Headlines

ಮೈಸೂರು ಉದ್ಯಮಿಯಿಂದ 1 ಕೋಟಿ ರೂ. ಲಂಚ ಪಡೆದ ಜಿಎಸ್‌ಟಿ ಗುಪ್ತಚರ ಅಧಿಕಾರಿ! – Kannada News | CBI Registers Case Against Bengaluru GST Officer for Rs 1 Crore Bribe

ಮೈಸೂರು ಉದ್ಯಮಿಯಿಂದ 1 ಕೋಟಿ ರೂ. ಲಂಚ ಪಡೆದ ಜಿಎಸ್‌ಟಿ ಗುಪ್ತಚರ ಅಧಿಕಾರಿ

ಮೈಸೂರು, ಜುಲೈ 18: ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್‌ಟಿ ಇಂಟೆಲಿಜೆನ್ಸ್ (DGGI) ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಭ್ರಷ್ಟಾಚಾರದ ಪ್ರಕರಣ ದಾಖಲಿಸಿದೆ. ಈ ಅಧಿಕಾರಿ 21 ಕೋಟಿ ರೂಪಾಯಿ ಮೌಲ್ಯದ ಜಿಎಸ್‌ಟಿ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಮೈಸೂರಿನ ಉದ್ಯಮಿಯೊಬ್ಬರಿಂದ ಬರೋಬ್ಬರಿ 1 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ನಡೆದಿದ್ದೇನು?

ಬೆಂಗಳೂರಿನ ಕೇಂದ್ರ ಜಿಎಸ್‌ಟಿ ಘಟಕದ ಸೀನಿಯರ್ ಇಂಟೆಲಿಜೆನ್ಸ್ ಆಫೀಸರ್ ಪ್ರವೀಣ್ ಕುಮಾರ್ ಯಾದವ್ ಈ ಪ್ರಕರಣದ ಮುಖ್ಯ ಆರೋಪಿಯಾಗಿದ್ದು, ಸದ್ಯ ಅವರನ್ನು ಅಮಾನತುಗೊಳಿಸಲಾಗಿದೆ. ಇವರು ಮೈಸೂರಿನ ಗುಜರಿ (Scrap) ಉದ್ಯಮಿ ಮೊಹಮ್ಮದ್ ಕಮ್ರಾನ್ (24) ಎಂಬುವವರಿಂದ 2025ರಲ್ಲಿ 1 ಕೋಟಿ ರೂ. ಲಂಚ ಪಡೆದಿದ್ದರು ಎನ್ನಲಾಗಿದೆ. ಎಫ್‌ಐಆರ್ ಪ್ರಕಾರ, 2025ರ ಸೆಪ್ಟೆಂಬರ್ 10ರಂದು ಉದ್ಯಮಿ ಕಮ್ರಾನ್ ಮನೆಯ ಮೇಲೆ ಜಿಎಸ್‌ಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಈ ವೇಳೆ ಪ್ರವೀಣ್ ಕುಮಾರ್ ಯಾದವ್ ಪ್ರಕರಣದಿಂದ ಪಾರು ಮಾಡಲು 1 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದೇ ದಿನ ರಾತ್ರಿ 9:30 ರ ಸುಮಾರಿಗೆ ವಾಟ್ಸಾಪ್ ಮೂಲಕ ಲೊಕೇಶನ್ ಕಳುಹಿಸಿ, ಮೈಸೂರಿನ ಪಾರ್ಕ್‌ಲೇನ್ ಹೋಟೆಲ್ ಬಳಿ ಹಣ ತರುವಂತೆ ಸೂಚಿಸಿದ್ದರು. ಕಮ್ರಾನ್ ತನ್ನ ಸ್ನೇಹಿತನೊಂದಿಗೆ ಹೋಗಿ 1 ಕೋಟಿ ರೂ. ನಗದು ಇದ್ದ ಬಾಕ್ಸ್ ಅನ್ನು ಅಧಿಕಾರಿಗೆ ಹಸ್ತಾಂತರಿಸಿದ್ದರು. ಆದರೆ, ಮರುದಿನವೇ ಪ್ರವೀಣ್ ಯಾದವ್ ಮತ್ತೊಮ್ಮೆ ವಾಟ್ಸಾಪ್ ಕರೆ ಮಾಡಿ, ಕೇಸ್ ಕ್ಲೋಸ್ ಮಾಡಲು ಹೆಚ್ಚುವರಿಯಾಗಿ 4 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ಕಮ್ರಾನ್ ದೂರಿನಲ್ಲಿ ತಿಳಿಸಿದ್ದಾರೆ.

ಕಳೆದ ವಾರ FIR ದಾಖಲು

ಈ ಲಂಚದ ಪ್ರಕರಣದ ಬಗ್ಗೆ ಡಿಜಿಜಿಐ ನಡೆಸಿದ ಆಂತರಿಕ ಪ್ರಾಥಮಿಕ ತನಿಖೆಯಲ್ಲಿ ಪ್ರವೀಣ್ ಯಾದವ್ ಉದ್ಯಮಿ ಜೊತೆ ಸಂಪರ್ಕದಲ್ಲಿದ್ದು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ಮುಚ್ಚಿಟ್ಟಿರುವುದು ಸಾಬೀತಾಗಿತ್ತು. ಹೀಗಾಗಿ ಅಕ್ಟೋಬರ್ 2025 ರಲ್ಲೇ ಸಿಬಿಐಗೆ ದೂರು ನೀಡಲಾಗಿತ್ತು. ಆದರೆ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆ ನಡೆಸಲು ಕರ್ನಾಟಕ ಸರ್ಕಾರ 2026ರ ಮಾರ್ಚ್ 6 ರಂದು ಮತ್ತು ಕೇಂದ್ರ ಸರ್ಕಾರ ಜೂನ್ 8 ರಂದು ಅಧಿಕೃತ ಒಪ್ಪಿಗೆ ನೀಡಿದ ನಂತರ ಕಳೆದ ವಾರ ಸಿಬಿಐ ಈ ಎಫ್‌ಐಆರ್ ದಾಖಲಿಸಿದೆ.

ಮತ್ತೊಂದೆಡೆ, ಸುಳ್ಳು ಇನ್‌ವಾಯ್ಸ್‌ಗಳನ್ನು ಸೃಷ್ಟಿಸಿ 21 ಕೋಟಿ ರೂ. ಜಿಎಸ್‌ಟಿ ವಂಚಿಸಿದ ಆರೋಪದ ಮೇಲೆ 2025 ಸೆಪ್ಟೆಂಬರ್ 16 ರಂದು ಉದ್ಯಮಿ ಕಮ್ರಾನ್‌ನನ್ನು ಬಂಧಿಸಲಾಗಿತ್ತು. ತನ್ನ ಬಂಧನ ಕಾನೂನುಬಾಹಿರ ಎಂದು ಕಮ್ರಾನ್ ಹೈಕೋರ್ಟ್ ಮೆಟ್ಟಿಲೇರಿದ್ದರಾದರೂ, ಈ ವರ್ಷದ ಜುಲೈ 7 ರಂದು ಕರ್ನಾಟಕ ಹೈಕೋರ್ಟ್ ಆತನ ಬಂಧನ ಸರಿ ಎಂದು ಆದೇಶಿಸಿದೆ. ಹೈಕೋರ್ಟ್ ತೀರ್ಪು ಬಂದ ಮರುದಿನವೇ (ಜುಲೈ 8) ಸಿಬಿಐ ಭ್ರಷ್ಟ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *