ಮಾತಿನ ಚಕಮಕಿ… ಕ್ರೀಡಾ ಸ್ಫೂರ್ತಿಯನ್ನೇ ಮರೆತ ವಿರಾಟ್ ಕೊಹ್ಲಿ – Kannada News | IPL 2026: virat kohli and travis head fight video

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 67ನೇ ಪಂದ್ಯವು ಕೇವಲ ರನ್‌ಗಳ ಮಳೆಯಿಂದಷ್ಟೇ ಅಲ್ಲ, ಇಬ್ಬರು ಜಾಗತಿಕ ಕ್ರಿಕೆಟ್ ದಿಗ್ಗಜರ ವಾಕ್ಸಮರದಿಂದ ಇಡೀ ವಿಶ್ವದ ಗಮನ ಸೆಳೆದಿದೆ. ಮೈದಾನದಲ್ಲಿ ವಿರಾಟ್ ಕೊಹ್ಲಿ ಹಾಗೂ ಟ್ರಾವಿಸ್ ಹೆಡ್​ ನಡುವೆ ನಡೆದ ತೀವ್ರ ಮಾತಿನ ಚಕಮಕಿ ಹಾಗೂ ಪಂದ್ಯದ ಬಳಿಕ ಕೊಹ್ಲಿ ನಡೆದುಕೊಂಡು ರೀತಿ ಇದೀಗ ಚರ್ಚಾ ವಿಷಯವಾಗಿದೆ.

ಮೈದಾನದಲ್ಲಿ ನಡೆದಿದ್ದೇನು?

  • ಮೊದಲ ಇನಿಂಗ್ಸ್‌ನಲ್ಲಿ ಕೊಹ್ಲಿ ಆಕ್ರೋಶ: ಎಸ್‌ಆರ್‌ಎಚ್ ಇನಿಂಗ್ಸ್ ವೇಳೆ ಟ್ರಾವಿಸ್ ಹೆಡ್ 26 ರನ್ ಗಳಿಸಿ ರಾಸಿಖ್ ಸಲಾಮ್ ದಾರ್ ಅವರ ಯಾರ್ಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಮೈದಾನದಲ್ಲಿದ್ದ ವಿರಾಟ್ ಕೊಹ್ಲಿ, ಹೆಡ್  ಮುಂದೆಯೇ ಅತ್ಯಂತ ಆಕ್ರಮಣಕಾರಿಯಾಗಿ ಕಿರುಚಾಡಿ ಸಂಭ್ರಮಿಸಿದ್ದರು.

  • ಕೊಹ್ಲಿ ಸವಾಲು: ಆರ್‌ಸಿಬಿ ಬ್ಯಾಟಿಂಗ್ ಮಾಡುತ್ತಿದ್ದಾಗ ವೆಂಕಟೇಶ್ ಅಯ್ಯರ್ ಅವರು ಎಸ್‌ಆರ್‌ಎಚ್ ಸ್ಪಿನ್ನರ್ ಶಿವಾಂಗ್ ಕುಮಾರ್ ಓವರ್‌ನಲ್ಲಿ 23 ರನ್ ಚಚ್ಚಿದರು. ಈ ವೇಳೆ ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ಕೊಹ್ಲಿ, ಮಿಡ್-ವಿಕೆಟ್‌ನಲ್ಲಿದ್ದ ಟ್ರಾವಿಸ್ ಹೆಡ್‌ರನ್ನು ಕೆಣಕಿದರು. “ಬಾ ಇಲ್ಲಿ, ಬಂದು ಸ್ವಲ್ಪ ಆಫ್-ಸ್ಪಿನ್ ಬೌಲಿಂಗ್ ಮಾಡು” ಎಂದು ಹೆಡ್‌ಗೆ ಸವಾಲು ಹಾಕುತ್ತಾ ತಮಾಷೆ ಮಾಡಿದರು.
  • ಹೆಡ್ ತಿರುಗೇಟು: ಕೊಹ್ಲಿ ಸವಾಲು ಹಾಕಿದ ಕೆಲವೇ ನಿಮಿಷಗಳಲ್ಲಿ ಸಾಕಿಬ್ ಹುಸೇನ್ ಎಸೆತದಲ್ಲಿ ಕೇವಲ 15 ರನ್ ಗಳಿಸಿ ಔಟಾದರು. ಕೊಹ್ಲಿ ಪೆವಿಲಿಯನ್‌ಗೆ ಮರಳುವಾಗ ಹೆಡ್ ಬಿಡಲಿಲ್ಲ. “ಗೆಳೆಯಾ, ನಾನು ಬೌಲಿಂಗ್ ಮಾಡಲು ಬರುವ ಮೊದಲೇ ನೀನು ಔಟಾಗಿ ಹೋದೆ!” ಎಂದು ತಿರುಗೇಟು ನೀಡಿದರು. ಇದರಿಂದ ಕೊಹ್ಲಿ ತೀವ್ರ ಅಸಮಾಧಾನಗೊಂಡರು.

ಹಸ್ತಲಾಘವ ನಿರಾಕರಿಸಿದ ಕೊಹ್ಲಿ:

ಎಸ್‌ಆರ್‌ಎಚ್ ತಂಡ 55 ರನ್‌ಗಳ ಭರ್ಜರಿ ಜಯ ಸಾಧಿಸಿದ ನಂತರ ಉಭಯ ತಂಡಗಳ ಆಟಗಾರರು ಪರಸ್ಪರ ಶೇಕ್ ಹ್ಯಾಂಡ್  ಮಾಡುತ್ತಿದ್ದರು. ಈ ವೇಳೆ ಟ್ರಾವಿಸ್ ಹೆಡ್ ಕೊಹ್ಲಿ ಕಡೆಗೆ ಕೈ ಚಾಚಿದರು. ಆದರೆ ತೀವ್ರ ಕೋಪದಲ್ಲಿದ್ದ ವಿರಾಟ್ ಕೊಹ್ಲಿ, ಹೆಡ್ ಅವರತ್ತ ಕಣ್ಣೆತ್ತಿಯೂ ನೋಡದೆ ನೇರವಾಗಿ ಮುಂದೆ ಸಾಗಿದರು!

ಆದರೆ, ಅವರ ಹಿಂದೆಯೇ ಇದ್ದ ಎಸ್‌ಆರ್‌ಎಚ್ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಅಭಿಷೇಕ್ ಶರ್ಮಾ ಅವರಿಗೆ ಕೊಹ್ಲಿ ಅತ್ಯಂತ ಆತ್ಮೀಯವಾಗಿ ಹಸ್ತಲಾಘವ ಮಾಡಿ ಕೌತುಕ ಮೂಡಿಸಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಕ್ರೀಡಾ ಸ್ಫೂರ್ತಿ ಮರೆತ ವಿರಾಟ್ ಕೊಹ್ಲಿ:

ಕ್ರಿಕೆಟ್‌ನಲ್ಲಿ “ಮೈದಾನದ ಜಗಳ ಪಂದ್ಯದೊಂದಿಗೆ ಮುಗಿಯಬೇಕು” ಎಂಬ ಅಲಿಖಿತ ನಿಯಮವಿದೆ. ಪಂದ್ಯ ಮುಗಿದ ಮೇಲೆ ಹಸ್ತಲಾಘವ ಮಾಡುವುದು ಪರಸ್ಪರ ಗೌರವದ ಸಂಕೇತ. ಅದನ್ನು ನಿರಾಕರಿಸುವುದು ಕ್ರೀಡಾ ಸಂಸ್ಕೃತಿಗೆ ವಿರುದ್ಧವಾಗಿದೆ. ಇದೀಗ ದಿಗ್ಗಜ ಕ್ರಿಕೆಟಿಗ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, ಟ್ರಾವಿಸ್ ಹೆಡ್ ಶೇಕ್ ಹ್ಯಾಂಡ್ ನೀಡದೇ ಕ್ರೀಡಾ ಸ್ಫೂರ್ತಿಯನ್ನೇ ಮರೆತಿದ್ದಾರೆ.

ಅದರಲ್ಲೂ 2023ರ ಐಪಿಎಲ್‌ನಲ್ಲಿ ಲಕ್ನೋ ವಿರುದ್ಧದ ರೋಚಕ ಪಂದ್ಯ ಮುಗಿದ ಬಳಿಕ ಗೌತಮ್ ಗಂಭೀರ್ ಹಾಗೂ ನವೀನ್ ಉಲ್ ಹಕ್ ಅವರೊಂದಿಗೆ ವಿರಾಟ್ ಕೊಹ್ಲಿ ಮೈದಾನದಲ್ಲೇ ಮಾತಿನ ಚಕಮಕಿ ನಡೆಸಿದ್ದರು. ಆ ಪಂದ್ಯ ಗೆದ್ದು ಡ್ರೆಸ್ಸಿಂಗ್ ರೂಮ್‌ಗೆ ಬಂದ ನಂತರ ಕೊಹ್ಲಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು, “ನೀವು ಬೇರೆಯವರಿಗೆ ಕೊಡಲು ಸಿದ್ಧರಿದ್ದರೆ, ಅದನ್ನು ಅವರಿಂದ ತಿರುಗಿಸಿ ಇಸ್ಕೊಳ್ಳುವುದಕ್ಕೂ ಸಿದ್ಧರಾಗಿರಬೇಕು. ಇಲ್ಲದಿದ್ದರೆ ಕೊಡಲು ಹೋಗಬೇಡಿ” ಎಂದಿದ್ದರು. ಇದೇ ಡೈಲಾಗ್ ವಿರಾಟ್ ಕೊಹ್ಲಿಗೂ ಅನ್ವಯಿಸುತ್ತದೆ ಎಂಬುದು ಕ್ರಿಕೆಟ್ ಪ್ರೇಮಿಗಳ ಅಭಿಪ್ರಾಯ.

ಗೆದ್ದು ಬೀಗಿದ ಎಸ್​ಆರ್​ಹೆಚ್:

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 255 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ 20 ಓವರ್​ಗಳಲ್ಲಿ 200 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಸನ್​ರೈಸರ್ಸ್ ಹೈದರಾಬಾದ್ ತಂಡ 55 ರನ್​ಗಳ ಜಯ ಸಾಧಿಸಿದೆ.

Source link

Leave a Reply

Your email address will not be published. Required fields are marked *