Headlines

ಮುಂಗಾರು ಮಳೆ ಮುನ್ನವೇ ಈ ಲೇಔಟ್ ನಿವಾಸಿಗಳಿಗೆ ನಡುಕ ಶುರು: ವರ್ಷವಾದ್ರು ಮುಗಿಯದ ರಾಜಕಾಲುವೆ ಕಾಮಗಾರಿ – Kannada News | Sai Layout Residents Fear Monsoon as Rajakaluve Work Remains Incomplete Even After a Year

ಸಾಯಿ ಬಡಾವಣೆ, ಕಾಮಗಾರಿImage Credit source: tv9 kannada

ಬೆಂಗಳೂರು, ಮೇ 14: ರಾಜಧಾನಿಯಲ್ಲಿ ಮಳೆ ಸುರಿದರೆ ಸಾಯಿ ಬಡಾವಣೆಯ (Sai Layout) ನಿವಾಸಿಗಳ ಕಣ್ಣಲ್ಲಿ ನೀರು ಬರುತ್ತದೆ. ಮಳೆಗಾಲ (rain) ಬಂತು ಅಂದರೆ ಬಡಾವಣೆಯಲ್ಲಿ ನೀರು ತುಂಬಿ ನೂರಾರು ಮನೆಗಳಿಗೆ ನುಗ್ಗುತ್ತದೆ. ಬದುಕು ಮೂರಾಬಟ್ಟೆಯಾಗುತ್ತದೆ. ಅಧಿಕಾರಿಗಳು ಮಾತ್ರ ಹಲವು ದಿನಗಳಿಂದ ಕಾಮಗಾರಿ ಚಾಲ್ತಿಯಲ್ಲಿದೆ ಎಂದು ಉಡಾಫೆ ಉತ್ತರ ನೀಡುತ್ತಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಬಂದರೆ ಅವಾಂತರ ಸೃಷ್ಟಿಯಾಗುವ ಆತಂಕ ಎದುರಾಗಿದೆ.

ಕೆರೆಯಂತಾಗುವ ಬಡಾವಣೆ: ಜನರು ಪರದಾಟ

ಸುಮಾರು 500 ಮನೆಗಳು ಹಾಗೂ 1500ಕ್ಕೂ ಹೆಚ್ಚು ಜನವಸತಿ ಇರುವ ಈ ಪ್ರತಿಷ್ಠಿತ ಬಡಾವಣೆ, ಸಣ್ಣ ಮಳೆ ಬಂದರೂ ಕೆರೆಯಂತಾಗುತ್ತದೆ. ಮಳೆ ನೀರು ಮನೆಗಳಿಗೆ ನುಗ್ಗಿ ಸಂಕಷ್ಟ ಅನುಭವಿಸುವುದು ಇಲ್ಲಿನ ನಿವಾಸಿಗಳಿಗೆ ಅಭ್ಯಾಸವಾಗಿಬಿಟ್ಟಿದೆ. ಕಳೆದ ಬಾರಿ ಜನರು ಮನೆಯ ಗೋಡೆ ಏರಿ, ದಿನಪೂರ್ತಿ ನೀರಿನಲ್ಲೇ ಕಳೆಯಬೇಕಾದ ಪರಿಸ್ಥಿತಿ ಬಂದಿತ್ತು. ಈ ಬಾರಿಯೂ ಮುಂಗಾರು ಮಳೆಗೆ ಮುನ್ನ ಕಾಮಗಾರಿ ಪೂರ್ಣಗೊಳ್ಳದಿದ್ದರೆ, ಮತ್ತೆ ಗಂಟುಮೂಟೆ ಕಟ್ಟಿಕೊಂಡು ಮನೆ ಬಿಡಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಸ್ಥಳೀಯರು ಕಣ್ಣೀರು ಹಾಕುತ್ತಿದ್ದಾರೆ.

ಆಮೆಗತಿಯಲ್ಲಿ ಸಾಗಿದ ಕಾಮಗಾರಿ

ರೈಲ್ವೆ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಎರಡು ವೆಂಟ್ ಕಾಮಗಾರಿಗಳ ಪೈಕಿ ಒಂದು ಮಾತ್ರ ಪೂರ್ಣಗೊಂಡಿದೆ. ಮತ್ತೊಂದು ವೆಂಟ್ ಕಾಮಗಾರಿ ಕೇವಲ ಶೇ. 60ರಷ್ಟು ಮಾತ್ರ ಮುಗಿದಿದ್ದು, ಮುಂಗಾರು ಆರಂಭದೊಳಗೆ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಬಿಬಿಎಂಪಿ ಅಧಿಕಾರಿಗಳು ಹೊಸ ರಾಜಕಾಲುವೆಗಳನ್ನು ನಿರ್ಮಿಸಿದ್ದರೂ, ನೀರು ಸರಾಗವಾಗಿ ಹರಿದು ಹೋಗಲು ರೈಲ್ವೆ ವೆಂಟ್ ಕಾಮಗಾರಿ ಪೂರ್ಣಗೊಳ್ಳುವುದು ಅತ್ಯಗತ್ಯವಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ವರ್ಷದಿಂದ ಕಾಮಗಾರಿ ನಡೆಯುತ್ತಿದೆ ಎಂದು ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ಪ್ರಕಾಶ್ ಹಾಗೂ ಸೋನಾ ಬಾಯ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಪ್ರತಿ ಮಳೆಗಾಲದಲ್ಲಿ ನಾವು ಪ್ರಾಣ ಕೈಯಲ್ಲಿ ಹಿಡಿದು ಬದುಕಬೇಕಾಗಿದೆ ಎಂಬುದು ಇವರ ಅಳಲಾಗಿದೆ.

ಇದನ್ನೂ ಓದಿ: ಹವಾಮಾನ ವರದಿ: ವಾರಾಂತ್ಯಕ್ಕೆ ಬೆಂಗಳೂರಲ್ಲಿ ವರುಣನ ಅಬ್ಬರ, ಮೇ 17ರ ವರೆಗೆ ರಾಜ್ಯದ ವಿವಿಧೆಡೆ ಮಳೆ

ಒಟ್ಟಿನಲ್ಲಿ, ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಸಮರೋಪಾದಿಯಲ್ಲಿ ಕೆಲಸ ಮುಗಿಸಿ, ಸಾಯಿ ಲೇಔಟ್ ನಿವಾಸಿಗಳನ್ನು ಈ ಬಾರಿಯ ಮಳೆಗಾಲದ ಅವಾಂತರದಿಂದ ಪಾರು ಮಾಡಬೇಕಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *