ಚೆನ್ನೈ, ಜೂನ್ 19: ಕರ್ನಾಟಕ ಸರ್ಕಾರವು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು(Mekedatu) ಅಣೆಕಟ್ಟು ಯೋಜನೆಗೆ ತಮಿಳುನಾಡು ರಾಜ್ಯ ತೀವ್ರ ವಿರೋಧ ವ್ಯಕ್ತಪಡಿಸಿದೆ. ಜೂನ್ 19ರ ಶುಕ್ರವಾರದಂದು ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮಂಡಿಸಿದ ಮೇಕೆದಾಟು ವಿರೋಧಿ ನಿರ್ಣಯವನ್ನು ಸದನವು ಸರ್ವಾನುಮತದಿಂದ ಅಂಗೀಕರಿಸಿದೆ.
ಈ ಯೋಜನೆಗೆ ಯಾವುದೇ ರೀತಿಯ ತಾಂತ್ರಿಕ ಅಥವಾ ಪರಿಸರ ಇಲಾಖೆಯ ಅನುಮತಿಯನ್ನು ನೀಡಬಾರದು ಎಂದು ತಮಿಳುನಾಡು ಸರ್ಕಾರವು ಈ ನಿರ್ಣಯದ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ತಮಿಳುನಾಡು ಸರ್ಕಾರದ ವಾದವೇನು?
ನ್ಯಾಯಾಲಯದ ಆದೇಶಗಳ ಉಲ್ಲಂಘನೆ: ಕಾವೇರಿ ಜಲ ವಿವಾದ ನ್ಯಾಯಮಂಡಳಿಯ 2007ರ ಅಂತಿಮ ಆದೇಶ ಹಾಗೂ 2018ರ ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸದೇ ಕರ್ನಾಟಕವು ಏಕಪಕ್ಷೀಯವಾಗಿ ಅಣೆಕಟ್ಟು ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ವಿಜಯ್ ಆರೋಪಿಸಿದ್ದಾರೆ.
ಇತರ ರಾಜ್ಯಗಳ ಒಪ್ಪಿಗೆಯಿಲ್ಲ: ಕಾವೇರಿ ನದಿ ನೀರಿನ ಜಲಾನಯನ ಪ್ರದೇಶವು ಈಗಾಗಲೇ ನೀರಿನ ಕೊರತೆಯನ್ನು ಎದುರಿಸುತ್ತಿದ್ದು, ಲಭ್ಯವಿರುವ ನೀರನ್ನು ರಾಜ್ಯಗಳ ನಡುವೆ ಹಂಚಿಕೆ ಮಾಡಲಾಗಿದೆ. ಹೀಗಾಗಿ ಇತರ ಜಲಾನಯನ ರಾಜ್ಯಗಳ ಒಪ್ಪಿಗೆಯಿಲ್ಲದೆ ಕರ್ನಾಟಕ ಯಾವುದೇ ಹೊಸ ಯೋಜನೆ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಮತ್ತಷ್ಟು ಓದಿ: ಮೇಕೆದಾಟು ವಿವಾದ: ಮತ್ತೆ ತಮಿಳುನಾಡು ಕ್ಯಾತೆ; ಮಾತುಕತೆಗೆ ಸಿದ್ದ ಎಂದ ಕರ್ನಾಟಕ ಸಿಎಂ ಡಿಕೆಶಿ
ಡಿಪಿಆರ್ ಪರಿಶೀಲಿಸದಂತೆ ಆಗ್ರಹ: ಮೇಕೆದಾಟು ಯೋಜನೆಗಾಗಿ ಕರ್ನಾಟಕ ಸಲ್ಲಿಸಿರುವ ವಿವರವಾದ ಯೋಜನಾ ವರದಿಯನ್ನು (DPR) ಕೇಂದ್ರ ಜಲ ಆಯೋಗವು ಯಾವುದೇ ಕಾರಣಕ್ಕೂ ಪರಿಶೀಲಿಸಬಾರದು ಎಂದು ತಮಿಳುನಾಡು ಒತ್ತಾಯಿಸಿದೆ.
ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತಮಿಳುನಾಡಿನ ಆಡಳಿತ ಮತ್ತು ವಿರೋಧ ಪಕ್ಷಗಳು ಈ ವಿಷಯದಲ್ಲಿ ಒಟ್ಟಾಗಿ ನಿಂತಿವೆ.
ಡಿಎಂಕೆ ಬೆಂಬಲ: ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಸರ್ಕಾರದ ನಿರ್ಣಯಕ್ಕೆ ಡಿಎಂಕೆ (DMK) ಪಕ್ಷದ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ತಮಿಳುನಾಡಿನ ಕಾವೇರಿ ಹಕ್ಕನ್ನು ಕಸಿದುಕೊಳ್ಳಲು ಯಾರಿಗೂ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಎಐಎಡಿಎಂಕೆ ಖಂಡನೆ: ಎಐಎಡಿಎಂಕೆ (AIADMK) ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮಾತನಾಡಿ, ಕರ್ನಾಟಕ ಸರ್ಕಾರವು ಮೇಕೆದಾಟು ಯೋಜನೆಗೆ ಏಕಪಕ್ಷೀಯವಾಗಿ ಹಣ ಮೀಸಲಿಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು ಹಾಗೂ ಈ ಹಿಂದೆ ತಮ್ಮ ಸರ್ಕಾರವೂ ಈ ಯೋಜನೆಯನ್ನು ಕಾನೂನಾತ್ಮಕವಾಗಿ ತಡೆದಿತ್ತು ಎಂದರು.
ಮುಂದಿನ ನಡೆ: ಪ್ರಧಾನಿ ಭೇಟಿಗೆ ಕರೆ
ಮುಖ್ಯಮಂತ್ರಿ ವಿಜಯ್ ಅವರು ತಮಿಳುನಾಡಿನ ಎಲ್ಲಾ ಪಕ್ಷಗಳ ಶಾಸಕರು ಮತ್ತು ಸಂಸದರನ್ನೊಳಗೊಂಡ ಒಂದು ಜಂಟಿ ನಿಯೋಗವನ್ನು ನವದೆಹಲಿಗೆ ಕರೆದೊಯ್ದು, ಪ್ರಧಾನಮಂತ್ರಿಯವರನ್ನು ಖುದ್ದಾಗಿ ಭೇಟಿ ಮಾಡಿ ರಾಜ್ಯದ ಬೇಡಿಕೆಯನ್ನು ಸಾಮೂಹಿಕವಾಗಿ ಮಂಡಿಸಬೇಕು ಎಂದು ಸದನದಲ್ಲಿ ಕರೆ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ