Headlines

ಮಹಿಳೆಯ ಆಭರಣಗಳನ್ನು ಕದ್ದು ಆಕೆಯನ್ನು ಬಾವಿಗೆ ತಳ್ಳಿದ ಕಳ್ಳ, 21 ಗಂಟೆಗಳ ಬಳಿಕ ಬದುಕಿ ಬಂದ ಧೀರ ಮಹಿಳೆ – Kannada News | Woman Survives 21 Hours in Well After Robbery: Karimnagar’s Lakshmi Defies Death

ಕರೀಂನಗರ, ಜುಲೈ 05: ಕಳ್ಳನೊಬ್ಬ ಒಡವೆ, ಹಣ ದೋಚಿ ಸಾಕ್ಷಿ ನಾಶಪಡಿಸಲು 55 ವರ್ಷದ ಮಹಿಳೆಯೊಬ್ಬರನ್ನು ಕೃಷಿ ಬಾವಿ(Well)ಗೆ ತಳ್ಳಿದ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ. ಆದರೆ, ಸಾವಿನ ದವಡೆಯಿಂದ ಪಾರಾದ ಮಹಿಳೆ ಸುಮಾರು 21 ಗಂಟೆಗಳ ಕಾಲ ಬಾವಿಯಲ್ಲೇ ಹೋರಾಟ ನಡೆಸಿ ಪವಾಡಸದೃಶವಾಗಿ ಬದುಕುಳಿದಿದ್ದಾರೆ. ಆಕೆಯ ಧೈರ್ಯದಿಂದಾಗಿ ಪೊಲೀಸರು 21 ವರ್ಷದ ಆರೋಪಿ ವಿದ್ಯಾರ್ಥಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಲಸದ ಆಮಿಷ ಒಡ್ಡಿ ದರೋಡೆ
ದಿನಗೂಲಿ ಕಾರ್ಮಿಕರಾದ ತಂಗರಾಲ ಲಕ್ಷ್ಮೀ ಎಂಬುವವರು ಜುಲೈ 1 ರಂದು ಕೆಲಸಕ್ಕೆ ಹೋಗಿ ಮನೆಗೆ ಮರಳದಿದ್ದಾಗ, ಅವರ ಮಗ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ತನಿಖೆ ನಡೆಸಿದಾಗ ಕರಾಳ ಸತ್ಯ ಹೊರಬಿದ್ದಿದೆ. ಆರೋಪಿ ಧಮ್ಮ ದಿನೇಶ್ ರೆಡ್ಡಿ (21) ಎಂಬಾತ ಲಕ್ಷ್ಮೀಗೆ ತನ್ನ ಜಮೀನಿನಲ್ಲಿ ಕೆಲಸ ಕೊಡುವುದಾಗಿ ನಂಬಿಸಿ, ಮೊದಲು ರಾಪಿಡೋ ಬೈಕ್‌ನಲ್ಲಿ ಹಾಗೂ ನಂತರ ತನ್ನದೇ ಬೈಕ್‌ನಲ್ಲಿ ಜನರಿಲ್ಲದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿ ಲಕ್ಷ್ಮೀಯನ್ನು ಹೆದರಿಸಿ ಅವರಲ್ಲಿದ್ದ 5 ಗ್ರಾಂ ಚಿನ್ನ, 20 ಗ್ರಾಂ ಬೆಳ್ಳಿಯ ಕಾಲ್ಗೆಜ್ಜೆ ಹಾಗೂ ನಗದನ್ನು ದೋಚಿದ್ದ.

ಸಾಕ್ಷಿ ನಾಶಕ್ಕೆ ಸಂಚು, ಹಗ್ಗ ಕತ್ತರಿಸಿದ ಪಾಪಿ
ದರೋಡೆ ಮಾಡಿದ ನಂತರ ಯಾರೂ ತನ್ನನ್ನು ಕಂಡುಹಿಡಿಯಬಾರದೆಂದು ಆರೋಪಿ ದಿನೇಶ್ ರೆಡ್ಡಿ ಆಕೆಯನ್ನು ಆಳವಾದ ಕೃಷಿ ಬಾವಿಗೆ ತಳ್ಳಿದ್ದಾನೆ. ಬಾವಿಗೆ ಬಿದ್ದ ತಕ್ಷಣ ಲಕ್ಷ್ಮೀ ಅಲ್ಲಿದ್ದ ಹಗ್ಗವೊಂದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಇದನ್ನು ಗಮನಿಸಿದ ಕ್ರೂರಿ ಆರೋಪಿ, ಆಕೆ ಹೇಗೊ ಬದುಕುಳಿಯಬಾರದು ಎಂದು ಆ ಹಗ್ಗವನ್ನೂ ಕತ್ತರಿಸಿ ಅಲ್ಲಿಂದ ಪರಾರಿಯಾಗಿದ್ದ.

ಮತ್ತಷ್ಟು ಓದಿ: ಮಂಗಳೂರಿನಲ್ಲಿ ಮಹಾ ಅಚ್ಚರಿ: ಬಾವಿಗಳಲ್ಲಿ ಉಕ್ಕಿ ಬಂತು ಡೀಸೆಲ್, ನೀರು ಕುಡಿಯಲಾಗದೆ ಕಾವೂರು ನಿವಾಸಿಗಳು ಕಂಗಾಲು!

ಸಾವು ಗೆದ್ದ ಈಜು ಮತ್ತು ಧೈರ್ಯ
ಲಕ್ಷ್ಮೀ ಅವರಿಗೆ ಈಜು ಬರುತ್ತಿದ್ದ ಕಾರಣ ಬಾವಿಯ ನೀರಿನಲ್ಲಿ ತೇಲುತ್ತಾ, ಮೋಟಾರ್ ಪೈಪ್‌ಲೈನ್‌ಗೆ ಜೋಡಿಸಲಾಗಿದ್ದ ಮತ್ತೊಂದು ಕೇಬಲ್ ವೈರ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡರು. ನಿರ್ಜನ ಪ್ರದೇಶವಾದ್ದರಿಂದ ಆಕೆಯ ಕಿರುಚಾಟ ಯಾರಿಗೂ ಕೇಳಿಸಲಿಲ್ಲ. ಹಾಗಾಗಿ ಇಡೀ ರಾತ್ರಿ ಕತ್ತಲಲ್ಲಿ, ಕೇವಲ ಆ ಕೇಬಲ್ ವೈರ್ ಆಸರೆಯಲ್ಲಿ ಸುಮಾರು 20 ರಿಂದ 21 ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡಿದರು. ಮರುದಿನ ಬೆಳಗ್ಗೆ ಸ್ಥಳೀಯ ರೈತರು ಬಾವಿಯಿಂದ ಶಬ್ದ ಕೇಳಿ ಆಕೆಯನ್ನು ರಕ್ಷಿಸಿ, ಪೊಲೀಸರಿಗೆ ಮಾಹಿತಿ ನೀಡಿದರು.

ಕರೀಂನಗರ ಪೊಲೀಸ್ ಆಯುಕ್ತ ಗೌಸ್ ಆಲಂ ನೇತೃತ್ವದ ವಿಶೇಷ ತಂಡವು ರಾಪಿಡೋ ಬುಕಿಂಗ್, ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಕರೆಗಳ ತಾಂತ್ರಿಕ ತನಿಖೆ ನಡೆಸಿ ಆರೋಪಿ ಧಮ್ಮ ದಿನೇಶ್ ರೆಡ್ಡಿಯನ್ನು ಬಂಧಿಸಿದೆ. 21 ವರ್ಷದ ಈ ಕಾಲೇಜು ವಿದ್ಯಾರ್ಥಿ ಆನ್‌ಲೈನ್ ಜೂಜು ಹಾಗೂ ಬೆಟ್ಟಿಂಗ್ ಆ್ಯಪ್‌ಗಳಲ್ಲಿ ಬರೋಬ್ಬರಿ 4 ಲಕ್ಷ ರೂಪಾಯಿ ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿದ್ದ. ಆ ಸಾಲ ತೀರಿಸಲು ಈ ದರೋಡೆ ಹಾಗೂ ಕೊಲೆ ಯತ್ನದ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಕದ್ದ ಒಡವೆಗಳನ್ನು ಖರೀದಿಸಿದ ಆಭರಣ ವ್ಯಾಪಾರಿಯನ್ನೂ ಪೊಲೀಸರು ಬಂಧಿಸಿದ್ದು, ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *