ಮೈಸೂರು, ಜೂನ್ 21: ಸಾಂಸ್ಕೃತಿಕ ನಗರಿ ಮೈಸೂರಿಗೆ (mysuru) ಅಕ್ರಮ ಬಾಂಗ್ಲಾ ವಲಸಿಗರು (Illegal Bangladeshi Immigrants) ಬಂದಿಳಿದಿದ್ದಾರಾ ಎಂಬ ಅನುಮಾನುಗಳು ಮೂಡಿವೆ. ಏಕೆಂದರೆ ಹೌರಾ ಎಕ್ಸಪ್ರೆಸ್ ರೈಲಿನ ಮೂಲಕ ಮೈಸೂರಿಗೆ 40ಕ್ಕೂ ಅಧಿಕ ಶಂಕಿತ ಬಾಂಗ್ಲಾ ವಲಸಿಗರು ಬಂದಿರುವ ಆರೋಪ ಕೇಳಿಬಂದಿದ್ದು, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ವಲಸಿಗರನ್ನು ಹಿಡಿದಿದ್ದಾರೆ. ಹೀಗಾಗಿ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಇಂದು ಹೈಡ್ರಾಮಾವೇ ನಡೆದಿದೆ.
ಮುಖ್ಯಾಂಶಗಳು
- ಮೈಸೂರು ರೈಲ್ವೆ ನಿಲ್ದಾಣದಲ್ಲಿ ಬಿಗುವಿನ ವಾತಾವರಣ
- ಬಾಂಗ್ಲಾ ವಲಸಿಗರನ್ನು ಹಿಡಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು
- ಬಾಂಗ್ಲಾ ವಲಸಿಗರು ಮೈಸೂರಿಗೆ ಬರುತ್ತಿದ್ದಾರೆ ಎಂದ ಮಾಜಿ ಶಾಸಕ
40ಕ್ಕೂ ಅಧಿಕ ಶಂಕಿತ ಬಾಂಗ್ಲಾ ವಲಸಿಗರು ಬಂದಿರುವ ಆರೋಪ
ಹೌದು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೈಡ್ರಾಮಾವೇ ನಡೆದುಹೋಗಿದೆ. ವಾರಕ್ಕೊಮ್ಮೆ ಕೋಲ್ಕತ್ತಾದಿಂದ ಮೈಸೂರಿಗೆ ಬರುವ ‘ಹೌರಾ ಎಕ್ಸ್ಪ್ರೆಸ್’ ರೈಲು ಇಂದು ಬೆಳಗ್ಗೆ ಆಗಮಿಸುತ್ತಿದ್ದಂತೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೆ ಕಾರಣ ಆ ರೈಲಿನಲ್ಲಿ ಬಂದ ಕಾರ್ಮಿಕರ ಗುಂಪು. ಅವರ ಚಲನವಲನದಿಂದ ಸಂಶಯಗೊಂಡ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಿಲ್ದಾಣದಲ್ಲೇ ತಡೆದು ನಿಲ್ಲಿಸಿ ತಪಾಸಣೆ ಮಾಡಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮೆಗಾ ಡಿಪೋರ್ಟೇಷನ್ ಆಪರೇಷನ್: ಬರೋಬ್ಬರಿ 272 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು
ಅವರ ಗುರುತಿನ ಚೀಟಿ ಪರಿಶೀಲಿಸಿದಾಗ, ಬಹುತೇಕರ ಬಳಿ ಪಶ್ಚಿಮ ಬಂಗಾಳದ ವಿಳಾಸವಿರುವ ಆಧಾರ್ ಹಾಗೂ ಐಡಿ ಕಾರ್ಡ್ಗಳಿದ್ದವು. ಮೇಲ್ನೋಟಕ್ಕೆ ಇವೆಲ್ಲವೂ ನಕಲಿ ಎನಿಸುವಂತಿತ್ತು, ಹೀಗಾಗಿ ಇವರೆಲ್ಲಾ ಬಾಂಗ್ಲಾ ದೇಶದ ಅಕ್ರಮ ವಲಸಿಗರು ಎಂಬುದು ಅವರ ಆರೋಪ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ಎಲ್ಲಾ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದರು.
ಬೆಳಿಗ್ಗೆ ರೈಲು ಇಳಿದವರು ನಗರದಲ್ಲಿ ತಪ್ಪಿಸಿಕೊಂಡು ಓಡಿದ್ದರು. ಅವರನ್ನೆಲ್ಲಾ ಬೆನ್ನಟ್ಟಿದ ಹಿಂದೂ ಕಾರ್ಯಕರ್ತರು ಹಿಡಿದು ತಂದು ವಿಚಾರಣೆ ನಡೆಸಿದಾಗ ಒಬ್ಬೊಬ್ಬರು ಒಂದೊಂದು ರೀತಿಯ ಗೊಂದಲದ ಹೇಳಿಕೆಗಳನ್ನು ನೀಡಿದ್ದಾರೆ. ಇವರೆಲ್ಲರು ಮೈಸೂರಿನಿಂದ ಕೊಡಗು, ಪಿರಿಯಾಪಟ್ಟಣ ಹಾಗೂ ಕೇರಳದ ವಿವಿಧ ಭಾಗಗಳಿಗೆ ಕೆಲಸದ ನೆಪದಲ್ಲಿ ತೆರಳಲು ಸ್ಕೆಚ್ ಹಾಕಿದ್ದರು ಎನ್ನಲಾಗಿದೆ. ಹೀಗಾಗಿ ಇದು ರಾಜ್ಯ ಸರ್ಕಾರದ ಭದ್ರತಾ ವೈಫಲ್ಯ ಎಂಬ ಆಕ್ರೋಶ ವ್ಯಕ್ತವಾಗಿದೆ.
ಅಕ್ರಮ ಬಾಂಗ್ಲಾ ವಲಸಿಗರು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ: ಮಾಜಿ ಶಾಸಕ ಎಲ್ ನಾಗೇಂದ್ರ
ಈ ಕುರಿತಾಗಿ ಮಾಜಿ ಶಾಸಕ ಎಲ್ ನಾಗೇಂದ್ರ ಪ್ರತಿಕ್ರಿಯಿಸಿದ್ದು, ಪ್ರತಿ ಭಾನುವಾರ ಪಶ್ಚಿಮ ಬಂಗಾಳದಿಂದ ಬಾಂಗ್ಲಾ ವಲಸಿಗರು ಮೈಸೂರಿಗೆ ಬರುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ಸಿಎಂ ಆದ ಬಳಿಕ ಅಕ್ರಮ ಬಾಂಗ್ಲಾ ವಲಸಿಗರು ಬೇರೆ ಬೇರೆ ರಾಜ್ಯಕ್ಕೆ ವಲಸೆ ಹೋಗುತ್ತಿದ್ದಾರೆ. ಮೈಸೂರಲ್ಲೂ ಬಾಂಗ್ಲಾ ವಲಸಿಗರು ಆಗಮಿಸಿ ಗೌಸಿಯ ನಗರ, ಪಿರಿಯಾಪಟ್ಟಣ, ಕೊಡಗು ಭಾಗಕ್ಕೆ ತೆರಳುತ್ತಿದ್ದಾರೆ. ನಕಲಿ ಆಧಾರ್ ಕಾರ್ಡ್ ತೆಗೆದುಕೊಂಡು ಅಕ್ರಮ ವಲಸಿಗರು ಮೈಸೂರಿಗೆ ಬರುತ್ತಿದ್ದಾರೆ. ಇವರ ಮೇಲೆ ಸರ್ಕಾರ ಹದ್ದಿನ ಕಣ್ಣಿಡಬೇಕು. ಗೃಹ ಮಂತ್ರಿಗಳು ಆರ್ಎಸ್ಎಸ್ ವಿಚಾರ ಬಿಟ್ಟು ಬೇರೇನೂ ಮಾಡುತ್ತಿಲ್ಲ. ಬ್ರದರ್ ನಿಮ್ಮ ಬ್ರದರ್ಸ್ ಬರುತ್ತಿದ್ದಾರೆ, ರಾಜ್ಯದಲ್ಲಿ ದಂಗೆ ಎದ್ದರೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗುತ್ತದೆ. ಕೂಡಲೇ ಅಕ್ರಮ ಬಾಂಗ್ಲಾ ವಲಸಿಗರನ್ನ ತಡೆಯಲು ಕ್ರಮಕೈಗೊಳ್ಳಿ ಎಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಭೀತಿ?!: ಬಸ್ ನಿಲ್ದಾಣದಿಂದ 20ಕ್ಕೂ ಹೆಚ್ಚು ಜನರನ್ನ ಠಾಣೆಗೆ ತಂದ ಪೊಲೀಸರು
ಒಟ್ಟಿನಲ್ಲಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಶಂಕಿತ ಬಾಂಗ್ಲಾ ಅಕ್ರಮ ವಲಸಿಗರು ಆಗಮಿಸಿರುವುದು ಸದ್ಯ ಸಾರ್ವಜನಿಕರಲ್ಲಿ ಹಾಗೂ ಭದ್ರತಾ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ. ಪೊಲೀಸರ ತನಿಖೆಯ ಬಳಿಕವಷ್ಟೇ ಇವರು ನಿಜವಾಗಿಯೂ ಬಾಂಗ್ಲಾದೇಶದವರಾ ಅಥವಾ ಪಶ್ಚಿಮ ಬಂಗಾಳದ ಕಾರ್ಮಿಕರಾ ಎಂಬ ಸತ್ಯ ಹೊರಬರಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.