಪಂಜಾಬ್​ನ ತರಣ್ ತರಣ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಬೈಕ್​​ನಲ್ಲಿ ಹೋಗುತ್ತಿದ್ದಾಗ ಪೊಲೀಸರು ನಿಲ್ಲಿಸಲು ಸೂಚಿಸಿದ್ದರು, ಆದರೆ ಆತ ತಕ್ಷಣವೇ ಪೊಲೀಸರ ಮೇಲೆ ಗುಂಡು ಹಾರಿಸಲು ಶುರು ಮಾಡಿದ್ದ, ಒಂದು ಗುಂಡು ಪೊಲೀಸ್ ಅಧಿಕಾರಿಗೆ ತಗುಲಿತ್ತು.

ಆದರೆ ಬುಲೆಟ್ ಪ್ರೂಫ್ ಜಾಕೆಟ್ ಹಾಕಿದ್ದ ಪರಿಣಾಮ ಏನೂ ಆಗಲಿಲ್ಲ. ನಂತರ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದರು. ಈ ಸಮಯದಲ್ಲಿ ಹರ್ನೂರ್ ಸಿಂಗ್ ಗಾಯಗೊಂಡಿದ್ದ. ಆತನನ್ನು ಹತ್ತಿರದ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಅಷ್ಟರೊಳಗೆ ಆತ ಮೃತಪಟ್ಟಿದ್ದ.

ಹರ್ನೂರ್ ಸಿಂಗ್ ಗ್ಯಾಂಗ್​ಸ್ಟರ್ ಅಫ್ರಿದಿ ಮತ್ತು ಪ್ರಭಾ ದಾಸುವಾಲ್ ಸಹಚರನಾಗಿದ್ದ, ವಾಲ್ಟೋಹಾದ ಮುಖ್ಯಸ್ಥ ಜರ್ಮಲ್ ಸಿಂಗ್ ಅವರ ಹತ್ಯೆಯ ಹಿಂದಿನ ಪಿತೂರಿಯಲ್ಲಿ ಭಾಗಿಯಾಗಿದ್ದ. ಭಾನುವಾರ ಅಮೃತಸರದ ಮದುವೆ ಸ್ಥಳದಲ್ಲಿ ದುಷ್ಕರ್ಮಿಗಳ ಗುಂಪೊಂದು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿತ್ತು. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ದಾಸುವಾಲ್ ಮತ್ತು ಇತರ ಕೆಲವರು ಸಿಂಗ್ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದರು.

ಮತ್ತಷ್ಟು ಓದಿ: ಮಹಾರಾಷ್ಟ್ರ: ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷ ವಿನೋದ್ ಕುಲಕರ್ಣಿ ಮೇಲೆ ಅಮಾನುಷ ಹಲ್ಲೆ

ಜರ್ಮಲ್ ಸಿಂಗ್ ಹತ್ಯೆ ಪಂಜಾಬ್​ನಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳಿರುವ ಬಿಜೆಪಿ ಮುಖ್ಯಮಂತ್ರಿ ಭಗವಂತ್ ಮಾನ್ ರಾಜೀನಾಮೆಗೆ ಒತ್ತಾಯಿಸಿದೆ.ಜರ್ಮಲ್ ಸಿಂಗ್ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು, ವೇದಿಕೆಯ ಕೆಳಗೆ ಕುರ್ಚಿಯಲ್ಲಿ ಕುಳಿತಿದ್ದರು. ಅಷ್ಟರೊಳಗೆ ಮಾಸ್ಕ್​ ಧರಿಸದೆ ಸಾಮಾನ್ಯರಂತೆ ಇಬ್ಬರು ವ್ಯಕ್ತಿಗಳು ಅಲ್ಲಿಗೆ ಬಂದಿದ್ದರು.

ಅದರಲ್ಲಿ ಒಬ್ಬ ಪಿಸ್ತೂಲ್​ನಿಂದ ಏಕಾಏಕಿ ಜರ್ಮಲ್ ಮೇಲೆ ಗುಂಡು ಹಾರಿಸಿದ್ದಾನೆ. ಸಿಂಗ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಜನರು ದಿಗ್ಭ್ರಮೆಗೊಂಡು ನೋಡುತ್ತಿರುವಾಗಲೇ ದಾಳಿಕೋರರು ಸುಲಭವಾಗಿ ತಪ್ಪಿಸಿಕೊಂಡಿದ್ದರು. ಕಳೆದ ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ವಾಲ್ಟೋಹಾ ಗ್ರಾಮದ ಮೇರಿಗೋಲ್ಡ್ ಮ್ಯಾರೇಜ್ ಪ್ಯಾಲೇಸ್‌ನಲ್ಲಿ ಈ ಘಟನೆ ನಡೆದಿದೆ.ಗುಂಡಿನ ದಾಳಿ ನಡೆದ ಕೂಡಲೇ ಪೊಲೀಸ್ ತಂಡಗಳು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದವು. ಖೇಮ್ಕರನ್ ಕ್ಷೇತ್ರದ ಶಾಸಕ ಸರ್ವಾನ್ ಸಿಂಗ್ ಧುನ್, ಘಟನೆ ನಡೆದಾಗ ನಾನು ಸಮಾರಂಭದಲ್ಲಿದ್ದೆ ಎಂದು ಹೇಳಿದ್ದಾರೆ.

ನಾವು ಸಮಾರಂಭದಲ್ಲಿ ಒಟ್ಟಿಗೆ ಇದ್ದೆವು ಮತ್ತು ಚಹಾ ಕುಡಿದಿದ್ದೆವು. ಅದಾದ ನಂತರ, ನಾನು ಊಟ ಮಾಡಲು ಸಭಾಂಗಣದ ಒಳಗೆ ಹೋದೆ. ಜರ್ಮಲ್ ಸಿಂಗ್ ಇತರ ಅತಿಥಿಗಳೊಂದಿಗೆ ಹೊರಗೆ ಕುಳಿತಿದ್ದರು, ಆಗ ಗುಂಡಿನ ಸದ್ದು ಕೇಳಿಸಿತ್ತು ಎಂದು ಸರ್ವಾನ್ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:23 am, Wed, 7 January 26

Source link

Leave a Reply

Your email address will not be published. Required fields are marked *