ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ಪ್ರಶ್ನಿಸಿದ ಅಸ್ಸಾಂ ಯುವತಿ
Image Credit source: Hindustan Times
ಬೆಂಗಳೂರು, ಮೇ 01: ಮೊನ್ನೆ ನಗರದಲ್ಲಿ ಸುರಿದ ಮಳೆಯಿಂದಾದ ಅನಾಹುತಗಳಿಂದ ಸರಿಯಾಗಿ ಸುಧಾರಿಸಿಕೊಳ್ಳಲು ಬೆಂಗಳೂರಿನ ಜನರಿಗೆ ಇನ್ನೂ ಆಗಿಲ್ಲ. ಈ ನಡುವೆ ಮಳೆ ಮುಂದುವರಿದಿದ್ದು, ಮಳೆಯ ನಂತರ ನಗರದ ದುಸ್ಥಿತಿಯ ಬಗ್ಗೆ ಅಸ್ಸಾಂ ಮೂಲದ ಮತ್ತು ಹಾಲಿ ಬೆಂಗಳೂರಿನ ನಿವಾಸಿ ಅಸ್ಮಿತಾ ಗುಪ್ತಾ ಎಂಬವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಚ್ಎಸ್ಆರ್ ಲೇಔಟ್ ಪ್ರದೇಶದಲ್ಲಿ ಮಾತ್ರ ಮಳೆಯಾದರೂ ರಸ್ತೆ ನೀರಿನಿಂದ ತುಂಬುವ ಜೊತೆಗೆ ಕಸದ ರಾಶಿಯೇ ತೇಲಿಬರುವ ಕಾರಣ ಸಂಚಾರವೇ ಕಷ್ಟಕರವಾಗಿದೆ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಮಟ್ಟದ ತೆರಿಗೆಗಳನ್ನು ಪಾವತಿಸುವ ಬೆಂಗಳೂರಿಗರು ಕಳಪೆ ಗುಣಮಟ್ಟದ ರಸ್ತೆಗಳ ಮೇಲೆ ಸಂಚರಿಸುತ್ತಿದ್ದಾರೆ. ಒಂದು ಮಳೆ ಬಂದರೆ ಸಾಕು, ಗುಂಡಿಗಳು, ಟ್ರಾಫಿಕ್ ಜಾಮ್ ಮತ್ತು ಅವ್ಯವಸ್ಥೆ ಮತ್ತೆ ಮರುಕಳಿಸುತ್ತವೆ. ಆರ್ಥಿಕತೆಗೆ ಬೆನ್ನೆಲುಬಾದ ನಗರಕ್ಕೆ ಮೂಲಸೌಕರ್ಯ ಒದಗಿಸುವುದು ಅಷ್ಟು ಕಷ್ಟವೇ? ಎಂದು ಅಸ್ಮಿತಾ ಪ್ರಶ್ನಿಸಿದ್ದಾರೆ. ಸಾಲದ್ದಕ್ಕೆ ಮಳೆಯ ಸಮಯದಲ್ಲಿ ಕ್ಯಾಬ್ಗಳ ಡೈನಾಮಿಕ್ ಪ್ರೈಸಿಂಗ್ ಬಗ್ಗೆ ಕೂಡ ಅವರು ಆಕ್ರೋಶ ವ್ಯಕ್ತಪಡಿಸಿದ್ದು, 500-600 ಮೀಟರ್ ದೂರಕ್ಕೆ 240-250 ರೂಪಾಯಿಗಳ ವರೆಗೆ ದರ ಕೇಳುವುದು ಮಾನವೀಯತೆಯಲ್ಲ. ಕ್ಯಾಬ್ನಲ್ಲಿ 500 ಮೀಟರ್ ದೂರ ಹೋಗಲು ನನಗೆ 240 ರೂಪಾಯಿಗಳ ದರ ತೋರಿಸುತ್ತಿತ್ತು ಎಂದವರು ದೂರಿದ್ದಾರೆ.
ಇದನ್ನೂ ಓದಿ: ಮಳೆ ಬಂದು ನಿಂತರೂ 2 ದಿನದಿಂದ ನಡೆಯುತ್ತಲೇ ಇದೆ ಅಂಡರ್ ಪಾಸ್ ಕ್ಲೀನ್ ಕಾರ್ಯ
ಅವರ ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ಹಲವರು ನಡೆದು ಹೋಗಲಿಲ್ಲವೇ ಎಂದು ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿರುವ ಅಸ್ಮಿತಾ ರಸ್ತೆಯೇ ಇಲ್ಲದಿದ್ದಾಗ ಹೇಗೆ ನಡೆದು ಹೋಗುವುದು? ನೀರು ತುಂಬಿ ಗುಂಡಿಗಳು ಕಾಣಿಸದ ಸ್ಥಿತಿ ಉದ್ಭವವಾಗಿತ್ತು. ವಿದ್ಯುತ್ ಶಾಕ್ ಅಪಾಯವೂ ಇತ್ತು. ಅಲ್ಲದೆ ಇಂತಹ ಅಶುದ್ಧ ನೀರಿನಲ್ಲಿ ನಡೆಯುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದಿದ್ದಾರೆ.
ಅಲ್ಲದೆ, ಇಂತಹ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ-ದಕ್ಷಿಣ ವಿವಾದಕ್ಕೆ ತಿರುಗಿಸಲಾಗುತ್ತಿದೆ. ನಾವು ಪ್ರಶ್ನೆ ಕೇಳಿದರೆ ನಿಮ್ಮ ಊರಿಗೆ ಹಿಂತಿರುಗಿ ಎಂದು ಹೇಳುತ್ತಾರೆ. ನಾವು ಈ ನಗರಕ್ಕೆ ಕೆಲಸಕ್ಕಾಗಿ ಬಂದಿದ್ದರೂ, ಇಲ್ಲಿ ವಾಸಿಸುವವರೇ. ಮೂಲಸೌಕರ್ಯ ಸುಧಾರಣೆಗಾಗಿ ಕೇಳುವುದು ತಪ್ಪಲ್ಲ ಎಂದು ಅವರು ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಟಯರ್ 1 ನಗರವಾಗಿರುವ ಬೆಂಗಳೂರಲ್ಲಿ ಜನರಿಗೆ ಅಷ್ಟು ಮಟ್ಟದ ಮೂಲಸೌಕರ್ಯ ಸಿಗಬೇಕು ಎಂಬುದು ನಮ್ಮ ಆಶಯ ಎಂದು ಅವರು ತಿಳಿಸಿರೋದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.